ತುಂಬಿದ ಬಮ್ಮನಜೋಗಿ ಕೆರೆಗೆ ಗಂಗಾ ಪೂಜೆ-ಬಾಗಿನ
Team Udayavani, Oct 25, 2019, 6:45 PM IST
ದೇವರಹಿಪ್ಪರಗಿ: ಗ್ರಾಮದ ಎಲ್ಲ ರೈತ ಸಮುದಾಯಕ್ಕೆ ಆಧಾರವಾದ ಕೆರೆ ಭರ್ತಿಯಾಗಿದ್ದು, ವರ್ಷದುದ್ದಕ್ಕೂ ಸದುಪಯೋಗವಾಗುವಂತಾಗಲಿ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಬಮ್ಮನಜೋಗಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಈಚೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕಾಲುವೆ ಮೂಲಕ ತಾಲ್ಲೂಕಿನ ಎಲ್ಲ ಕೆರೆ, ಹಳ್ಳಗಳಿಗೆ 2 ಹಂತದಲ್ಲಿ ನೀರು ಹರಿಸಲಾಗುತ್ತಿದೆ. ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಗುತ್ತಿದೆ. ಈ ಸಮಯದಲ್ಲಿ ವರುಣ ದೇವನು ಅಭಯ ನೀಡುತ್ತಿದ್ದಾನೆ. ಹೀಗಾಗಿ ಮತಕ್ಷೇತ್ರದಾದ್ಯಂತ ಉತ್ತಮ ಮಳೆಯಾಗಿದೆ. ಜೊತೆ ಕಾಲುವೆ ನೀರು ಸಾಕಷ್ಟು ಹರಿಯುತ್ತಿರುವುದರಿಂದ ಈ ಬಾರಿ ಕುಡಿಯುವ ನೀರಿನ ಹಾಹಾಕಾರ ತಲೆದೋರಲಾರದು ಎಂದು ಆಶಿಸೋಣ ಎಂದರು.
ನಂತರ ಗ್ರಾಮಸ್ಥರ ಸನ್ಮಾನದೊಂದಿಗೆ ಅವರ ಮನವಿಗೆ ಸ್ಪಂದಿಸಿ ಬಸ್ ಕಾಣದ ಗ್ರಾಮಕ್ಕೆ ಆದಷ್ಟು ಬೇಗ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಸರಕಾರಿ ಶಾಲೆ ಕೊಠಡಿಗಳ ನಿರ್ಮಾಣಕ್ಕಾಗಿ ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು, ಗ್ರಾಮಸ್ಥರ ಅಸಹಕಾರದಿಂದ ವಿಳಂಬವಾಗುತ್ತಿರುವ ಕುರಿತು ಖೇದ ವ್ಯಕ್ತಪಡಿಸಿದ ಶಾಸಕರು, ಇಂಥ ಕಾರ್ಯಗಳಿಗೆ ಸಹಕಾರ ನೀಡುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕನ್ನೋಳ್ಳಿ ಹಿರೇಮಠ ಅಭಿನವ ಸಿದ್ಧಲಿಂಗ ಶ್ರೀಗಳು, ಬಿಜೆಪಿ ಮುಖಂಡ ಶಂಕರ ಬಗಲಿ, ಬಾಪುಗೌಡ ಪಾಟೀಲ ವಡವಡಗಿ, ಗ್ರಾಪಂ ಅಧ್ಯಕ್ಷ ಪೈಗಂಬರ್ ಮುಲ್ಲಾ, ತಾಪಂ ಸದಸ್ಯ ದಿಲೀಪ ರಾಠೊಡ, ರಮೇಶ ಮಸಬಿನಾಳ, ಬಸವರಾಜ ಕಲ್ಲೂರ, ಎಸ್.ಕೆ. ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಎಇ ಎಸ್.ಎಂ.ಅಲ್ದಿ, ವೈ.ಬಿ. ಭಂಟನೂರ, ಎಂ.ಎಸ್.ಬಿರಾದಾರ, ಮಲ್ಲನಗೌಡ ಬಿರಾದಾರ, ಆರ್.ಎಂ.ಪಾಟೀಲ, ಎಂ.ಡಿ.ಕೋಣಶಿರಸಗಿ, ಸಿದ್ದು ಬಿರಾದಾರ, ದೇಸು ನಾಯಕ, ಲಕ್ಷ್ಮಣ ನಂದಗೇರಿ, ರಾಜಶೇಖರ ಕೋಣಶಿರಸಗಿ, ಸಂಗನಗೌಡ ಪಾಟೀಲ, ಶರಣು ಬಿರಾದಾರ, ಅಣ್ಣುಗೌಡ ಪಾಟೀಲ ಇದ್ದರು.