ಕ್ರಿಮಿನಲ್ ಗಳಿಗೆ ಎನ್ಕೌಂಟರ್ ಎಚ್ಚರಿಕೆ ಗಂಟೆ: ಬೊಮ್ಮಾಯಿ
Team Udayavani, Dec 6, 2019, 9:10 PM IST
ಹುಬ್ಬಳ್ಳಿ:ಹೈದರಾಬಾದ್ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿನ ಆರೋಪಿತರ ಮೇಲೆ ನಡೆಸಿದ ಎನ್ಕೌಂಟರ್ ಹೀನ ಕೃತ್ಯ ಎಸಗುವ ಕ್ರಿಮಿನಲ್ಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಪೊಲೀಸರು ಅಲ್ಲಿರುವಂತಹ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ನಾವು ಎಲ್ಲ ಆಯಾಮಗಳನ್ನು ನೋಡಬೇಕು. ಬಂಧಿತ ಆರೋಪಿಗಳು ಅಕಸ್ಮಾತ್ ತಪ್ಪಿಸಿಕೊಂಡು ಹೋಗಿದ್ದರೆ ಅದರ ಪರಿಣಾಮ ಗಂಭೀರವಾಗಿರುತ್ತಿತ್ತು. ಈ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆಯಾದರೂ ಕ್ರಿಮಿನಲ್ಗಳಿಗೆ ಎನ್ಕೌಂಟರ್ ಎಚ್ಚರಿಕೆಯಾಗಿದೆ. ಮೇಲ್ನೋಟಕ್ಕೆ ಆರೋಪಿಗಳ ಪ್ರತಿಕ್ರಿಯೆಗೆ ಪೊಲೀಸರು ಸರಿಯಾಗಿ ಕರ್ತವ್ಯಪ್ರಜ್ಞೆ ನಿಭಾಯಿಸಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಅವರು ಕಾರ್ಯ ಮಾಡಿದ್ದಾರೆ. ಹೀನ ಕೃತ್ಯ ಮಾಡುವ ಆರೋಪಿಗಳಿಗೆ ಇದೊಂದು ತಕ್ಕ ಶಿಕ್ಷೆ. ಅಲ್ಲದೆ ವಿಶ್ವನಾಥ ಸಜ್ಜನರ ದಕ್ಷ ಅಧಿಕಾರಿಯಾಗಿದ್ದು, ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ ಎಂದರು.
ಡಿ.9ಕ್ಕೆ ಉಪ ಚುನಾವಣೆ ಫಲಿತಾಂಶ ಬರಲಿ. ಆಗ ಯಾರ್ಯಾರು ಯಾರ ಜೊತೆ ಇರುತ್ತಾರೆ ನೋಡುವಿರಂತೆ. ಕಾಂಗ್ರೆಸ್ಗೆ ಬಹುಮತ ಸಿಕ್ಕರೆ ತಾನೇ ಸಿದ್ದರಾಮಯ್ಯ ಸಿಎಂ ಆಗೋದು. ಡಿ.9ರ ನಂತರವೇ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದರು.