5 ದಿನಕ್ಕೊಮ್ಮೆ ನೀರು ಏನಾಯ್ತು ವಾಗ್ದಾನ
Team Udayavani, Oct 18, 2019, 11:02 AM IST
ಹುಬ್ಬಳ್ಳಿ: ಸಾಕಷ್ಟು ನೀರಿದೆ, ಪೂರೈಕೆ ಜಾಲವಿದೆ, ಸಿಬ್ಬಂದಿ ಇದೆ, ನೀರು ಪೂರೈಕೆ ಪ್ರತ್ಯೇಕ ಕೆಲಸಕ್ಕಾಗಿಯೇ ಜಲಮಂಡಳಿ ಇದೆ. ಇನ್ನು ಮುಂದೆ ಐದು ದಿನಕ್ಕೊಮ್ಮೆ ನೀರು ಪೂರೈಕೆ ಎಂಬ ವಾಗ್ಧಾನ ಮೊಳಗಿ ಒಂದೂವರೆ ತಿಂಗಳಾಗುತ್ತಿದೆ. ಆದರೂ ಎಂಟು ದಿನಕ್ಕೊಮ್ಮೆ ನೀರು ಕಾಣುವ ಸ್ಥಿತಿ ತಪ್ಪಿಲ್ಲ. ಎಲ್ಲವೂ ಇದ್ದರೂ ಐದು ದಿನಕ್ಕೊಮೆ ನೀರು ಯಾಕಿಲ್ಲ? ಎಂಬುದು ಅವಳಿನಗರ ಜನತೆಯನ್ನು ಕಾಡುವ ಯಕ್ಷಪ್ರಶ್ನೆಯಾಗಿದೆ.
ಮಲಪ್ರಭಾ ಜಲಾಶಯ ಭರ್ತಿಯಾಗಿದೆ. ಅಷ್ಟೇ ಅಲ್ಲ ಸುಮಾರು 40 ವರ್ಷಗಳಲ್ಲಿ ಇದೇ ಮೊದಲ ಬಾರಿ ಎನ್ನುವಂತೆ ದಾಖಲೆ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಹಾಕಲಾಗಿದೆ. 2-3 ವರ್ಷಗಳಿಂದ ಬರಿದಾಗಿದ್ದ ನೀರಸಾಗರ ಜಲಾಶಯ ಮೈದುಂಬಿದೆ. ಸಗಟು ನೀರಿನ ಕೊರತೆ ನೆಪ ಇಲ್ಲವಾದರೂ ಹು-ಧಾ ಜನತೆ ಮಾತ್ರ ಐದು ದಿನಕ್ಕೊಮ್ಮೆ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ.
ಅದೇ ಹಾಡು ಅದೇ ರಾಗ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು, ಜಲಮಂಡಳಿ, ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ನೀರು ಪೂರೈಕೆ ಕುರಿತಾಗಿ ಚರ್ಚಿಸಿದ್ದರು. ಐದು ದಿನಕ್ಕೊಮ್ಮೆ ನೀರು ನೀಡಲು ಸೂಚನೆ ನೀಡಿದ್ದರು. ನೀರಸಾಗರ ಜಲಾಶಯಕ್ಕೂ ಭೇಟಿ ನೀಡಿ ಅಲ್ಲಿನ ನೀರು ಸಂಗ್ರಹದ ಮಾಹಿತಿ ಪಡೆದಿದ್ದರು. ಸಗಟು ನೀರಿಗೆ ತೊಂದರೆ ಇಲ್ಲ ಇನ್ನು ಮುಂದೆ ಅವಳಿನಗರಕ್ಕೆ ಐದು ದಿನಕ್ಕೊಮ್ಮೆ ನೀರು ನೀಡಬೇಕೆಂದು ಕಳೆದ ತಿಂಗಳು 9ರಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಮೂರು ದಿನಕ್ಕೊಮ್ಮೆ ನೀರು ನೀಡಬೇಕೆಂಬ ಸಚಿವರು ಹಾಗೂ ಕೆಲ ಮುಖಂಡರ ವಾದಕ್ಕೆ ಜಲಮಂಡಳಿ ಅಧಿಕಾರಿಗಳು ಅದು ಸಾಧ್ಯವಾಗದು, ಆರು ದಿನಕ್ಕೊಮ್ಮೆ ನೀರು ನೀಡುತ್ತೇವೆ ಎಂದಿದ್ದರು. ಕೊನೆಗೆ ಐದು ದಿನಕ್ಕೊಮ್ಮೆ ಎಂದು ನಿಗದಿ ಪಡಿಸಲಾಗಿತ್ತು. ಇದಾವುದು ಜಾರಿಗೆ ಬಂದಿಲ್ಲ. ಜಲಮಂಡಳಿಯವರು ನೀರು ಪೂರೈಕೆ ಸಭೆ ಕರೆದರೆ ಸಾಕು ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಹೊಸದೊಂದು ಹೂಡಿಕೆ ಯೋಜನೆ ಪ್ರಸ್ತಾಪ ಸಲ್ಲಿಸಿ, ಇದನ್ನು ಪೂರೈಸಿದರೆ ಸಾಕು 3-4 ದಿನಕ್ಕೊಮ್ಮೆ ನೀರು ನೀಡಬಹುದು ಎಂದು ಹೇಳುತ್ತಾರೆ. ಯೋಜನೆ ಜಾರಿಗೊಂಡ ನಂತರವೂ ಮತ್ತದೇ ಹಾಡು, ಅದೇ ರಾಗ ಎನ್ನುವಂತಾಗಿದೆ.
ಅವಳಿನಗರದಲ್ಲಿ ಅದೇ ಹಾಡು ಅದೇ ಪಾಡು : ಅವಳಿನಗರದಲ್ಲಿ ಒಟ್ಟು ಜನವಸತಿ ಪ್ರದೇಶವನ್ನು ಗಣನೆಗೆ ತೆಗೆದುಕೊಂಡರೆ, ಇನ್ನು ಶೇಕಡಾ 34 ಜನವಸತಿ ಪ್ರದೇಶಕ್ಕೆ ಜಲಮಂಡಳಿಯಿಂದ ನೀರು ಪೂರೈಕೆ ಸಂಪರ್ಕ ಸಾಧ್ಯವಾಗಿಲ್ಲ. ನೀರು ಪೂರೈಕೆ ಯೋಜನೆ ಹೆಸರಲ್ಲಿ ವೆಚ್ಚವಾದ ಹಣದ ಲೆಕ್ಕ ನೋಡಿದರೆ ಎಂತಹವರನ್ನು ದಂಗು ಬಡಿಸುವಂತಿದೆ. ಸಗಟು ನೀರಿಗೆ ಕೊರತೆ ಇಲ್ಲ, ಪೂರೈಕೆ ಜಾಲಕ್ಕೂ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಇಚ್ಛಾಶಕ್ತಿಯದ್ದಷ್ಟೆ. ಜಲಮಂಡಳಿಯಲ್ಲಿ ಇದ್ದ ಅಧಿಕಾರಿಗಳು ನಿವೃತ್ತಿ ಇಲ್ಲವೆ ವರ್ಗಾವಣೆಗೊಂಡಿದ್ದಾರೆ. ಕಿರಿಯ ಎಂಜಿನಿಯರ್ರಿಂದ ಹಿಡಿದು ಅಧೀಕ್ಷಕ ಎಂಜಿನಿಯರ್ ವರೆಗೆ ಎಲ್ಲರೂ ಹೊಸಬರು. ಇದ್ದ ವ್ಯವಸ್ಥೆ ಹೇಗಿದೆಯೋ ಹಾಗೆ ಸಾಗಲಿ ಎಂಬ ಮನೋಭಾವವೇ ಐದು ದಿನಕ್ಕೊಮೆ ನೀರು ನೀಡಿಕೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನಾದರೂ ಜಲಮಂಡಳಿಯವರು ಐದು ದಿನಕ್ಕೊಮ್ಮೆ ನೀರು ನೀಡುವರೇ ಕಾದು ನೋಡಬೇಕು.
ಕಾಸು ಖರ್ಚಾಗಿದ್ದಷ್ಟೇ,ನಳ ಬರೋದು ವಿಳಂಬ : ಅವಳಿನಗರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ವಿಶ್ವಬ್ಯಾಂಕ್ ನೆರವು, 13 ಮತ್ತು 14ನೇ ಹಣಕಾಸು ಆಯೋಗದಿಂದ ಬಂದ ಹಣವನ್ನು ಹೊರತು ಪಡಿಸಿ, ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 500 ಕೋಟಿ ರೂ. ಅನುದಾನ ನೀಡಿದ್ದರು. ಇಷ್ಟೊಂದು ದೊಡ್ಡ ಮೊತ್ತದ ಹಣ ವೆಚ್ಚವಾಗಿದ್ದು, ಜನತೆಗೆ ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ನೀಡಬೇಕಾಗಿತ್ತು. ಹೋಗಲಿ ನಾಲ್ಕು, ಐದು ದಿನಕ್ಕೊಮ್ಮೆಯಾದರೂ ನೀರು ನೀಡಬೇಕಾಗಿತ್ತು. ಅದರ ಬದಲು ಎಂಟು, ಹತ್ತು, ಹನ್ನೆರಡು ದಿನಕ್ಕೊಮ್ಮೆ ನೀರು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಪಾಲಿಕೆಗಿನ್ನೂ ಬಿರುಬೇಸಿಗೆ ಮುಗಿದಿಲ್ವೆ? : ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಕೆ ಆಸರೆಯಾಗಿದ್ದ ನೀರಸಾಗರ ಜಲಾಶಯ ಮಳೆ ಕೊರತೆಯಿಂದ 2-3 ವರ್ಷಗಳಿಂದ ಬರಿದಾಗಿತ್ತು. ಅಲ್ಲಿನ ನೀರಿನ ಕೊರತೆ ನೀಗಿಸಲೆಂದು ಮಲಪ್ರಭಾದಿಂದ ಪಡೆಯುವ ನೀರಿನಲ್ಲಿಯೇ ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಕೆ ಹಿನ್ನೆಲೆಯಲ್ಲಿ, ನೀರು ಪೂರೈಕೆಯನ್ನು ಎಂಟು-ಹತ್ತು ದಿನಗಳಿಗೆ ಜಾರಿಗೊಳಿಸಲಾಗಿತ್ತು. ಬೇಸಿಗೆಯಲ್ಲಿ ಇದು 10-12 ದಿನಕ್ಕೆ ಹೋಗಿತ್ತು. ಇದೀಗ ಉತ್ತಮ ಮಳೆಯಾಗಿದೆ, ನೀರಸಾಗರ ಜಲಾಶಯ ತುಂಬಿದೆ. ಜನತೆಗೆ ನೀರು ಪೂರೈಕೆಯನ್ನು ಕನಿಷ್ಠ ಐದು ದಿನಕ್ಕಾದರೂ ನೀಡಬೇಕೆಂಬ ಸೂಚನೆ ನೀಡಿ ಒಂದೂವರೆ ತಿಂಗಳು ಕಳೆಯುತ್ತಿದ್ದರೂ, ಇಂದಿಗೂ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ ನಿಂತಿಲ್ಲ.
ವಿಪರ್ಯಾಸ ಅಂದ್ರೆ ಇದೇ ನೋಡಿ! : ಹು-ಧಾ ಮಹಾನಗರ ಪ್ರಾಯೋಗಿಕ 24/7 ನೀರು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂಬ ಹೆಗ್ಗಳಿಕೆಯೊಂದಿಗೆ ದೇಶದ ಅನೇಕ ರಾಜ್ಯಗಳ ನಿಯೋಗ ಅವಳಿನಗರಕ್ಕೆ ಆಗಮಿಸಿ ಯೋಜನೆ ವೀಕ್ಷಿಸಿ ಹೋಗಿವೆ. ಆದರೆ, ಇದೇ ಅವಳಿನಗರದಲ್ಲಿ ಇಂದಿಗೂ ಹೆಚ್ಚಿನ ಸಂಖ್ಯೆಯ ವಾರ್ಡ್ಗಳು ಎಂಟು ದಿನಕ್ಕೊಮ್ಮೆ ನೀರಿಗೆ ಪರದಾಡುವಂತಾಗಿದೆ
ನೀರಸಾಗರ ತುಂಬಿದೆ, ಮಲಪ್ರಭಾದಿಂದ ಅಗತ್ಯವಿದ್ದಷ್ಟು ನೀರು ಪಡೆಯಬಹುದಾಗಿದೆ. ನೀರು ಪೂರೈಕೆ ಜಾಲವೂ ಇದೆ ಇಷ್ಟಾದರೂ ಐದು ದಿನಕ್ಕೊಮೆ ನೀರು ಪೂರೈಕೆ ಯಾಕೆ ಸಾಧ್ಯವಾಗುತ್ತಿಲ್ಲವೋ ತಿಳಿಯದಾಗಿದೆ. ಉತ್ತಮ ಮಳೆ, ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಎಂಟು-ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ ಯಾಕೆ ಎಂದು ವಾರ್ಡ್ ಜನತೆ ನಮ್ಮನ್ನು ಕೇಳುತ್ತಾರೆ. ಪಾಲಿಕೆ ಆಡಳಿತ ಮಂಡಳಿಯೂ ಅಸ್ತಿತ್ವದಲ್ಲಿ ಇಲ್ಲ. ನಾವು ಪಾಲಿಕೆ ಮಾಜಿ ಸದಸ್ಯರಾಗಿದ್ದೇವೆ. ಜನರ ಭಾವನೆ ಅಧಿಕಾರಿಗಳಿಗೆ ತಿಳಿಸಿದರೂ ಅವರಿಗೆ ಅದು ಅರ್ಥವಾಗಿಲ್ಲ ಅಥವಾ ನಮ್ಮ ಅನಿಸಿಕೆಗಳನ್ನು ಅವರು ಲಘುವಾಗಿ ಪರಿಗಣಿಸಿದಂತಿದೆ. ನನ್ನ ಪ್ರಕಾರ ಮೂರು ದಿನಕ್ಕೊಮ್ಮೆ ನೀರು ನೀಡಲು ಯಾವುದೇ ತೊಂದರೆಯಂತೂ ಇಲ್ಲವೇ ಇಲ್ಲ. -ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
MUST WATCH
ಹೊಸ ಸೇರ್ಪಡೆ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್
Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ