ಬಿಎಸ್ಎಫ್ ಯೋಧ ಮಂಜುನಾಥಗೆ ಅಂತಿಮ ನಮನ
Team Udayavani, Feb 8, 2021, 5:36 PM IST
ಹುಬ್ಬಳ್ಳಿ: ಕರ್ತವ್ಯ ಮುಗಿಸಿ ರಜೆ ಮೇಲೆ ನಗರಕ್ಕೆ ಬರುತ್ತಿದ್ದ ಇಲ್ಲಿನ ಮಂಟೂರು ರಸ್ತೆ ಸುಣ್ಣದ ಭಟ್ಟಿ ಲೇಔಟ್ ನಿವಾಸಿ, ಬಿಎಸ್ಎಫ್ ಯೋಧ ಮಂಜುನಾಥ ಎ. ಅವರು ರೈಲ್ವೆ ಪ್ರಯಾಣದ ವೇಳೆ ಆಕಸ್ಮಾತ್ ಕಾಲು ಜಾರಿ ಬಿದ್ದು ಹುತಾತ್ಮರಾಗಿದ್ದು, ಅವರ ಪಾರ್ಥಿವ ಶರೀರವು ರವಿವಾರ ನಗರಕ್ಕೆ ಆಗಮಿಸಿತು.
ಕಳೆದ 7 ವರ್ಷಗಳಿಂದ ಜಮು-ಕಾಶ್ಮೀರದ ಶ್ರೀನಗರದಲ್ಲಿ ಬಿಎಸ್ಎಫ್ನಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಅವರು, ರಜೆಗೆಂದು ನಗರಕ್ಕೆ ರೈಲು ಮುಖಾಂತರ ಆಗಮಿಸುತ್ತಿದ್ದರು. ಮೂರು ದಿನಗಳ ಹಿಂದೆ ಕೊಲ್ಕತ್ತಾದಲ್ಲಿ ರೈಲಿನಿಂದ ಇಳಿಯುವಾಗ ಆಕಸ್ಮಾತ್ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಹುತಾತ್ಮ ಯೋಧ ಮಂಜುನಾಥ ಅವರ ಪಾರ್ಥಿವ ಶರೀರವು ರವಿವಾರ ಸ್ವಗ್ರಾಮ ಹುಬ್ಬಳ್ಳಿಯ ಮಂಟೂರು ಸುಣ್ಣದ ಭಟ್ಟಿ ಲೇಔಟ್ಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಹೇಳತೀರದ್ದಾಗಿತ್ತು.
ಇದನ್ನೂ ಓದಿ :ಅಂತಿಮ ಗಡುವಿನ ಮನವಿ ನೀಡಲು ನಿರ್ಧಾರ
ಅವರ ಪಾರ್ಥಿವ ಶರೀರಕ್ಕೆ ಬಿಎಸ್ಎಫ್ ಬಟಾಲಿಯನ್ ತಂಡದಿಂದ ಅಂತಿಮ ನಮನದ ಜತೆ ಸರಕಾರಿ ಗೌರವ ಸಮರ್ಪಣೆ ಮಾಡಲಾಯ್ತು.ಈ ವೇಳೆ ರಸ್ತೆಯುದ್ದಕ್ಕೂ ಮಂಜುನಾಥ ಅಮರ ರಹೆ ಎಂಬ ಜೈಕಾರ ಮೊಳಗಿತು. ಶಾಸಕರ ಸಂತಾಪ: ನಿಧನರಾದ ಬಿಎಸ್ಎಫ್ ಯೋಧ ಮಂಜುನಾಥ ಎ. ಅವರಿಗೆ ಶಾಸಕ ಪ್ರಸಾದ ಅಬ್ಬಯ್ಯ ಸಂತಾಪ ಸೂಚಿಸಿದ್ದಾರೆ.