ಪ್ರವೇಶ ದ್ವಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ
Team Udayavani, Feb 24, 2021, 5:04 PM IST
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಿಂದ ಬೆಣ್ಣೆ ನಗರಿ ದಾವಣಗೆರೆಗೆ ಪ್ರವೇಶಿಸುವಾಗ ಸುಂದರ ಪ್ರವೇಶ ದ್ವಾರವಿಲ್ಲ. ಕೂಡಲೇ ಸುಂದರ ವಿನ್ಯಾಸ ರಚಿಸಿ ಒಂದು ವಾರದೊಳಗೆ ಸಮಗ್ರ ಕ್ರಿಯಾ ಯೋಜನೆ ತಯಾರಿಸಿಕೊಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಚಿಂದೋಡಿ ಲೀಲಾ ರಂಗಮಂಟಪ ಬಳಿ ನಿರ್ಮಿಸಲು ಉದ್ದೇಶಿರುವ ಪ್ರವೇಶ ದ್ವಾರಕ್ಕೆ ಅತ್ಯುತ್ತಮವಾದ ವಿನ್ಯಾಸ ತಯಾರಿಸಿ ಕೊಟ್ಟರೆ ಅದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಮಂಜೂರಿ ಮಾಡಿಸಿಕೊಂಡು ಬರುತ್ತೇನೆ ಎಂದರು.
ಚಿತ್ರದುರ್ಗದಿಂದ ಹರಿಹರವರೆಗಿನ ರಾಷೀrಯ ಹೆದ್ದಾರಿ ಷಟ³ಥ ನಿರ್ಮಾಣ ಕಾಮಗಾರಿಯನ್ನು ಮೂರು ಕೆಳಸೇತುವೆ ಹೊರತುಪಡಿಸಿ ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಮುಂದಿನ 12ತಿಂಗಳಲ್ಲಿ ಬಾಕಿ ಉಳಿಯುವ ಮೂರು ಕೆಳಸೇತುವೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಸೂರ್ಯವಂಶಿ ಇದೇ ಸಂದರ್ಭದಲ್ಲಿ ಸಂಸದರಿಗೆ ಭರವಸೆ ನೀಡಿದರು.
ಇನ್ನೂಎಷ್ಟು ಜನ ಸಾಯಬೇಕು?: ವಿದ್ಯಾನಗರ ಬಳಿ ಈ ಮೊದಲಿನಿಂದಲೂ ಸರ್ವಿಸ್ ರಸ್ತೆ ಸಣ್ಣದಿದೆ. 10 ವರ್ಷದಿಂದಲೂ ಸರ್ವಿಸ್ ರಸ್ತೆ ಅಗಲ ಮಾಡಲು ಹೇಳುತ್ತಲೇ ಬಂದಿದ್ದೇನೆ. ಈಗ ಆರು ಪಥ ಮಾಡಿದರೂ ಸರ್ವಿಸ್ ರಸ್ತೆ ಅಗಲ ಮಾಡಿಲ್ಲ. ಅಲ್ಲಿ ಹೈಟೆಂಷನ್ ಲೈನ್ ಇದೆ. ಎರಡೂ¾ರು ಕಲ್ಯಾಣ ಮಂಟಪಗಳಿದ್ದು ಸಾವಿರಾರು ಜನ ಸೇರುತ್ತಾರೆ. ಅದು ಅಪಘಾತ ವಲಯವಾಗಿ ಸಹ ಮಾರ್ಪಟ್ಟಿದೆ. ಇದನ್ನು ಮಾಡಿಕೊಡಲು ಇನ್ನೂ ಎಷ್ಟು ಜನ ಸಾಯಬೇಕು ಎಂದು ಸಂಸದರು, ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಸೂರ್ಯವಂಶಿ, ತಕ್ಷಣ ಸರಿಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಮಾಡದಿದ್ದರೆ ಆ ಕಾಮಗಾರಿಯನ್ನಷ್ಟೇ ಬೇರೆ ಗುತ್ತಿಗೆದಾರರಿಗೆ ವಹಿಸಿಕೊಟ್ಟು ಅಕ್ಟೋಬರ್ ತಿಂಗಳೊಳಗೆ ಸರ್ವಿಸ್ ರಸ್ತೆ ಅಗಲ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.
ಉದಾಸೀನ ಸರಿಯಲ್ಲ: ಬನಶಂಕರಿ ಬಡಾವಣೆಗೆ ಬಳಿ ರಸ್ತೆ ಅಗಲಿಕರಣಕ್ಕೆ 2019ರಲ್ಲಿಯೇ ಆದೇಶಿಸಲಾಗಿದ್ದು ಈವರೆಗೂ ಕೆಲಸವಾಗಿಲ್ಲ ಎಂದು ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್, ಮೊದಲು ಕಾಮಗಾರಿ ದರ ನಿಗದಿಗೆ ಸಂಬಂಧಿಸಿ ಗೊಂದಲ ಉಂಟಾಗಿತ್ತು. ಕೊನೆಗೆ ಕೊರೊನಾ ಲಾಕ್ಡೌನ್ ಬಂದಿದ್ದರಿಂದ ಕೆಲಸ ಆಗಿಲ್ಲ ಎಂದು ಸಮಜಾಯಿಷಿ ನೀಡಿದರು. ಅಧಿಕಾರಿ ಹೇಳಿಕೆಗೆ ಅತೃಪ್ತಿ ವ್ಯಕ್ತಪಡಿಸಿದ ಸಂಸದರು, ಯುದೊœàಪಾದಿ ಮಾಡಬೇಕಾದ ಕೆಲಸವನ್ನು ಆಮೆಗತಿಯಲ್ಲಿ ಮಾಡಿದರೆ ಹೇಗೆ ಎಂದು ಕಿಡಿ ಕಾರಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಹ, ನೀವು (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು) ಭಾರತ ಸರ್ಕಾರದ ಅಧೀನ ಬರುತ್ತೀರಿ ಎಂದು ಉದಾಸೀನ ಮಾಡುವುದು ಸರಿಯಲ್ಲ ಎಂದರು.
ಕೆಲಸಕ್ಕೆ ಪೋಲಿಸ್ ಭದ್ರತೆ: ಹದಡಿ ರಸ್ತೆ ವೃತ್ತ ನಿರ್ಮಾಣ ಕುರಿತ ವಿನ್ಯಾಸವನ್ನು ಕೂಡಲೇ ತಂದು ತೋರಿಸಿ ಹಾಗೂ ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಎಂದು ಆದೇಶಿಸಿದ ಸಂಸದರು, ಕುಂದವಾಡ, ಕೆಎಚ್ಬಿ ಬಳಿಯ ಸರ್ವಿಸ್ ರಸ್ತೆ ಕೆಲಸ ಆಗದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ರಸ್ತೆ ಮಾಡಲು ಮೊದಲು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಕಾಮಗಾರಿ ಆರಂಭಿಸಿದ ಬಳಿಕ ಮತ್ತೆ ಕಾಮಗಾರಿ ತಡೆದಿದ್ದಾರೆ ಎಂದು ತಿಳಿಸಿದರು. ಆಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೂಡಲೇ ಈ ವಿಷಯವನ್ನು ನನ್ನ ಗಮನಕ್ಕೆ ತರಬೇಕಿತ್ತು. ನಾಳೆಯೇ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಿಸುತ್ತೇನೆ. ಕಾಮಗಾರಿ ಮುಂದುವರಿಸಿ ಎಂದು ಸೂಚಿಸಿದರು.
ಶಾಮನೂರು ರಸ್ತೆ ಜಂಕ್ಷನ್ ಅಗಲೀಕರಣ, ಮಲ್ಲಶೆಟ್ಟಿಹಳ್ಳಿ ಹಾಗೂ ಎಚ್. ಕಲ್ಪನಹಳ್ಳಿಯ ಬಳಿಯ ಹೈಟೆನÒನ್ ಲೈನ್ ಸ್ಥಳಾಂತರ, ಹೆಬ್ಟಾಳ ಹತ್ತಿರ ರಸ್ತೆ ಸರಿಮಾಡಬೇಕಿದ್ದು ವಿಳಂಬ ಮಾಡದೆ ಕೆಲಸ ಮಾಡಿಕೊಡಬೇಕು ಎಂದು ಸಂಸದರು ಸೂಚಿಸಿದರು.
ಬಾತಿ ಬಳಿ ಹರಿಹರದಿಂದ ಬರುವ 3.5 ಕಿಮೀ ನೀರಿನ ಪೈಪ್ಲೈನ್ ಇದ್ದು ಅದನ್ನು ಸ್ಥಳಾಂತರಿಸ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಪಾಲಿಕೆ ಆಯುಕ್ತರ ಮೇಲುಸ್ತುವಾರಿಯಲ್ಲಿ ಆ ಕೆಲಸವೂ ಶೀಘ್ರ ಆಗಲಿ ಎಂದು ಸಂಸದರು ಸೂಚಿಸಿದರು. ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೇಲ್ವೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.