ದೀಪಾವಳಿ ಸಂಭ್ರಮ ಕಸಿದ ಮಳೆ!
ವ್ಯಾಪಾರ-ವಹಿವಾಟು ಕ್ಷೀಣ ದರಗಳೆಲ್ಲ ಗಗನಕ್ಕೆಕೈಗೆ ಬಂದ ಭತ್ತವೂ ಹಾಳು
Team Udayavani, Oct 27, 2019, 11:18 AM IST
ದಾವಣಗೆರೆ: ಗುಡುಗು.. ಸಿಡಿಲಿನ ಆರ್ಭಟದೊಂದಿಗೆ ಆಗಾಗ ಧೋ.. ಎಂದು ಸುರಿಯುವ ಮಳೆ… ಅನಿರೀಕ್ಷಿತ ಬಿರುಸಿನ ಮಳೆಗೆ ಸಿಲುಕಿ ನಲುಗಿ ಹೋಗಿರುವ ಫಸಲು… ಮಳೆಯ ಹೊಡೆತಕ್ಕೆ ಸಿಲುಕಿ ಬಿದ್ದು ಹೋಗಿರುವ ಮನೆ.. ಕಿತ್ತು ಹೋಗಿರುವ ರಸ್ತೆ… ಕಡಿದು ಹೋಗಿದ್ದ ಸಂಪರ್ಕ… ಅಮೂಲ್ಯ ಜೀವಗಳ ಹರಣ… ಅಗತ್ಯ ವಸ್ತುಗಳ ಬೆಲೆ ಏರಿಕೆ… ಇಂತಹ ಹತ್ತಾರು ದಾರುಣ ಸಮಸ್ಯೆಗಳ ನಡುವೆಯೇ ಬೆಳಕಿನ ಹಬ್ಬ ದೀಪಾವಳಿ ಬಂದಿದೆ.
ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳ ಮುನ್ನವೇ ಬಿಟ್ಟು ಬಿಡದೆ ಕಾಡಿದ ಮಳೆಯ ಕಾಟಕ್ಕೆ ಅನೇಕ ಕಡೆ ಹಬ್ಬದ ಸಂಭ್ರಮವೇ ಕಂಡು ಬರುತ್ತಿಲ್ಲ. ಮಳೆಯ ಕೊರತೆ ಜಲಾಶಯದಲ್ಲಿ ನೀರಿದ್ದರೂ ನಾಲೆಯಲ್ಲಿ ನೀರು ಹರಿಸಲು ಮೀನಮೇಷ ಎಣಿಸಿ ಕೊನೆಗೆ ಬಿಟ್ಟ ನೀರಿನ ಆಶ್ರಯದಲ್ಲಿ ಬೆಳೆದಂತಹ ಭತ್ತ… ಕಳೆದ ಭಾನುವಾರದ ಮಳೆಗೆ ಮಕಾಡೆ ಮಲಗಿದೆ. ಗ್ರಾಮೀಣ ಭಾಷೆಯಲ್ಲಿ ಹೇಳುವಂತೆ ಭತ್ತ ಚಾಪೆ… ಹಾಸಿದೆ. ಇನ್ನೇನು ಭತ್ತ ಕೈಗೆ ಬಂದಿತು ಎನ್ನುವಷ್ಟರಲ್ಲೇ ಕೈಗೂ ಸಿಗದಂತೆ ಭತ್ತ ಹಾಳಾಗಿದೆ.
ಶುಕ್ರವಾರ ಮತ್ತು ಶನಿವಾರ ಮಳೆಯ ಅಬ್ಬರತೆ ಕಡಿಮೆಯಾಗಿದ್ದರೂ ಯಾವಾಗ ಬೇಕಾದರೂ ಮಳೆ ಸುರಿಯಬಹುದು ಎಂಬ ವಾತಾವರಣ ಇದೆ. ವಿಪರೀತ ಎನ್ನುವ ಮಳೆಯಿಂದ ಜನರು ಮನೆಯಿಂದ ಹೊರಗೆ ಕಾಲಿಡಲು ಯೋಚಿಸುವಂತಾಗಿದೆ.
ಮಳೆಯ ನೇರ ಪರಿಣಾಮ ದೀಪಾವಳಿ ಹಬ್ಬದ ಸಂಭ್ರಮದ ಮೇಲೂ ಬಿದ್ದಿದೆ ಎನ್ನುವುದಕ್ಕೆ ಅನೇಕ ಬಟ್ಟೆ, ದಿನಸಿ ಅಂಗಡಿಗಳಲ್ಲಿ ವ್ಯಾಪಾರವೇ ಇಲ್ಲದಂತಾಗಿರುವುದು ಸಾಕ್ಷಿ.
ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದರೂ ಎಲ್ಲಿಯೂ ಹಬ್ಬದ ಸಂಭ್ರಮವೇ ಕಂಡು ಬರುತ್ತಿಲ್ಲ. ಇಷ್ಟೊಂದು ನೀರಸ ವಾತಾವರಣ ಇರಲಿಲ್ಲ. ಹಬ್ಬ ಅನ್ನುವಂತೆಯೇ ಇಲ್ಲ. ಜನರು ಸಾಮಾನು ಕೊಂಡುಕೊಳ್ಳಲಿಕ್ಕೂ ಬರುತ್ತಿಲ್ಲ. ವ್ಯಾಪಾರವೇ ಆಗುತ್ತಿಲ್ಲ. ಹಬ್ಬದಾಗೆ ಇಷ್ಟೊಂದು ಡಲ್ ವ್ಯಾಪಾರವನ್ನು ನೋಡಿಯೇ ಇಲ್ಲ… ಎಂದು ಅನೇಕ ಕಿರಾಣಿ ಅಂಗಡಿಯವರು ಹೇಳುತ್ತಾರೆ.
ಮಳೆಯ ಹೊಡೆತದ ಜತೆಗೆ ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ, ಸಕ್ಕರೆ, ಹಿಟ್ಟು, ತೆಂಗಿನಕಾಯಿ… ಹೀಗೆ ಪ್ರತಿಯೊಂದು ವಸ್ತುಗಳ ಬೆಲೆ ಎಲ್ಲಾ ಹಬ್ಬಕ್ಕಿಂತಲೂ ದುಬಾರಿ ಆಗಿವೆ. ಒಂದು ಕೆಜಿ ಜೋಳಕ್ಕೆ 50 ರೂ. ಆಸುಪಾಸು ಇದೆ. ಅಕ್ಕಿಗಿಂತಲೂ ಜೋಳದ ರೇಟೇ ಜಾಸ್ತಿ ಇದೆ ಎಂದರೆ ವಸ್ತುಗಳ ಬೆಲೆಯ ಬಗ್ಗೆ ಹೇಳುವಂತೆಯೇ ಇಲ್ಲ. ಆದರೂ, ಇರುವುದರಲ್ಲಿ ಹಬ್ಬ ಮಾಡಬೇಕು.. ಎನ್ನುವುದು ಅನೇಕರ ಮಾತು.
ಸಮಸ್ಯೆಗಳ ನಡುವೆಯೂ ಜನರು ಬೆಳಕಿನ ಹಬ್ಬ ದೀಪಾವಳಿಗೆ ಸಜ್ಜಾಗಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ದಾವಣಗೆರೆಯ ಮಾರುಕಟ್ಟೆ ಗರಿಗೆದರುತ್ತಿದೆ. ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಒಂದು ಕಡೆ ಹೂವು-ಹಣ್ಣು ಇತರೆ ವ್ಯಾಪಾರ ನಡೆಯುತ್ತಿದ್ದರೆ ಇನ್ನೊಂದು ಕಡೆ ಪಟಾಕಿ ಅಂಗಡಿಗಳು ಪ್ರಾರಂಭವಾಗಿವೆ. ಲಕ್ಷ್ಮೀ ಪೂಜೆಗಾಗಿ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣಗಳಲ್ಲಿ ಸಿದ್ಧತೆ ನಡೆಯುತ್ತಿದೆ.
ನ.12ರಂದು ನಡೆಯುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ದೀಪಾವಳಿ ಬಂದಿರುವುದು ಆಕಾಂಕ್ಷಿಗಳಿಗೆ ಒಳ್ಳೆಯ ಸುಮುಹೂರ್ತ ಎನ್ನಬಹುದು. ಹಬ್ಬದ ಶುಭ ಕೋರುವ ಜತೆಗೆ ಮತ ಯಾಚನೆಗೂ ಅವಕಾಶ ಇದೆ. ಕೆಲವರು ಮತಗಳ ಖಾತ್ರಿಗಾಗಿ ಹಬ್ಬವನ್ನೆ ಸರಿಯಾಗಿ ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು ಉಂಟು.
ಮೊದಲ ದಿನ ನರಕ ಚತುದರ್ಶಿ, ಎರಡನೇ ಲಕ್ಷ್ಮಿ ಪೂಜೆ, ಮೂರನೇ ಬಲಿಪಾಡ್ಯಮಿ, ಹಟ್ಟಿ ಲಕ್ಕಮ್ಮ, ಹಿರಿಯರ ಹಬ್ಬ… ಒಟ್ಟಾರೆಯಾಗಿ ದಾವಣಗೆರೆ ಜನರು ಬೆಳಕಿನ ಹಬ್ಬ ದೀಪಾವಳಿಗೆ ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
MUST WATCH
ಹೊಸ ಸೇರ್ಪಡೆ
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು