ಕೈ ಟಿಕೆಟ್ಗೆ ಅರ್ಜಿ ಸಲ್ಲಿಸದ ಶಾಮನೂರು ಪುತ್ರ!
ನಿರೀಕ್ಷೆಗೂ ಮೀರಿ ಕಾರ್ಯಕ್ರಮ ಯಶಸ್ವಿಯಾದ ಮೇಲೆ ರಾಜಕೀಯ ಚಟುವಟಿಕೆಯಲ್ಲಿ ಮತ್ತೆ ತೊಡಗಿಸಿಕೊಂಡಿದ್ದರು.
Team Udayavani, Nov 23, 2022, 6:25 PM IST
ದಾವಣಗೆರೆ: ಮುಂಬರುವ ಚುನಾವಣೆಯ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಅರ್ಜಿಯನ್ನೇ ಸಲ್ಲಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಮಧ್ಯಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದಿಯಾಗಿ ಬಹುತೇಕ ಎಲ್ಲಾ ಕಾಂಗ್ರೆಸ್ ಮುಖಂಡರೂ ಚುನಾವಣೆಯಲ್ಲಿ ಸ್ಪರ್ಧಿಸಲು “ಕೈ’ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಹುರಿಯಾಳಾಗುತ್ತಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಅರ್ಜಿಯನ್ನೇ ಸಲ್ಲಿಸಿಲ್ಲ. ಮಾಜಿ ಸಚಿವರ ನಿಗೂಢ ನಡೆ ಏನು ಎಂಬ ಪ್ರಶ್ನೆ ಕುತೂಹಲ ಮೂಡಿದೆ.
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ರಣೋತ್ಸಾಹದಲ್ಲಿರುವ ಕಾಂಗ್ರೆಸ್ಗೆ, ಚುನಾವಣೆಯಲ್ಲಿ ಪಕ್ಷ ಮುನ್ನಡೆಸಬೇಕಾದ ನಾಯಕ ಟಿಕೆಟ್ಗೆ ಅರ್ಜಿ ಸಲ್ಲಿಸದೆ ಇರುವುದು ಚುನಾವಣೆಗೂ ಮುನ್ನವೇ ಆತಂಕ ಮೂಡಿಸಿದೆ.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಣಕ್ಕಿಳಿದು ಬಿಜೆಪಿಗೆ ದಾವಣಗೆರೆ ಉತ್ತರದಲ್ಲಿ ಮಾತ್ರವಲ್ಲ, ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸೋಲಿನ ರುಚಿ ತೋರಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ಗೆ ಮಲ್ಲಿಕಾರ್ಜುನ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸದೆ ಇರುವುದು ನುಂಗಲಾರದ ತುತ್ತಾಗಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ನ ಹೈಕಮಾಂಡ್ ಆಗಿರುವ ಶಾಸಕ ಡಾ|ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಉಪಸ್ಥಿತಿಯೇ ಮುಖಂಡರು, ಕಾರ್ಯಕರ್ತರಿಗೆ ಭೀಮಬಲ. ಆದರೆ ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸದಿರುವುದು ಕಾಂಗ್ರೆಸ್ನಲ್ಲಿ ಕಸಿವಿಸಿಗೆ ಕಾರಣವಾಗಿದೆ.
ಇದು ಬಿಜೆಪಿ ಒಳಗೊಂಡಂತೆ ವಿಪಕ್ಷಗಳಿಗೆ ಚುನಾವಣೆಗೆ ಮುನ್ನವೇ ಪ್ರಬಲ ಅಸ್ತ್ರ ದೊರೆತಂತಾಗಿದೆ. ಟಿಕೆಟ್ ಕೋರಿ ಅರ್ಜಿ ಸಲ್ಲಿಸದ ವಿಚಾರವನ್ನೇ ಮುಂದಿಟ್ಟು ವಿಪಕ್ಷಗಳು ಅಪಪ್ರಚಾರ ಮಾಡುವ ಆತಂಕ ಎದುರಾಗಿದೆ.
ಸತತ ಸೋಲಿನಿಂದ ಬೇಸರ?: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸೋಲಿನ ಕಹಿ ಉಂಡಿರುವ ಮಲ್ಲಿಕಾರ್ಜುನ್, 2018ರ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಾಣುವಂತಾಗಿದ್ದು ಸ್ವತಃ ಅವರಿಗೆ ಅರಗಿಸಿಕೊಳ್ಳಲಾರದ ಆಘಾತಕ್ಕೆ ಕಾರಣವಾಗಿತ್ತು. ವಿಧಾನಸಭಾ ಚುನಾವಣೆಯ ಅನಿರೀಕ್ಷಿತ ಸೋಲಿನ ನಂತರ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ದಾವಣಗೆರೆಯಲ್ಲೇ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ನಿರೀಕ್ಷೆಗೂ ಮೀರಿ ಕಾರ್ಯಕ್ರಮ ಯಶಸ್ವಿಯಾದ ಮೇಲೆ ರಾಜಕೀಯ ಚಟುವಟಿಕೆಯಲ್ಲಿ ಮತ್ತೆ ತೊಡಗಿಸಿಕೊಂಡಿದ್ದರು.
ಸೆ.22ರಂದು ಅಭಿಮಾನಿಗಳ ಬಳಗ ಆಯೋಜಿಸಿದ್ದ ತಮ್ಮ 55ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದಲೇ ಭಾಗವಹಿಸಿದ್ದರು. ಆದರೆ ಈಗ ಟಿಕೆಟ್ಗೆ ಅರ್ಜಿ ಸಲ್ಲಿಸದೇ ಇರುವ ಅವರ ರಾಜಕೀಯ ಲೆಕ್ಕಾಚಾರವೇ ನಿಗೂಢವಾಗಿದೆ. ಕೈ ತಪ್ಪಿ ಹೋಗಿದ್ದ ಜಿಲ್ಲೆಯನ್ನು ಮತ್ತೆ ಹಿಡಿತಕ್ಕೆ ಪಡೆಯುವ ಇರಾದೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವರ ನಿರ್ಧಾರ ಬೇಸರ ಮೂಡಿಸಿದೆ. ಚುನಾವಣೆ ಹೊಸ್ತಿಲಲ್ಲಿ ಮಲ್ಲಿಕಾರ್ಜುನ್ ಅವರ ಧೋರಣೆ ಪಕ್ಷಕ್ಕೆ ಸದ್ಯದ ಮಟ್ಟಿಗೆ ಶುಭಸೂಚಕವಂತೂ ಅಲ್ಲ.
ಕೈ ತಪ್ಪಿ ಹೋಗಿತ್ತು ಟಿಕೆಟ್
2008ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆ ನಂತರ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮೊದಲ ಚುನಾವಣೆಯಲ್ಲೇ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿತ್ತು. ಟಿಕೆಟ್ ದೊರೆಯುವ ನಿರೀಕ್ಷೆಯೊಂದಿಗೆ ಮಲ್ಲಿಕಾರ್ಜುನ್ ಪ್ರಚಾರವನ್ನೂ ಕೈಗೊಂಡಿದ್ದರು. ಆದರೆ ಕಡೆ ಘಳಿಗೆಯಲ್ಲಿ ಬೇರೆಯವರ ಹೆಸರಲ್ಲಿ ಬಿ ಫಾರ್ಮ್ ಬಂದಿತ್ತು. ಹರಸಾಹಸ ಮಾಡಿ ನಾಮಪತ್ರ ಸಲ್ಲಿಸಿದ್ದರೂ ತಾಂತ್ರಿಕ ಕಾರಣದಿಂದ ಮಲ್ಲಿಕಾರ್ಜುನ್ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು.
ಮುಂದಿನ ನಡೆ ಏನು?
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸಿದರೆ ಮಾತ್ರ ಟಿಕೆಟ್ ಎಂಬ ಪರಿಸ್ಥಿತಿ ಏನಿಲ್ಲ. ಆದರೂ ಏಕೆ ಅರ್ಜಿ ಸಲ್ಲಿಸಲಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಮಲ್ಲಿಕಾರ್ಜುನ್ ಅರ್ಜಿ ಸಲ್ಲಿಸದೆ ಇರುವುದಕ್ಕೆ ಕಳೆದ ಚುನಾವಣಾ ಫಲಿತಾಂಶದ ನಿರಾಸೆ ಕಾರಣವೋ ಅಥವಾ ಟಿಕೆಟ್ ಪಕ್ಕಾ ಎಂಬ ವಿಶ್ವಾಸವೋ ಎಂಬುದು ಕುತೂಹಲ ಮೂಡಿಸಿದೆ.
*ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ