ಮನೆ ತುಂಬಾ ರಾಡಿ; ತೇಲಿ ಹೋದ ಪುಸ್ತಕಗಳು!
•ಬದುಕು ಕಳೆದುಕೊಂಡು ಬೀದಿಗೆ ಬಂದವರ ಸಂಕಟ •ಮನೆಗಳ ಸ್ವಚ್ಛತೆಗೆ ಸಂತ್ರಸ್ತರ ಪರದಾಟ •ಜಮೀನಿನಲ್ಲಿದ್ದ ಬೆಳೆ ಹಾನಿ
Team Udayavani, Aug 19, 2019, 11:08 AM IST
ದೇವದುರ್ಗ: ಪ್ರವಾಹಕ್ಕೆ ಕೆಸರು ತುಂಬಿದ್ದ ಮನೆ ಸ್ವತ್ಛತೆಯಲ್ಲಿ ತೊಡಗಿದ್ದ ಕರ್ಕಿಹಳ್ಳಿ ಗ್ರಾಮದ ವೃದ್ಧೆ ರಂಗಮ್ಮ
ದೇವದುರ್ಗ: ಮನೆಯಲ್ಲಿ ಹೊಕ್ಕ ಕೊಳಚೆ, ಪಾತ್ರೆ ಪಗಡೆ, ಜೀವನಾವಶ್ಯಕ ವಸ್ತುಗಳು, ಮಕ್ಕಳ ಪಠ್ಯಪುಸ್ತಕಗಳು ನೀರು ಪಾಲು, ಮನೆ ಮತ್ತು ಅಳಿದುಳಿದ ಸಾಮಾನುಗಳ ಸ್ವಚ್ಛತೆಗೆ ಪರದಾಡುತ್ತಿದ್ದ ಗ್ರಾಮಸ್ಥರು, ಕೆಸರು ಗದ್ದೆಯಂತಾದ ರಸ್ತೆಗಳು. ಇದು ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಕರ್ಕಿಹಳ್ಳಿ, ಪರ್ತಾಪುರ, ಜೋಳದಹೆಡಗಿ ಗ್ರಾಮಗಳಲ್ಲಿ ಕಂಡುಬಂದ ದೃಶ್ಯಗಳು.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಡಲಾಗಿತ್ತು. ಪರಿಣಾಮ ನದಿ ತೀರದ 34 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದ ತೀವ್ರ ಸಮಸ್ಯೆ ಇದ್ದ ಗ್ರಾಮಗಳ ಜನರನ್ನು ತಾಲೂಕು ಆಡಳಿತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿತ್ತು. ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರಲ್ಲಿ ಕೆಲವರು ಉಟ್ಟ ಬಟ್ಟೆ ಮೇಲೆ, ಮತ್ತೆ ಕೆಲವರು ಬಟ್ಟೆ, ಇತರೆ ವಸ್ತುಗಳೊಂದಿಗೆ ಪರಿಹಾರ ಕೇಂದ್ರಕ್ಕೆ ಆಗಮಿಸಿದ್ದರು. ಸುಮಾರು ಐದಾರು ದಿನ ಪರಿಹಾರ ಕೇಂದ್ರಗಳಲ್ಲೇ ಇದ್ದ ಪರ್ತಾಪುರ, ಕರ್ಕಿಹಳ್ಳಿ ಗ್ರಾಮದ ಸಂತ್ರಸ್ತರು ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಮನೆ, ಜಮೀನಿಗೆ ಹೋಗಿ ನೋಡಿದರೆ ನೆರೆ ಬದುಕು, ಕನಸನ್ನೇ ಕೊಚ್ಚಿಕೊಂಡು ಹೋದ ಅನುಭವ ಅವರಿಗಾಗುತ್ತಿದೆ. ಮನೆಯಲ್ಲಿನ ಪಾತ್ರೆ, ಪಗಡೆ, ಬಟ್ಟೆ, ಆಹಾರಧಾನ್ಯ, ಮಕ್ಕಳ ಪಠ್ಯಪುಸ್ತಕಗಳು ನೀರು ಪಾಲಾಗಿವೆ. ಮನೆಯಲ್ಲಿ ನೀರು ಹೊಕ್ಕು ರಾಡಿ ತುಂಬಿಕೊಂಡಿದೆ. ಮನೆ ಮತ್ತು ಅಳಿದುಳಿದ ವಸ್ತುಗಳನ್ನು ಸ್ವಚ್ಛ ಮಾಡುವುದೇ ಸಂತ್ರಸ್ತರಿಗೆ ದೊಡ್ಡ ಕೆಲಸವಾಗಿದೆ. ಕರ್ಕಿಹಳ್ಳಿ ಗ್ರಾಮದ ಶಿವಮ್ಮ ಮಲ್ಲಯ್ಯ ಟಿನ್ಶೆಡ್ನಲ್ಲಿ ವಾಸಿಸುತ್ತಿದ್ದರು. ನೆರೆ ಇಳಿದ ನಂತರ ಮರಳಿ ಬಂದು ನೋಡಿದರೆ ಮನೆಯೆಲ್ಲ ಕೆಸರುಮಯ. ಜತೆಗೆ ಮಗನ ಪಠ್ಯಪುಸ್ತಕ ನೀರು ಪಾಲಾಗಿವೆ. ಇಂತಹ ದೃಶ್ಯಗಳು ಕರ್ಕಿಹಳ್ಳಿ, ಪರ್ತಾಪುರು, ಜೋಳದಹೆಡಗಿ ಗ್ರಾಮದಲ್ಲಿ ಕಂಡು ಬರುತ್ತಿವೆ. ಇನ್ನು ಹೇರುಂಡಿ ಗ್ರಾಮಕ್ಕೆ ನೀರು ನುಗ್ಗಿದ್ದರೂ ಮೊದಲೇ ಸಂತ್ರಸ್ತರು ಆಹಾರಧಾನ್ಯ ಸೇರಿ ಬಟ್ಟೆಗಳನ್ನು ತೆಗೆದುಕೊಂಡು ಸಂಬಂಧಿಕರ ಮನೆಗಳಿಗೆ, ಪರಿಹಾರ ಕೇಂದ್ರಗಳಿಗೆ ತೆರಳಿದ್ದರು. ಮನೆಗೆ ನುಗ್ಗಿದ ನೀರು ಬಿಟ್ಟರೆ ಹೆಚ್ಚಿನ ಹಾನಿ ಆಗಿಲ್ಲ. ಪ್ರವಾಹದಲ್ಲಿ ಹರಿದು ಬಂದ ತ್ಯಾಜ್ಯ ರಾಶಿಗಟ್ಟಲೇ ಮನೆ ಮತ್ತು ಗ್ರಾಮದ ರಸ್ತೆಗಳಲ್ಲಿ ಬಿದ್ದಿವೆ.
ದೇವಸ್ಥಾನ ಸ್ವಚ್ಛತೆ: ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಕೃಷ್ಣಾ ನದಿ ತೀರದ ಕೊಪ್ಪರು ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ಅಂಜಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ಇನ್ನೂ ಚಾಲ್ತಿಯಲ್ಲಿದೆ. ಲಿಂಗದಹಳ್ಳಿ, ಗೋಪಾಳಪುರು, ಹಿರೇರಾಯಕುಂಪಿ, ಗೂಗಲ್, ಮುದುಗೋಟ ಸೇರಿ ಇತರೆ ಗ್ರಾಮಗಳಲ್ಲಿ ಪ್ರವಾಹಕ್ಕೆ ಹರಿದು ಬಂದ ಕೊಳಚೆ ರಸ್ತೆಯಲ್ಲೆಲ್ಲ ತುಂಬಿದೆ. ಗ್ರಾಮಗಳು ಮೊದಲಿನ ಸ್ಥಿತಿಗೆ ಬರಲು ಎಂಟØತ್ತು ದಿನಗಳೇ ಬೇಕು ಎನ್ನಲಾಗುತ್ತಿದೆ.
ಸಾಂಕ್ರಾಮಿಕ ರೋಗ ಭೀತಿ: ಇಷ್ಟು ದಿನ ನೆರೆಗೆ ನಲುಗಿದ ನದಿ ತೀರದ ಗ್ರಾಮಸ್ಥರಿಗೆ ಈಗ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಎಲ್ಲೆಂದರಲ್ಲಿ ನೀರು, ತ್ಯಾಜ್ಯ ನಿಂತಿದ್ದು, ಸೊಳ್ಳೆ ಉತ್ಪತ್ತಿ ಹೆಚ್ಚಿದ್ದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಆರೋಗ್ಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಹೇರುಂಡಿ ಗ್ರಾಮಸ್ಥ ಹನುಮಂತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು