ಕರಡಿಗುಡ್ಡ ಮಕ್ಕ ಳಿಗೆ ಮರದ ಕೆಳಗೇ ಪಾಠ!
ಶಾಲಾ ಕಟ್ಟಡಕ್ಕೆ 2 ಎಕರೆ ಜಾಗೆ ಕಾಯ್ದಿರಿಸುವಂತೆ ಡಿಸಿ ಆದೇಶಕ್ಕೂ ಬೆಲೆ ನೀಡದ ತಾಲೂಕು ಅಧಿಕಾರಿಗಳು
Team Udayavani, Nov 20, 2019, 2:59 PM IST
ನಾಗರಾಜ ತೇಲ್ಕರ್
ದೇವದುರ್ಗ: ತಾಲೂಕಿನ ಕರಡಿಗುಡ್ಡ ಗ್ರಾಮದ ಸರಕಾರಿ ಶಾಲೆ ಕಟ್ಟಡಕ್ಕಾಗಿ ಗ್ರಾಮದ ಸರ್ಕಾರಿ ಜಾಗೆಯಲ್ಲಿ 2 ಎಕರೆ ಜಮೀನನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹೆಸರಿಗೆ ಕಾಯ್ದಿರಿಸುವಂತೆ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಆದೇಶಿಸಿದ್ದರೂ ಈವರೆಗೆ ತಾಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸಿಲ್ಲ. ಹೀಗಾಗಿ ಕರಡಿಗುಡ್ಡ ಗ್ರಾಮದಲ್ಲಿ ಶಾಲಾ ಆವರಣದಲ್ಲಿನ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ಸುಂಕೇಶ್ವರಹಾಳ ಕ್ಲಸ್ಟರ್ ವ್ಯಾಪ್ತಿಯ ಗಬ್ಬೂರು ಹೋಬಳಿಯ ಕರಡಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಬೀಗ ಜಡಿಯಲಾಗಿದೆ. ಆರೇಳು ವರ್ಷಗಳಿಂದ ಶಿಕ್ಷಕರು ಶಾಲಾ ಆವರಣದಲ್ಲಿನ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 45ರಿಂದ 50 ಮಕ್ಕಳಿದ್ದಾರೆ.
ನಿರಂತರ ಹೋರಾಟ: ಕರಡಿಗುಡ್ಡ ಸರ್ಕಾರಿ ಶಾಲೆಗೆ ಸ್ವಂತ ಕಟ್ಟಡ ಒದಗಿಸಲು ಆಗ್ರಹಿಸಿ ದಲಿತ ಸಂಘಟನೆ ಮುಖಂಡರು ಗಬ್ಬೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದರು. ಪರಿಣಾಮ ಹಿಂದಿನ ಜಿಲ್ಲಾಧಿಕಾರಿ ಬಿ.ಶರತ್ ಶಾಲೆಗೆ ಸ್ವಂತ ಕಟ್ಟಡದ ಅವಶ್ಯಕತೆ ಇರುವುದನ್ನು ಮನಗಡ್ಡು ಗಬ್ಬೂರು ಹೋಬಳಿಯ ಕರಡಿಗುಡ್ಡ ಗ್ರಾಮದ ಸರ್ವೆ ನಂಬರ್ 1/*/*ರ 10.06 ಎಕರೆ ಜಮೀನಿನ ಪೈಕಿ 2 ಎಕರೆ ಜಾಗೆಯನ್ನು ಕರಡಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕಾಗಿ ರಾಯಚೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹೆಸರಿಗೆ ಕಾಯ್ದಿರಿಸುವಂತೆ 2019ರ ಜುಲೈ 7ರಂದು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಕ್ರಮ ವಹಿಸುವಂತೆ ದೇವದುರ್ಗ ತಹಶೀಲ್ದಾರರಿಗೆ ಆದೇಶದಲ್ಲಿ ತಿಳಿಸಿದ್ದಾರೆ. ತಂಬ್ ಮೂಲಕ ಆನ್ಲೈನ್ನಲ್ಲಿ ದಾಖಲಾತಿ ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ಕಂದಾಯ ಇಲಾಖೆಗೆ ವರ್ಗಾಹಿಸಬೇಕು. 5 ತಿಂಗಳಾದರೂ ಈ ಬಗ್ಗೆ ಕ್ರಮ ವಹಿಸಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಒಬ್ಬರತ್ತ ಮತ್ತೂಬ್ಬರು ಬೊಟ್ಟು ಮಾಡುತ್ತ ವಿಳಂಬ ನೀತಿ ಅನುಸರಿಸುತ್ತಿದ್ದಾರೆ.
ಮರದ ಕೆಳಗೆ ಪಾಠ: ಕರಡಿಗುಡ್ಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಬೀಗ ಜಡಿಯಲಾಗಿದೆ. ಈಗ ಕಟ್ಟಡ ಇಲ್ಲದ್ದರಿಂದ ಆರೇಳು ವರ್ಷಗಳಿಂದ ಶಿಕ್ಷಕರು ಮರದ ಕೆಳಗೆ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಮಳೆ ಬಂದರೆ ಅಘೋಷಿತ ರಜೆ ನೀಡಲಾಗುತ್ತಿದೆ, ಇಲ್ಲವೇ ಗುಡಿ ಗುಂಡಾರ, ಸಮುದಾಯ ಭವನದಲ್ಲಿ ಪಾಠ ಮಾಡಲಾಗುತ್ತಿದೆ.
ಹಳೆ ಕಟ್ಟಡದಲ್ಲಿ ಬಿಸಿಯೂಟ: ಇನ್ನು ಮಕ್ಕಳಿಗೆ ಶಾಲೆಯ ಹಳೆ ಕಟ್ಟಡದಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದ್ದು, ಆಹಾರ ಸಾಮಗ್ರಿಗಳನ್ನು ಅಲ್ಲಿಯೇ ಇರಿಸಲಾಗಿದೆ. ಕೆಲ ಮಕ್ಕಳು ಮರದ ಕೆಳಗೆ ಊಟ ಮಾಡಿದರೆ ಮತ್ತೆ ಕೆಲವರು ತಟ್ಟೆಯಲ್ಲಿ ಬಿಸಿಯೂಟ ಹಾಕಿಸಿಕೊಂಡು ಮನೆಗೆ ಹೋಗಿ ಊಟ ಮಾಡಿ ಬರುವ ಪರಿಸ್ಥಿತಿ ಇದೆ.
ಸೌಲಭ್ಯಗಳ ಕೊರತೆ: ಇನ್ನು ಶಾಲೆಗೆ ಕಟ್ಟಡವಿಲ್ಲದ್ದರಿಂದ ನೀರು, ಶೌಚಾಲಯ ಸೌಲಭ್ಯವೂ ಇಲ್ಲದಾಗಿದೆ. ಮಕ್ಕಳ ದಾಖಲಾತಿಗಳನ್ನು, ಹಾಜರಿ ಪುಸ್ತಕ ಸೇರಿ ಇತರೆ ದಾಖಲೆಗಳನ್ನು ಇಡುವುದೇ ಶಿಕ್ಷಕರಿಗೆ ಸವಾಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಅವರು ಕರಡಿಗುಡ್ಡ ಶಾಲೆ ಸ್ವಂತ ಕಟ್ಟಡಕ್ಕಾಗಿ 2 ಎಕರೆ ಜಮೀನು ಕಾಯ್ದಿರಿಸುವಂತೆ ಆದೇಶಿಸಿದ್ದರೂ ಈ ಬಗ್ಗೆ ಕ್ರಮ ವಹಿಸದ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳ ಧೋರಣೆ ಖಂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಎಚ್ಚರಿಸಿದ್ದಾರೆ.