ನಕಲಿ ವೈದ್ಯರ ಪತ್ತೆಗೆ ತಂಡ
•ಡಿಸಿ ಜನಸ್ಪಂದನ•16ಕ್ಕೂ ಹೆಚ್ಚು ಅರ್ಜಿ•ಸಮಸ್ಯೆಗಳ ಪರಿಹಾರದ ಭರವಸೆ
Team Udayavani, Sep 17, 2019, 10:17 AM IST
ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ನಡೆಯಿತು.
ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಧಿಕಾರ ವಹಿಸಿಕೊಂಡ ನಂತರ ಸೋಮವಾರ ನಡೆಸಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ 16ಕ್ಕೂ ಹೆಚ್ಚು ಅರ್ಜಿದಾರರಿಗೆ ಸಮಸ್ಯೆ, ಬೇಡಿಕೆ ಬಗೆಹರಿಸುವ ಭರಪೂರ ವಿಶ್ವಾಸ ತುಂಬುವ ಮೂಲಕ ಸೂಕ್ತವಾಗಿ ಸ್ಪಂದಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಇದೆ. ಹೋಮಿಯೋಪಥಿ ಹೆಸರಲ್ಲಿ ನೋಂದಣಿಯಾದ ಕೆಲ ಆಸ್ಪತ್ರೆಯಲ್ಲಿ ಅಲೋಪಥಿ ಚಿಕಿತ್ಸೆ ನೀಡಲಾಗುತ್ತಿದೆ, ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ದೂರಿದರು.
ನಕಲಿ ವೈದ್ಯರ ಪತ್ತೆಗಾಗಿ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು. ದಾವಣಗೆರೆ ನಗರ ನಂತರ ತಾಲೂಕು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಲ್ಲಾ ಅಧಿಕಾರಿಗಳ ಕಣ್ಮುಂದೆ ಎಲ್ಲವೂ ನಡೆಯುತ್ತಿದೆಯಾದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ಶ್ರೀಕಾಂತ್ ಹೇಳಿದಾಗ, ಹೌದು ಮಾರಾಯ ಈಗ ನಾನು ಬಂದಿದಿನೀ.. ಸಮಯಾವಕಾಶ ಬೇಕು ಅಲ್ವ. ಖಂಡಿತವಾಗಿಯೂ ನಕಲಿ ವೈದ್ಯರ ಹಾವಳಿ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹರಿಹರದ ಅಮರಾವತಿ- ಜೈ ಭೀಮ ನಗರ ಮಧ್ಯೆ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿರುವ ಕಟ್ಟಡ ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯಾಲಯದಲ್ಲಿನ ಅಮೀನ್ ಒಬ್ಬರು ಮನವಿ ಸಲ್ಲಿಸಿದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಹಳೆ ಪಿಬಿ ರಸ್ತೆ ಅಗಲೀಕರಣದ ನಂತರ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ವರ್ತಕರು, ಉದ್ದಿಮೆದಾರರು ಮನವಿ ಮಾಡಿದರು. ಒಳ ಚರಂಡಿ ವ್ಯವಸ್ಥೆಗೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಎಲ್ಲಾ ಜನಪ್ರತಿನಿಧಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರ ಪ್ರದೇಶದ ಹೊರಭಾಗದಲ್ಲಿರುವ ಶ್ರೀರಾಮ ನಗರ, ಎಸ್ಒಜಿ ಕಾಲೋನಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸುತ್ತಲೇ ಬರಲಾಗುತ್ತಿದೆ. ಕೆ. ಶಿವರಾಮು ನಂತರ ಯಾವುದೇ ಜಿಲ್ಲಾಧಿಕಾರಿ ಅಲ್ಲಿಗೆ ಭೇಟಿ ನೀಡಿಲ್ಲ, ಸ್ಮಶಾನ ಒಳಗೊಂಡಂತೆ ಅನೇಕ ಕಡೆ ಬೀದಿ ದೀಪದ ವ್ಯವಸ್ಥೆಯೇ ಇಲ್ಲ . ಮಠಾಧೀಶರ ನೇತೃತ್ವದಲ್ಲಿ ಭಿಕ್ಷಾಟನೆ ಮಾಡಿ, ಮೂಲಭೂತ ಸೌಲಭ್ಯ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಗರಪಾಲಿಕೆಯ ಕೇಸ್ ವರ್ಕರ್ ಬರೀ ದುಡ್ಡು… ದುಡ್ಡು ಎನ್ನುತ್ತಾರೆ. ಕೂಡಲೇ ಬದಲಾವಣೆ ಮಾಡಬೇಕು ಎಂದು ತಿಮ್ಮಣ್ಣ ಇತರರು ಮನವಿ ಮಾಡಿದರು. ಎಸ್ಒಜಿ ಕಾಲೋನಿಗೆ ಭೇಟಿ ನೀಡುವ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ಕೆ.ಹನುಮಂತಪ್ಪ ಎಂಬುವವರು ಹರಲಿಪುರ ಕೆನರಾ ಬ್ಯಾಂಕ್ನಲ್ಲಿ ಚಿನ್ನಾಭರಣ ಮತ್ತು ಬೆಳೆ ಸಾಲ ತೆಗೆದುಕೊಂಡಿದ್ದು, ಬೆಳೆಸಾಲ ಮನ್ನಾ ಆಗಿರುವುದಿಲ್ಲ. ಚಿನ್ನಾಭರಣದ ಸಾಲದ ಮೊತ್ತ ಕಟ್ಟುವುದಾಗಿ ತಿಳಿಸಿದರೂ ಸಹ ಬ್ಯಾಂಕ್ನವರು ಚಿನ್ನಾಭರಣ ನೀಡುತ್ತಿಲ್ಲ. ಸದ್ಯದಲ್ಲೆ ಮನೆಯಲ್ಲಿ ಮದುವೆ ಕಾರ್ಯವಿದ್ದು, ಚಿನ್ನಾಭರಣ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು.
ದಾವಣಗೆರೆಯ ಬಾಷಾನಗರದ ಅಸಾದುಲ್ಲ ಎಂಬುವರು ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದರು. ತಮಗೆ ಸೇರಿದ ಜಾಗದಲ್ಲಿ ಬೀರಲಿಂಗೇಶ್ವರ ದೇವಸ್ಥಾನದವರು ಅಕ್ರಮವಾಗಿ ಮಳಿಗೆ ಕಟ್ಟಿ, ದಿನಕ್ಕೆ 40 ಸಾವಿರ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ, ಬೆಳವನೂರು ಬಳಿ ಹಳ್ಳದ ಅಳತೆ, ಮಲ್ಲಿಕಾರ್ಜುನ ಇಂಗಳೇಶ್ವರ್, ಎಂಸಿಸಿ ಎ ಬ್ಲಾಕ್ನಲ್ಲಿ ಅಕ್ರಮ ಕಟ್ಟಡ ತೆರವು, ಕೆ.ಟಿ. ಗೋಪಾಲಗೌಡ್ರು, ತುಂಗಭದ್ರಾ ಬಡಾವಣೆಗೆ ನಗರ ಸಾರಿಗೆ ಬಸ್, ಬೀದಿ ದೀಪ ಸೌಲಭ್ಯಕ್ಕೆ ಇತರರು ಮನವಿ ಸಲ್ಲಿಸಿದರು.
ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ