ಅಂಗನವಾಡಿ ಕೇಂದ್ರಕ್ಕೆ 10 ವರ್ಷದಿಂದ ಬೀಗ
ಗುತ್ತಿಗೆದಾರರಿಗೆ ಹಣ ಪಾವತಿಸದ ಗ್ರಾಪಂ ಮಸರಕಲ್ಲ ಗ್ರಾಮದ ರಸ್ತೆಗಳಲ್ಲಿ ನಿಂತ ಕೊಳಚೆ ನೀರು ಸೊಳ್ಳೆಗಳ ಹಾವಳಿ
Team Udayavani, Nov 4, 2019, 4:51 PM IST
ದೇವದುರ್ಗ: ತಾಲೂಕಿನ ಮಸರಕಲ್ಲ ಗ್ರಾಮದ ಎಸ್ಟಿ ಕಾಲೋನಿಯಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರಕ್ಕೆ 10 ವರ್ಷದಿಂದ ಬೀಗ ಜಡಿಯಲಾಗಿದ್ದು, ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಸರಕಲ್ ಗ್ರಾಮದ ಎಸ್ಟಿ ಕಾಲೋನಿಯಲ್ಲಿ 2007-08ನೇ ಸಾಲಿನಲ್ಲಿ ಜಿಆರ್ಜಿಎಫ್ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದಲೇ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ.
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ್ದರಿಂದ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಿದ್ದರೂ ನಿರುಪಯುಕ್ತವಾದಂತಾಗಿದೆ.
ಸ್ವಚ್ಛತೆ ಕಾಪಾಡಲು ಆಗ್ರಹ: ಪಂಚಾಯಿತಿ ಆಡಳಿತ ಮಂಡಳಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗಿದ್ದು, ಸೊಳ್ಳೆ ಹಾವಳಿ ಹೆಚ್ಚಿದೆ.
ಗ್ರಾಮದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಗಲೀಜು ನೀರು ನಿಂತು ರಸ್ತೆ ಕೆಸರುಗದ್ದೆಯಂತಾಗಿದೆ. ಇದಲ್ಲದೇ ಗ್ರಾಮದ ಇತರ ರಸ್ತೆಗಳ ಗುಂಡಿ ಮತ್ತು ಪಕ್ಕದ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ನಿಂತಿದೆ.
ಗ್ರಾಮಸ್ಥರು, ವಿದ್ಯಾರ್ಥಿಗಳು ಇಂತಹ ರಸ್ತೆಯಲ್ಲೇ ಸಂಚರಿಸಬೇಕಿದೆ. ಸೊಳ್ಳೆ ಕಾಟದಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ಕಾಯಿಲೆ ಭೀತಿ ಹೆಚ್ಚಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಕೂಡ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ಗ್ರಾಪಂ ಸ್ವಚ್ಛತೆಗೆ ಕ್ರಮ ವಹಿಸಬೇಕು. ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು.
ಮಸರಕಲ್ಲ ಗ್ರಾಮದವರೇ ರಾಯಚೂರು ಜಿಪಂ ಅಧ್ಯಕ್ಷೆಯಾಗಿದ್ದರೂ ಸ್ವಂತ ಗ್ರಾಮದ ಸಮಸ್ಯೆಗಳತ್ತ
ಗಮನಹರಿಸುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ರಾಚಯ್ಯ, ಅಬ್ದುಲ್ ಗನಿಸಾಬ್ ಇತರರು ಆಗ್ರಹಿಸಿದ್ದಾರೆ .