ಯೋಗ ದಿನಕ್ಕೆ ಆನ್ಲೈನ್ ಸ್ಪರ್ಶ ಚಿಂತನೆ!
ಯೋಗ ಪ್ರದರ್ಶನ ನೇರ ಪ್ರಸಾರಕ್ಕೆ ಆಲೋಚನೆ
Team Udayavani, Jun 8, 2020, 7:49 AM IST
ಸಾಂದರ್ಭಿಕ ಚಿತ್ರ
ದಾವಣಗೆರೆ: ಇದೇ ಜೂ.21ರಂದು ನಡೆಯುವ 6ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಆನ್ಲೈನ್ ಸ್ಪರ್ಶ ನೀಡುವ ಚಿಂತನೆ ನಡೆದಿದೆ!.
ಹೌದು. ಬಿಟ್ಟುಬಿಡದೆ ಕಾಡುತ್ತಿರುವ ಮಹಾಮಾರಿ ಕೋವಿಡ್ ವೈರಸ್ನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ಡೌನ್ 5.0 ನಡುವೆ ಅತೀ ಮುಖ್ಯವಾಗಿ ಕಾಪಾಡಿಕೊಳ್ಳಲೇ ಬೇಕಾಗಿರುವ ಸಾಮಾಜಿಕ ಅಂತರ ಹಾಗೂ ಕೆಲವಾರು ಕಟ್ಟುನಿಟ್ಟಿನ ಮಾರ್ಗಸೂಚಿ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಯೋಗ ದಿನದ ಆಚರಣೆ ನಡೆಸುವ ಆಲೋಚನೆ ಇದೆ.
ಇಡೀ ಭಾರತೀಯರು ನೀಡಿರುವ ಅತೀ ಮಹತ್ವದ ಕೊಡುಗೆಯಾದ ಯೋಗದ ಮಹತ್ವವನ್ನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ನಿಟ್ಟಿನಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸತತ ಪರಿಶ್ರಮದ ಫಲವಾಗಿ ಜೂ.21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಮನ್ನಣೆ ದೊರೆತಿರುವುದು ಇತಿಹಾಸ. 2015 ರ ಜೂ.21ರ ಭಾನುವಾರ ಭಾರತ ಮಾತ್ರವಲ್ಲ ಜಗತ್ತಿನ ಅನೇಕಾನೇಕ ದೇಶಗಳಲ್ಲೂ ಯೋಗ ದಿನ ಆಚರಣೆಗೆ ಬಂದಿತು. ಅದೇ ರೀತಿ ಯೋಗಪಟುಗಳ ನಗರಿ… ದಾವಣಗೆರೆಯಲ್ಲಿ ಬಹು ವಿಜೃಂಭಣೆಯಿಂದ ಯೋಗ ದಿನಕ್ಕೆ ಮುನ್ನುಡಿ ಬರೆಯಲಾಯಿತು.
ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್, ಸಾರ್ವಜನಿಕ, ಪಿಯು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಎನ್ ಸಿಸಿ, ಹಲವಾರು ಸ್ವಯಂ ಸೇವಾ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಪ್ರತಿ ವರ್ಷ ದಾವಣಗೆರೆಯಲ್ಲಿ ಅತ್ಯಂತ ಯಶಸ್ವಿಯಾಗಿ ಯೋಗ ದಿನಾಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈಚೆಗೆ ನಿಧನರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದಂಗಳು, ಕನ್ನಡದ ಪೂಜಾರಿ ಖ್ಯಾತಿಯ ಹಿರೇಮಗಳೂರು ಕಣ್ಣನ್, ಡಾ| ಪಾವಗಡ ಪ್ರಕಾಶ್ರಾವ್, ಡಾ| ಸಂತೋಷ್ ಗುರೂಜಿ, ಹರಿಹರದ ಹರ ಜಗದ್ಗುರು ಪೀಠಾಧಿಪತಿ, ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಯೋಗ ಗುರು ಚನ್ನಬಸವಣ್ಣ, ದಾವಣಗೆರೆಯ ಹೆಸರಾಂತ ವಿಠಲದಾಸ್ ಶೆಣೈ ಮುಂತಾದವರು ಯೋಗ ದಿನದಂದು ಭಾಗವಹಿಸಿ, ಸ್ವತಃ ಯೋಗಾಭ್ಯಾಸ ಮಾಡುವ ಮೂಲಕ ಯೋಗದ ಮಹತ್ವವನ್ನ ದಶದಿಕ್ಕುಗಳಿಗೆ ಪಸರಿಸಿದ್ದಲ್ಲದೆ ಸಾವಿರಾರು ಜನರು ಯೋಗದ ಕಡೆ ಆಕರ್ಷಿತರಾಗುವಂತೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಮುಖ ಕಾರ್ಯಕ್ರಮ ನಡೆಯುವ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ 5-6 ಸಾವಿರಕ್ಕೂ ಅಧಿಕ ಯೋಗಪಟುಗಳು ಸೇರಿ ಸಾಮೂಹಿಕ ಪ್ರಾರ್ಥನೆ, ಯೋಗ ಪ್ರದರ್ಶನ ನಡೆಸುತ್ತಿದ್ದರು. ಯೋಗ ದಿನದ ಪೂರ್ವಭಾವಿಯಾಗಿ ಯೋಗ ನಡಿಗೆ, ವಾಕಾಥಾನ್, ಸೈಕಲ್ ಜಾಥಾ ಸಾಕಷ್ಟು ಕಾರ್ಯಕ್ರಮ ಆಯೋಜನೆ ಆಗುತ್ತಿದ್ದವು.
ಆದರೆ, ಕೋವಿಡ್ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಅವು ಯಾವುದಕ್ಕೂ ಅವಕಾಶವೇ ಇಲ್ಲ. ಆದರೂ, ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಲ್ಲಬಾರದು. ನಿರಂತರವಾಗಿ ನಡೆಯುವಂತೆ ಆಗಬೇಕು ಎಂದು ಆನ್ಲೈನ್ ಮೂಲಕ ಯೋಗ ದಿನ ಆಚರಿಸುವ ಚಿಂತನೆ ನಡೆಸಲಾಗಿದೆ. ಮೋತಿ ವೀರಪ್ಪ ಕಾಲೇಜು ಮೈದಾನ ಇಲ್ಲವೇ ಬೇರೆಡೆ ಪ್ರಮುಖರು ನಡೆಸಿಕೊಡುವಂತಹ ಯೋಗ ಪ್ರದರ್ಶನವನ್ನ ಸ್ಥಳೀಯ ವಾಹಿನಿ ಒಳಗೊಂಡಂತೆ ಇತರೆ ಸೌಲಭ್ಯಗಳ ಮೂಲಕ ನೇರ ಪ್ರಸಾರ ಮಾಡುವ ಆಲೋಚನೆ ಇದೆ. ಯೋಗ ಒಕ್ಕೂಟದ ಎಲ್ಲಾ ಪ್ರಮುಖರು, ಜಿಲ್ಲಾಡಳಿತ, ಇತರೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ವಾಸುದೇವ ರಾಯ್ಕರ್.
ನಮ್ಮ ಅತ್ಯಮೂಲ್ಯ ಕೊಡುಗೆಯಾದ ಯೋಗಕ್ಕೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ಹಾಗಾಗಿಯೇ ಪ್ರತಿ ವರ್ಷ ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಜಾರಿಗೆ ಬಂದಿದೆ. ಕೊರೊನಾ ವೈರಸ್ ಹಿಮ್ಮೆಟ್ಟಿಸಲು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಯೋಗವನ್ನೂ ಜನರ ಇನ್ನೂ ಹತ್ತಿರಕ್ಕೆ ತೆಗೆದುಕೊಂಡು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ವಾಸುದೇವ ರಾಯ್ಕರ್ ಹೇಳುತ್ತಾರೆ.
ಕೋವಿಡ್ ವೈರಸ್ ಹಾವಳಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಬಾರಿಯ ಯೋಗದಿನವನ್ನ ಆನ್ಲೈನ್ ಮೂಲಕ, ನೇರ ಪ್ರಸಾರ ಮಾಡುವ ಚಿಂತನೆ ಇನ್ನೂ ಪ್ರಾಥಮಿಕ ಹಂತ. ಕೇಂದ್ರದ ಆಯುಷ್ ಇಲಾಖೆ ಒಳಗೊಂಡಂತೆ ಯಾವುದೇ ಇಲಾಖೆಯಿಂದ ಅಧಿಕೃತ. ಮಾಹಿತಿ ಯಾಗಲಿ, ಆದೇಶವಾಗಲಿ ಬಂದಿಲ್ಲ. ಸರ್ಕಾರದ ಮುಂದಿನ ಆದೇಶದ ಅನ್ವಯವೇ ಯೋಗ ದಿನಾಚರಣೆ ನಿರ್ಧರಿತವಾಗಲಿದೆ ಎಂದು ವಾಸುದೇವ ರಾಯ್ಕರ್ ಅವರು ತಿಳಿಸುತ್ತಾರೆ.
ಮಾರ್ಗಸೂಚಿ ಆದೇಶ ಬಂದಿಲ್ಲ : ಈ ಬಾರಿಯ 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಕೇಂದ್ರ, ರಾಜ್ಯ ಸರ್ಕಾರದ ಆಯುಷ್ ನಿರ್ದೇಶನಾಲಯದಿಂದ ಯಾವುದೇ ಮಾರ್ಗಸೂಚಿ, ಆದೇಶ ಬಂದಿಲ್ಲ. ಮಾರ್ಗಸೂಚಿ, ಆದೇಶ ಅನ್ವಯವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಂಕರಗೌಡ ತಿಳಿಸಿದರು.
-ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ