ಹೋರಿ ಬೆದರಿಸುವ ಸ್ಪರ್ಧೆ: ಶಾಸಕ ರೇಣುಗೆ ಗಾಯ
Team Udayavani, Nov 1, 2019, 10:13 PM IST
ಹೊನ್ನಾಳಿ:ದೀಪಾವಳಿ ಅಂಗವಾಗಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶುಕ್ರವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಗಾಯಗೊಂಡಿದ್ದಾರೆ.
ಹೋರಿ ಬೆದರಿಸುವ ಸ್ಪರ್ಧೆ ಉದ್ಘಾಟನೆಗೆ ದೊಡ್ಡೇರಿಗೆ ತೆರಳಿದ ರೇಣುಕಾಚಾರ್ಯ ಅವರನ್ನು ಗ್ರಾಮದ ದ್ವಾರ ಬಾಗಿಲಿನಿಂದ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ವೇದಿಕೆ ಬಳಿ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ಹೋರಿಯೊಂದು ಗುಂಪಿನತ್ತ ನುಗ್ಗಿದ್ದು, ಜನ ದಿಕ್ಕಾಪಾಲಾಗಿದ್ದಾರೆ. ಆಗ ರೇಣುಕಾಚಾರ್ಯ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅವರ ಎಡ ತೋಳು ಹಾಗೂ ಕಾಲಿಗೆ ಗಾಯಗಳಾಗಿವೆ. ಇದಾದ ನಂತರ ಶಾಸಕರು ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಚಿಕಿತ್ಸೆ ಪಡೆದು, ಮನೆಯಲ್ಲಿ ವಿಶ್ರಾಂತಿ ಪಡೆದರು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಶಿವು ಹುಡೇದ್ ಹಾಗೂ ಕೆಲ ಬಿಜೆಪಿ ಕಾರ್ಯಕರ್ತರಿಗೂ ಸಣ್ಣಪುಟ್ಟ ಗಾಯಗಳಾಗಿವೆ.