ಶಾಲೆ ಬಿಟ್ಟ ಮಕ್ಕಳಿಗಾಗಿ ಪತ್ತೇದಾರಿ
Team Udayavani, Nov 26, 2021, 8:20 AM IST
ದಾವಣಗೆರೆ: ಆರೋಗ್ಯ, ಆರ್ಥಿಕ, ಕೌಟುಂಬಿಕ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಹುಡುಕಿ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ಕಡ್ಡಾಯ ಕಾರ್ಯಸೂಚಿಯೊಂದಿಗೆ ಕಾರ್ಯಪ್ರವೃತ್ತವಾಗಿದ್ದು , ” ಪತ್ತೇದಾರಿ’ ಆರಂಭಿಸಿದೆ.
ಸ್ಥಳೀಯ ಸಂಸ್ಥೆಗಳ ಮೂಲಕ ನಡೆಸಿದ ಮನೆ ಮನೆ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 34,411 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ. ಇವರಲ್ಲಿ 13,081 ಮಕ್ಕಳು ಶಾಲೆಗೆ ನೋಂದಣಿ ಮಾಡಿಲ್ಲ. 21,330 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ. ಈ ಪೈಕಿ 19,336 ಮಕ್ಕಳು 6ರಿಂದ 14 ವರ್ಷದವರಾಗಿದ್ದರೆ 15,075 ಮಕ್ಕಳು 14ರಿಂದ 16 ವರ್ಷದವರು. ಮಕ್ಕಳು ಶಾಲೆಯಿಂದ ಹೊರ ಗುಳಿಯಲು ವೈದ್ಯಕೀಯ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಶಾಲೆಯಿಂದ ಹೊರಗುಳಿದವರು :
ಬಾಗಲಕೋಟೆ-763, ಬಳ್ಳಾರಿ-1,279, ಬಿಬಿಎಂಪಿ-6,608, ಬೆಳಗಾವಿ-1,265, ಬೆಂಗಳೂರು-527, ಬೆಂಗಳೂರು ಗ್ರಾಮಾಂತರ – 489, ಬೀದರ್- 2,609, ಚಾಮರಾಜ ನಗರ-481, ಚಿಕ್ಕಬಳ್ಳಾಪುರ- 441, ಚಿಕ್ಕಮಗ ಳೂರು-534, ಚಿತ್ರದುರ್ಗ-1,587, ದಕ್ಷಿಣ ಕನ್ನಡ-195, ದಾವಣಗೆರೆ-790, ಧಾರವಾಡ-1,463, ಗದಗ- 505, ಹಾಸನ- 772, ಹಾವೇರಿ-753, ಕಲಬುರಗಿ-2,129, ಕೊಡಗು-311, ಕೋಲಾರ- 338, ಕೊಪ್ಪಳ- 1,159, ಮಂಡ್ಯ-779, ಮೈಸೂರು-751, ರಾಯಚೂರು-1,966, ರಾಮನಗರ-540, ಶಿವಮೊಗ್ಗ-1,046, ತುಮಕೂರು-890, ಉಡುಪಿ-172, ಉತ್ತರ ಕನ್ನಡ-509, ವಿಜಯಪುರ-1,152, ಯಾದಗಿರಿ-1,608 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಸಂವಿಧಾನದ ಪ್ರಕಾರ 6-14 ವರ್ಷದೊಳಗಿನ ಎಲ್ಲ ಮಕ್ಕಳು ಶಾಲಾಶಿಕ್ಷಣ ಪಡೆಯುವುದು ಮೂಲ ಹಕ್ಕು. ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಪ್ರಕಾರ ಎಲ್ಲ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ದಾಖಲಾತಿ, ಹಾಜರಾತಿ ಖಚಿತಪಡಿಸಿಕೊಳ್ಳಲೇಬೇಕು. ಆದ್ದರಿಂದ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕಾರ್ಯಯೋಜನೆ ಹಾಕಿಕೊಂಡು, ಅಂಥ ಮಕ್ಕಳ ಜಾಡು ಹಿಡಿದು ಹೊರಟಿದೆ.
ಹೀಗಿದೆ ಕಾರ್ಯಯೋಜನೆ :
ಸ್ಥಳೀಯ ಸಂಸ್ಥೆಗಳು ನಡೆಸಿದ ಮಕ್ಕಳ ಸಮೀಕ್ಷಾ ಮಾಹಿತಿಯನ್ನು ಜಿಲ್ಲಾವಾರು ಉಪ ನಿರ್ದೇಶಕರಿಗೆ ಕಳುಹಿಸಬೇಕು. ಉಪನಿರ್ದೇಶಕರು ಅದನ್ನು ಬ್ಲಾಕ್ವಾರು ವಿಂಗಡಿಸಿ ತಾಲೂಕುಗಳಿಗೆ ಕಳುಹಿಸಿಕೊಡ ಬೇಕು. ಜಿಲ್ಲೆಯಿಂದ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಾಜರಾತಿ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಮಕ್ಕಳ ಪಟ್ಟಿ ಪರಿಶೀಲಿಸಿ ಕ್ಲಸ್ಟರ್ವಾರು ವಿಂಗಡಿಸಿ ಸಿಆರ್ಪಿಗಳಿಗೆ ನೀಡಬೇಕು.
ಈ ಪಟ್ಟಿಯನ್ನು ಸಿಆರ್ಪಿಗಳು ಮತ್ತು ಹಾಜರಾತಿ ಅಧಿಕಾರಿಗಳು ಮತ್ತೂಮ್ಮೆ ಪರಿಶೀಲಿಸಿ, ಮುಖ್ಯ ಶಿಕ್ಷಕರ ಸಭೆ ಕರೆದು ಪಟ್ಟಿಯಲ್ಲಿರುವ ಮಕ್ಕಳು ಈಗಾಗಲೇ ಶಾಲೆಯಲ್ಲಿ ದಾಖಲಾಗಿರುವ ಬಗ್ಗೆ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು. ದಾಖಲಾದ ಮಕ್ಕಳ ಮಾಹಿತಿ (ಮಗುವಿನ ಹೆಸರು, ಶಾಲೆ ಹೆಸರು, ಎಸ್ಟಿಎಸ್ ಸಂಖ್ಯೆ) ಸಂಗ್ರಹಿಸಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರು ಕಾರ್ಯ ಸೂಚಿಯಲ್ಲಿ ನಿರ್ದೇಶನ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಟ್ಟಿ ಯಲ್ಲಿರುವ ಮಕ್ಕಳು ತಾಲೂಕಿನ ಹೊರಗೆ ಹೋಗಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಮಕ್ಕಳು ದಾಖಲಾಗಿರುವುದನ್ನು ಖಚಿತಪಡಿಸಿಕೊಂಡು ಮಗು ಮತ್ತು ಶಾಲೆಯ ಮಾಹಿತಿ ಪಡೆದು ಕೊಳ್ಳಬೇಕು. ಮಕ್ಕಳು ಹೊರ ಜಿಲ್ಲೆಗೆ ತೆರಳಿದ್ದರೆ ಅಂಥವರ ಪಟ್ಟಿ ಮಾಡಿ ಉಪನಿರ್ದೇಶಕರು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರಿಂದ ವಿವರ ಪಡೆದು ಮಕ್ಕಳು ಹಾಜರಾಗಿರುವ ಬಗ್ಗೆ ಮಾಹಿತಿ ಪಡೆಯಬೇಕು. ಇದೇ ರೀತಿ ಶಾಲೆಗೆ ದಾಖಲಾಗದ ಎಲ್ಲ ಮಕ್ಕಳನ್ನು ದಾಖಲಾತಿ ಮಾಡಿ ನಿರಂತರ ಹಾಜರಾಗುವಂತೆ ಮೇಲ್ವಿ ಚಾರಣೆ ನಡೆಸಬೇಕು. ಮಕ್ಕಳು ಹೊರ ರಾಜ್ಯಗಳಿಗೆ ಹೋದಲ್ಲಿ ಆ ಮಕ್ಕಳ ಬಗ್ಗೆ ಆಂಗ್ಲ ಭಾಷೆಯಲ್ಲಿ ಆಯಾ ರಾಜ್ಯ ಯೋಜನ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡಬೇಕು.
ಕೊನೆಯ ಅಸ್ತ್ರ ಪೊಲೀಸ್ :
ಅಧಿಕಾರಿಗಳು ಮಗುವಿನ ಗೈರು ಹಾಜರಿಗೆ ನಿಖರ ಕಾರಣ ಪತ್ತೆ ಹಚ್ಚಿ ಹೆತ್ತವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಆದರೂ ಮಗು ಶಾಲೆಗೆ ಹಾಜರಾಗದಿದ್ದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ದೊಂದಿಗೆ ಡಯಟ್ ಮತ್ತು ತಜ್ಞರಿಂದ ಮಗುವಿಗೆ ಕೌನ್ಸೆಲಿಂಗ್ ಮಾಡಬೇಕು. ಅದೂ ವಿಫಲವಾದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವಂತೆ ಹೆತ್ತವ ರಿಗೆ ಆದೇಶ ಹೊರಡಿಸಬೇಕು. ಆಗಲೂ ಹಾಜರಾಗದಿದ್ದರೆ ಬಾಲ ನ್ಯಾಯ ಕಾಯ್ದೆ-2015ರ ಪ್ರಕಾರ ಪೊಲೀಸರ ಸಹಕಾರ ಪಡೆದು ಮಗುವಿನೊಂದಿಗೆ ಹೆತ್ತವರನ್ನು ಸಮಿತಿ ಎದುರು ಹಾಜರಾಗಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಆರ್ಡಿಪಿಆರ್, ಪೊಲೀಸ್ ಸಹಿತವಾಗಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಮೀಕ್ಷೆ ನಡೆಯುತ್ತಿದೆ. ಇಂತಹ ಮಕ್ಕಳಿಗೆ ಮೊದಲು ವಸತಿ ಸಹಿತ ತರಬೇತಿ ನೀಡಿ, ಅನಂತರ ಅವರನ್ನು ಶಾಲೆಗೆ ದಾಖಲು ಮಾಡಲಾಗುತ್ತದೆ. ಇದು ಶಿಕ್ಷಣ ಇಲಾಖೆಯ ನಿರಂತರ ಪ್ರಕ್ರಿಯೆ. – ಎಂ. ಪ್ರಸನ್ನ ಕುಮಾರ್, ನಿರ್ದೇಶಕರು, ಶಿಕ್ಷಣ ಇಲಾಖೆ
- ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ