ಸರ್ಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷದ ನಾಯಕರೇ ಇಲ್ಲ: ನಳೀನ್ ಕುಮಾರ್ ಕಟೀಲ್
Team Udayavani, Feb 15, 2020, 3:04 PM IST
ದಾವಣಗೆರೆ: ಸಿದ್ದರಾಮಯ್ಯನ ಸರ್ಕಾರ ಇದ್ದಾಗ ಕೊಲೆಗಳು, ಅತ್ಯಾಚಾರಗಳು ಆದವು. ಮತ ಬ್ಯಾಂಕ್ ಗಾಗಿ ದೇಶಕ್ಕೆ ಬೆಂಕಿ ಇಡುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಗೆ ಅಡ್ಡಿ ಮಾಡುತ್ತಿದ್ದಾರೆ. ಸಂವಿಧಾನ ವಿರೋಧ ಮಾಡಿದವರು ದೇಶದ್ರೋಹಿಗಳು ಎಂದು ಹೇಳುತ್ತಾರೆ. ಈಗ ಸಂವಿಧಾನವನ್ನು ವಿರೋಧ ಮಾಡುತ್ತಿರುವ ದೇಶದ್ರೋಹಿಗಳು ಯಾರು? ಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದರು.
ಅಧಿವೇಶನ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ಸರ್ಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ಸಿದ್ದರಾಮಯ್ಯರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ ಡಿ.ಕೆ ಶಿವಕುಮಾರ್ ಹೊರಗೆ ಹೋಗ್ತಾರೆ. ಡಿ.ಕೆ ಶಿವಕುಮಾರ್ ಅವರನ್ನು ಮಾಡಿದರೆ ಸಿದ್ದರಾಮಯ್ಯ ಹೊರಗೆ ಹೋಗ್ತಾರೆ, ಇಬ್ಬರನ್ನೂ ಕೂರಿಸಿ ಮಾಡಿದರೆ ಪರಮೇಶ್ವರ್ ಹೊರಗೆ ಹೋಗ್ತಾರೆ . ರಾಜ್ಯಾಧ್ಯಕ್ಷರನ್ನು ಮಾಡಿದ ಮರುದಿನವೇ ಕಾಂಗ್ರೆಸ್ ನಲ್ಲಿ ಬಂಡಾಯ ಏಳುತ್ತದೆ. ಆಗ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗುತ್ತದೆ ಎಂದು ವ್ಯಂಗ್ಯವಾಡಿದರು.