ಇಂವಾ ಯಾವ ಊರಿನ ಮಾವಾ ಏನ್ ಚಲುವ…
Team Udayavani, Jan 5, 2019, 12:30 AM IST
ಧಾರವಾಡ: ಇಂವಾ ಯಾವ ಊರಿನ ಮಾವ ಏನ್ ಚಲುವ.. ನೋಡಯವ್ವಾ ಹುಡುಗನ…
ಹೌದ್ರಿ ಈ ಹಾಡ ಏನ್ ತನ್ನ ಬಗ್ಗೇನ ಬರಕೊಂಡಾನ ಈ ಚಲುವ ಅನ್ನೊಹಾಂಗಿತ್ತ ನೋಡ್ರಿ ಕಂಬಾರ ಅಜ್ಜನ ಸಮ್ಮೇಳನಾಧ್ಯಕ್ಷರ ಮೆರವಣಿಗಿ. ನೋಡಿದಾವೆಲ್ಲಾ ಈ ಚಲುವ ಈಗ ಹಿಂಗದಾನು ಇನ್ ವಯಸ್ಸಿನ್ಯಾಗ ಹೆಂಗಿರಬ್ಯಾಡಾ ಅಂತೇನಿ…ಅಂತ ನೋಡಿದಾವ್ರಾಲ್ಲಾ ಮಾತಾಡ್ಕೊಂಡ್ರ ಹೋಗ್.
ತಲಿಗೆ ಪಟಗಾ ಸುತ್ತಿದ ಡವಲೇನು? ಅಂವಾ ನಾಚಕೋತ ಕುಂತ ಧಿಗರ್ ಏನು? ಅಬ್ಬಬಾಬಾ…. ಹೇಳಾಕ ವಲ್ಯನಾ ಅದನ್…
ಇಷ್ಟ ವಯಸಾದ್ರು ಹುಡಗ ಇನ್ನೂ ಹರೇದಾವ್ರಂಗ ಹರ್ಯಾಗ ಎದ್ದ ಕುಂತ ಬಿಟ್ಟಾ ಇವತ್ತ. ಮಸ್ತ ಬಿಸಿನಿರ್ ಜಳಕಾ ಹೊಡದ್, ಲಿಂಗಪೂಜಿ ಮಾಡಕೊಂಡಂವಾ ಅಂದ್ರ, ಸಮ್ಮೇಳನಾಧ್ಯಕ್ಷರಿಗಂತ ಸಜ್ಜ ಮಾಡಿ ಇಟ್ಟಿದ್ದ ರಥದಾಗ ಕುಂತಾ ನೋಡ್ರಿ. ಹಾ.ಹಾ… ಹಂಗ… ಶಿವಾಪೂರದ ದೇಸಾಯಿ ಬಂದಂಗಾತು. ಮೆರವಣಿಗೆ ಮುಂದಕ ಹೊಂಟತು.
ಕೆಸಿಡಿ ಸರ್ಕಲ್ ಅಂದ್ರ ಒಂದ ಕಾಲದಾಗ ಈ ಚಲುವ ಚಲುವ್ಯಾರನ್ನ ನೋಡಕೊಂತ ಅಡ್ಯಾಡಿದ ಜಗಾ. ಮುಂದ ಹೆಜ್ಜಿ ಮ್ಯಾಳ, ಜಗ್ಗಲಿಗಿ ಅವಾಜ್ ಜೋರಾದಾದಂಗ ನಮ್ಮ ಚಲುವಗ ಹಳೇ ನೆನಪು ಕಣ್ಣಮುಂದ ಗುಂಯ್ ಗುಂಯ್ ಅನಕೊಂತ ಬಂದ ಹೋದು. ಎಪ್ಪಾ ಶಿವನ್ ಏನ ಹೇಳಲಿ ಅದರ ಡೌವಲನ್. ನೋಡಾವ್ರ ಕಣ್ಣಿಗೆ ಹಬ್ಬನ ಹಬ್ಬ ಹೋಗ್.
ಮೆರವಣಿಗೆ ಕೆಸಿಡಿ ದಾಟಿ ಜ್ಯುಬಿಲಿ ಸರ್ಕಲ್ನ್ಯಾಗ ಬರತಿದ್ದಂಗ ಚಲುವಗ ಒಮ್ಮೆ ಝಳಕ್ ಹೊಡದಂಗಾತ್. ಧಾರವಾಡಕ್ಕ ಓದಾಕ ಬಂದಾಗ ಇದ ಕತ್ರಾಗ ಗೋಕಾಕ-ಧಾರವಾಡ ಕೆಂಪ ಬಸ್ ಇಳದು ನಿಂತಿದ್ದ ಅಜ್ಜಗ ನೆನಪಾತು. ಮೆರವಣಿಗ್ಯಾಗ ಡೊಳ್ಳ ಕುಣಿತ ಜೋರಿದಿದ್ದ ನೋಡಿ ಕಲಾಭವನ ಕಡೆ ಒಮ್ಮೆ ಕಣ್ಣು ಹಾಯಿಸಿದ ಈ ಜೋಕುಮಾರ. ಪಂ.ಮಲ್ಲಿಕಾರ್ಜುನ್ ಮನ್ಸೂರ್ರ ನೆನಪಾತೇನೋ, ಒಮ್ಮೆ ಮುಗುಳ್ನಕ್ಕ ಜೋಕುಮಾರ ಸ್ವಾಮಿ. ಅಲ್ಲಿಂದ ಮೆರವಣಿಗೆ ಹಳೇ ಎಸ್ಪಿ ಕಚೇರಿ ದಾಟತ ನೋಡ್ರಿ, ಚಲುವನ ನಗಿ ಒಡದ ಬಿಟ್ಟತು. ಬಾಜುಕ ಕುಂತಿದ್ದ ಶ್ರೀಮತಿನ ಒಮ್ಮೆ ನೋಡಿದಾ. ಒಮ್ಮೆಲೆ ಶಿವಾಪುರ ನೆನಪಾತು.
ಅಲ್ಲಿಂದ ಮೆರವಣಿಗಿ ಪುರಮಾಶ್ಯಾಗಿ ಸಾಗಾಕತ್ತು. ಎಸ್ಪಿ ಕಚೇರಿ ಮುಂದ ಬರತಿದ್ದಂಗ ಎದರಿಗೆ ಗೋಕಾಕ ತಾಲೂಕ ಸುಣದಳ್ಳಿಯ ಮಲ್ಲೇಶಪ್ಪ ಕಣ್ಣಿಗ ಬೀಳಬೇಕ. ಏ ಮಲ್ಲೇಶಿ.., ಅಂದ ಚಲುವ. ಮಲ್ಲೇಶಿನು ತಡಾ ಮಾಡಲಿಲ್ಲ. ಓಡಿ ಹೋದಾಂವ, ಕೈ ಕೊಟ್ಟು ದೋಸ್ತ ಏನ್ ಚಲೋ ಕಾಣತ್ತಿಯೋ…ಅಂದಾ, ಚಲುವ ಒಮ್ಮೆ ನಕ್ಕಂವಾನ, ಅಲ್ಲಿ ಸಮ್ಮೇಳನಕ್ಕ ಬಾರೋ.. ಅಂತೇಳಿ ಮುಂದ ಹೊಂಟಾ. ಮಲ್ಲೇಶಿಗೆ ಕರದಂಟ ತಿಂದಷ್ಟ ಖುಷಿಯಾಗಿ ಆಜುಬಾಜು ಇದ್ದವರಿಗೆಲ್ಲಾ ಹೇಳಾಕತ್ತ ನೋಡ್ರಿ ಹಳಿ ನೆನಪಗೋಳ್ನ. ಛೇ..ಛೇ…ಏನ ರೂಪ ಹಾಂ… ಘೋಡಗಿರಿ ಶಾಲ್ಯಾಗ ಓದುಮುಂದ ಬರೀ ಕರದಂಟ ಕರದಂಟ ಅಂತೇಳಿ ಅದನ್ನ ತಿನ್ನಾಂವ, ಹಿಂಗಾಗಿ ಈಗ್ಲೂ ಕೆಂಪಗನ ಅದಾನ ನೋಡ ಚಂದ್ರು, ಅಂತಂದ.
ಒಕ್ಕಲತನದ ಕಾಲೇಜಿನ ಹತ್ರ ಬಂತನೋಡ್ರಿ ಮೆರವಣಿಗಿ…! ಚಲುವನ ಕಣ್ಣುಕೋಡಿ ತುಂಬಿಬಿದುÌ. ಸ್ಟೇಜ್ ನೋಡತಾನ ಚಲುವ, ಆಹಾ.. ಶಿವಾಪುರ ಇದ್ದಂಗ ಅನಸ್ತು. ಏನಿಲ್ಲಲ್ಲಿ, ಎಲ್ಲಾನೂ ಐತಿ. ಯಾಕಂದ್ರ ಅದು ಶಿವಾಪುರ. ಹೌದ್, ಇಡೀ ಕೃಷಿ ವಿವಿನ ಒಂದ ಶಿವಾಪುರ ಮತ್ ನಮ್ಮ ಚಲುವ ಶಿವಾಪುರದ ಘಟ್ಟಿ ಹುಡುಗ ಅನಿಸ್ತು. ಹೋಗಿ ಸಭಾದಾಗ ಕುಂದ್ರುವಾಗ ಒಮ್ಮೆ ಮನಸಿನ್ಯಾಗ ಸಾವಳಗಿ ಶಿವಲಿಂಗ, ಭೂಸನೂರು ಮಠದಯ್ಯನ ನೆನಸಿ ನಮ್ಮ ಚಲುವ ಧಿಗರ್ನಿಂದ ಕುಂತ. ನೋಡಾವ್ರ ಕಣ್ಣಿಗೆ ಹಬ್ಬ ಹಬ್ಬ ಹೋಗ್.
– ಬಸವರಾಜ ಹೊಂಗಲ್