“ಜಲಜೀವನ’ಕ್ಕೆ 3 ಜಿಲ್ಲೆಗೆ 5406 ಕೋಟಿ
ವಿಜಯಪುರಕ್ಕೆ 2385 ಕೋಟಿರಾಯಚೂರಿಗೆ 1,988-ಧಾರವಾಡಕ್ಕೆ 1032 ಕೋಟಿ ಅನುದಾನ
Team Udayavani, Jun 16, 2021, 2:54 PM IST
ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಂದಾಜು 5,406.49 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ 30 ತಿಂಗಳಲ್ಲಿ ಮೂರು ಜಿಲ್ಲೆಗಳ ಸುಮಾರು 2,847 ಗ್ರಾಮೀಣ ಜನವಸತಿ ಹಾಗೂ ಅನೇಕ ನಗರ ಸ್ಥಳೀಯ ಸಂಸ್ಥೆ ಪ್ರದೇಶಗಳು ಜಲಭಾಗ್ಯ ಪಡೆಯಲಿವೆ.
ಧಾರವಾಡ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನಬಾರ್ಡ್ ನಿಡಾ ಸಹಾಯಧನ ಹಾಗೂ ಕೇಂದ್ರ ಮತ್ತು ರಾಜ್ಯಗಳ ಸರಕಾರಗಳ ಅನುದಾನದೊಂದಿಗೆ ಜಲಜೀವನ ಮಿಷನ್ದಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ದೊರೆತಿದೆ. ಮೂರು ಜಿಲ್ಲೆಗಳಿಗೆ ಎಷ್ಟು ಅನುದಾನ ಎಂಬುದನ್ನು ಸಹ ಹಂಚಿಕೆ ಮಾಡಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕೆಲವೊಂದು ಕಡೆಗಳಲ್ಲಂತೂ ಬೇಸಿಗೆ ಆರಂಭಕ್ಕೆ ಮುನ್ನವೇ ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾದ ಸ್ಥಿತಿ ಇದೆ. ಅನೇಕ ಗ್ರಾಮಗಳಿಗೆ ಕೆರೆ-ಹಳ್ಳಗಳು ಆಸರೆಯಾಗಿದ್ದರೆ, ಇನ್ನು ಕೆಲವು ಕಡೆ ಕೊಳವೆ ಬಾವಿಗಳು ನೀರಿನ ಪೂರೈಕೆ ಮಾಡುತ್ತಿವೆ.
ಜನರಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ನೀಡುವ ಉದ್ದೇಶದೊಂದಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರದ ಜಲಜೀವನ ವಿಷನ್ ಇದಕ್ಕೆ ಮಹತ್ವದ ಸಾಥ್ ನೀಡುತ್ತಿದೆ. ಜಲಜೀವನ ಮಿಷನ್ ಅಡಿಯಲ್ಲಿ ಮೂರು ಜಿಲ್ಲೆಗಳಿಗೆ ನೀಡಲಾದ ಅಂದಾಜು ಒಟ್ಟು 5,406 ಕೋಟಿ ರೂ.ಗಳಲ್ಲಿ ವಿಜಯಪುರ ಜಿಲ್ಲೆ ಹೆಚ್ಚಿನ ಅನುದಾನ ಪಡೆದಿದ್ದು, ಎರಡು ಪ್ಯಾಕೇಜ್ಗಳಲ್ಲಿ ಒಟ್ಟು 2,385.99 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.