ಅನುದಾನ ಹಂಚಿಕೆ ತಾರತಮ್ಯ-ಆಕ್ರೋಶ
ಗೊಂಚಲ ಗ್ರಾಮಗಳ ಆಯ್ಕೆಯಲ್ಲಿ ಬಿಜೆಪಿ ಸದಸ್ಯರ ಕ್ಷೇತ್ರಕ್ಕೆ ಆದ್ಯತೆ ಸಭೆಯಿಂದ ಹೊರ ನಡೆದ ಕಾಂಗ್ರೆಸ್ ಸದಸ್ಯರು
Team Udayavani, Dec 6, 2019, 1:12 PM IST
ದೇವದುರ್ಗ: ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್ ಸದಸ್ಯ ಕ್ಷೇತ್ರಗಳನ್ನು ಕಡೆಗಣಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರನಡೆದ ಪ್ರಸಂಗ ಜರುಗಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ಹನುಮಂತ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ನ ತಾಪಂ ಸದಸ್ಯ ಗೋವಿಂದರಾಜ್ ನಾಯಕ ಕೊತ್ತದೊಡ್ಡಿ, ತಾಲೂಕು ಪಂಚಾಯಿತಿಯ 2 ಕೋಟಿ ಅನುದಾನದಡಿ ಹರಿಜನ ಗಿರಿಜನ ಯೋಜನೆಯಡಿ ಕಾಂಗ್ರೆಸ್ ಸದಸ್ಯರ ಕ್ಷೇತ್ರಗಳನ್ನು ಕಡೆಗಣಿಸಿ ಬಿಜೆಪಿ ಸದಸ್ಯರ ಕ್ಷೇತ್ರದ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ, 19
ಬಿಜೆಪಿ ಸದಸ್ಯರ 5 ಗೊಂಚಲ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಕಾಂಗ್ರೆಸ್ ಸದಸ್ಯರನ್ನು ಪರಿಗಣಿಸಿ ಗ್ರಾಮ ಆಯ್ಕೆ ಮಾಡುತ್ತೇನೆ ಎಂದರು. ಇದಕ್ಕೆ ತಾಪಂ ಸದಸ್ಯ ಗೋವಿಂದರಾಜ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉಳಿದ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿ ಸಭೆಯಿಂದ ಹೊರಹೋದರು.
ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಮನವೊಲಿಸಿ ಸಭೆಗೆ ಕರೆತಂದರು. ನಂತರ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ಗೋವಿಂದರಾಜ್ ಟೀಕಿಸಿದರು. ಹೀಗಾಗಿ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಕ್ಷೇತ್ರ ಸಂಪನ್ಮೂಲ ಅಧಿ ಕಾರಿ ಶಿವರಾಜ ಬಿರಾದಾರ, ಶಿಕ್ಷಣ ಇಲಾಖೆ ಪ್ರಗತಿ ಕುರಿತು ಮಾಹಿತಿ ನೀಡುತ್ತಿದ್ದಂತೆ, ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿ ಏಕೆ ಸಭೆಗೆ ಬಂದಿಲ್ಲ ಎಂದು ಪ್ರಶ್ನಿಸಿದರು. ಕೋರ್ಟ್ ಕೆಲಸದ ನಿಮಿತ್ತ ಹೋಗಿದ್ದಾರೆ ಎಂದು ಅಧಿ ಕಾರಿ ಸಭೆಗೆ ತಿಳಿಸಿದರು.
ಪ್ರತಿ ಸಭೆಯಲ್ಲೂ ಕೋರ್ಟ್ ನೆಪ ಹೇಳಿ ಗೈರಾಗುವುದು ಸರಿಯಲ್ಲ ಎಂದು ಅಧ್ಯಕ್ಷರು ಹೇಳಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ತಾಪಂ ಸದಸ್ಯ ಗೋವಿಂದರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕಳೆದ ಸಭೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ. ವಿನಾಕಾರಣ ಶಿಕ್ಷಣ ಇಲಾಖೆ ಅಧಿಕಾರಿಗೆ ತೊಂದರೆ ನೀಡುತ್ತಿದ್ದಿರಿ ಎಂದು ಹೇಳಿದರು.
ತಾಲೂಕಿನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಕಟ್ಟಡಗಳ ಉದ್ಘಾಟನೆಗೆ ಶಾಸಕರು 25ರ ನಂತರ ಕಾರ್ಯಕ್ರಮ ನಿಗದಿಗೊಳಿಸಿದ್ದಾರೆ. ಹೀಗಾಗಿ ಕಾಮಗಾರಿ ಪೂರ್ಣಗೊಂಡ ಶಾಲೆ, ಅಂಗನವಾಡಿ ಸೇರಿ ಇತರೆ ಕಟ್ಟಡಗಳ ಮಾಹಿತಿ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಹಳ್ಳದ ಪಕ್ಕದ ಜಮೀನಿರುವ ರೈತರಿಗೆ ಡೀಸೆಲ್ ಇಂಜಿನ್ ಅನುಕೂಲವಾಗುತ್ತವೆ. ಆದರೆ ಕೃಷಿ ಇಲಾಖೆಯಲ್ಲಿ ಅನುದಾನ ಇದ್ದರೂ ಅರ್ಹ ರೈತರಿಗೆ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅನುದಾನ ವಾಪಸ್ ಹೋಗುತ್ತಿದೆ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ನಿರ್ದೇಶಕಿ ಪ್ರಿಯಾಂಕಾ, ಖಾಸಗಿ ಏಜೆನ್ಸಿ ಮೂಲಕ ಡೀಸೆಲ್ ಇಂಜಿನ್ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು.
ಸೆಪ್ಟೆಬಂರ್ ತಿಂಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.
ಸಮಗ್ರ ಕೃಷಿ ಅಭಿಯಾನ ಕುರಿತು ರೈತರಿಗೆ ಮಾಹಿತಿ ನೀಡದೇ ಅಂಗಡಿ ಮಾಲೀಕರಿಗೆ ನೀಡಲಾಗುತ್ತಿದೆ. ಈ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತೆ ಕಾಣುತ್ತಿದೆ ಎಂದು ಜಾಲಹಳ್ಳಿ ತಾಪಂ ಸದಸ್ಯ ಗೋವಿಂದರಾಜ ನಾಯಕ ಆರೋಪಿಸಿದರು. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಜಾಗೃತಿ ಮೂಡಿಸಲು ಕಟ್ಟುನಿಟ್ಟಾಗಿ ಸೂಚಿಸುವುದಾಗಿ ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದರು.
ತಾಲೂಕಿನಲ್ಲಿ ಹೊಸದಾಗಿ 85 ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಬೇಕಿದೆ ಎಂದು ಸಿಡಿಪಿಒ ಎಸ್.ಬಿ. ಹೊಸಮನಿ ಸಭೆಗೆ ತಿಳಿಸಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಅನುದಾನ ಬರುತ್ತದೆ. ಹೀಗಾಗಿ ಅಗತ್ಯವಿರುವಷ್ಟು ಕೇಂದ್ರಗಳ ಪ್ರಸ್ತಾವನೆ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಆರೋಗ್ಯ, ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಸೇರಿ ಇತರೆ ಇಲಾಖೆ ಅ ಧಿಕಾರಿಗಳು ಪ್ರಗತಿ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ನಾಡಗೌಡ ಚಿಂಚೋಡಿ, ತಾಪಂ ಸದಸ್ಯ ಗೋಪಾಲಪ್ಪಗೌಡ ಚಿಂತಲಕುಂಟಿ, ಜಿಪಂ ಎಇಇ ವೆಂಕಟೇಶ ಗಲಗ ಸೇರಿ ಇತರರು ಇದ್ದರು.