ಉಕದಲ್ಲಿ ಮತ್ತೆ ಉಪಚುನಾವಣೆ?
Team Udayavani, Jul 9, 2019, 2:47 PM IST
ಹುಬ್ಬಳ್ಳಿ: ತಿಂಗಳ ಹಿಂದೆಯಷ್ಟೇ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಎದುರಿಸಿದ್ದ ಉತ್ತರ ಕರ್ನಾಟಕಕ್ಕೆ ಮತ್ತೆ ಉಪ ಚುನಾವಣೆ ಸಜ್ಜಾಗಬೇಕಿದೆ. 14 ಶಾಸಕರು ನೀಡಿರುವ ರಾಜೀನಾಮೆ ಸ್ಪೀಕರ್ ಅಂಗೀಕರಿಸಿದರೆ, ಕೆಲವೇ ತಿಂಗಳಲ್ಲಿ ಮತ್ತೆ 6ಕ್ಕಿಂತ ಹೆಚ್ಚು ಕಡೆ ಉಪ ಚುನಾವಣೆ ಅನಿವಾರ್ಯವಾಗಲಿದೆ.
ಕಾಂಗ್ರೆಸ್-ಜೆಡಿಎಸ್ನ ಅನೇಕ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೀಗ ಅಧಿಕೃತ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹೊಸಪೇಟೆ ಶಾಸಕ ಆನಂದಸಿಂಗ್ ರಾಜೀನಾಮೆ ನೀಡಿದ್ದು, ಶನಿವಾರ ಕಾಂಗ್ರೆಸ್ ಹಾಗೂ ಜೆಡಿಎಸ್ನ 11 ಶಾಸಕರು ರಾಜೀನಾಮೆ ನೀಡಿದ್ದಾರೆ. ಸೋಮವಾರ ಆರ್.ಶಂಕರ್, ನಾಗೇಶ ನೀಡಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕಕ್ಕೆ ಸೇರಿದವರು 6 ಶಾಸಕರಿದ್ದಾರೆ. ಸ್ಪೀಕರ್ ರಮೇಶಕುಮಾರ ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಒಟ್ಟು ಆರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಮುಂಬೈ ಕರ್ನಾಟಕದಲ್ಲಿ ನಾಲ್ಕು ಹಾಗೂ ಹೈದರಾಬಾದ ಕರ್ನಾಟಕದಲ್ಲಿ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಆರು ಶಾಸಕರು ಕಾಂಗ್ರೆಸ್ನಿಂದಲೇ ಗೆದ್ದವರಾಗಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡು ಇದುವರೆಗೆ ರಾಜೀನಾಮೆ ನೀಡಿದ ಶಾಸಕರಲ್ಲಿ ಆರು ಜನ ಉತ್ತರ ಕರ್ನಾಟಕದವರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಟಾರ ಶನಿವಾರ ಒಂದೇ ಬಾರಿಗೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಆನಂದ ಸಿಂಗ್ ರಾಜೀನಾಮೆ ನೀಡಿಯಾಗಿದೆ.
ರಾಜೀನಾಮೆ ನೀಡುವವರ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಇನ್ನಷ್ಟು ಶಾಸಕರ ಹೆಸರುಗಳು ತೇಲಾಡುತ್ತಿವೆ. ಬಳ್ಳಾರಿ ಗ್ರಾಮಂತರ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಇದಲ್ಲದೆ ಬೆಳಗಾವಿಯ ಶಾಸಕರಾದ ಶ್ರೀಮಂತ ಪಾಟೀಲ, ಅಂಜಲಿ ನಿಂಬಾಳ್ಕರ, ಗಣೇಶ ಹುಕ್ಕೇರಿ ಹೆಸರುಗಳು ಸಹ ಸುಳಿದಾಡುತ್ತಿವೆ. ಇದು ಸಾಧ್ಯವಾದರೆ ಉತ್ತರ ಕರ್ನಾಟಕದಲ್ಲಿ ವಿಧಾನಸಭೆ ಉಪ ಚುನಾವಣೆ ನಡೆಯುವ ಕ್ಷೇತ್ರಗಳ ಸಂಖ್ಯೆ 10-12 ದಾಟಲಿದೆ.
ಎಲ್ಲೆಲ್ಲಿ ಏನೇನು?: ಇದೀಗ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರಲ್ಲಿ ಅನೇಕರು ಈ ಮೊದಲು ಬಿಜೆಪಿಯಲ್ಲಿದ್ದವರು, ಕೆಲವರು ಬಿಜೆಪಿಯಿಂದಲೇ ಶಾಸಕರಾಗಿ ನಂತರ ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. ಇದೀಗ ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಬಿಜೆಪಿಗೆ ಜಿಗಿಯುವ ಸಾಧ್ಯತೆ ಇದೆ.
ರಾಜೀನಾಮೆ ನೀಡಿದ ಶಾಸಕರ ಬಿಜೆಪಿ ಸೇರ್ಪಡೆಗೆ ಸ್ಥಳೀಯವಾಗಿ ಕೆಲವೊಂದು ವಿರೋಧಗಳು, ಈಗಾಗಲೇ ಅವರಿಂದಲೇ ಸೋಲು ಕಂಡ ಬಿಜೆಪಿ ಮಾಜಿ ಶಾಸಕರು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ರಾಜೀನಾಮೆ ನೀಡಿದ ಶಾಸಕರು ಸ್ಪರ್ಧೆಗಿಳಿಯದೆ, ಬೇರೆ ರೀತಿಯ ಸೌಲಭ್ಯ ಪಡೆಯಲಿದ್ದಾರೆ.
ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದರೆ ಅಲ್ಲಿ ಅವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾದರೆ ಸಹೋದರರ ಮಧ್ಯ ಸವಾಲ್ ನಡೆಯಲಿದೆ. ಅಥಣಿ ಕ್ಷೇತ್ರದ ಶಾಸಕ ಮಹೇಶ ಕಮಟಳ್ಳಿ ಅವರು ಬಿಜೆಪಿ ಸೇರಿದರೆ ಅಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಸ್ಥಾನ ಏನು ಎಂಬ ಪ್ರಶ್ನೆ ಉದ್ಭವಾಗುತ್ತದೆ. ಮೂಲಗಳ ಪ್ರಕಾರ ಮಹೇಶ ಕುಮಟಳ್ಳಿ ಬಿಜೆಪಿಯಿಂದ ಸ್ಪರ್ಧಿಸಿದರೆ ಲಕ್ಷ್ಮಣ ಸವದಿ ಅವರಿಗೆ ವಿಧಾನ ಪರಿಷತ್ತು ಸ್ಥಾನದ ಭರವಸೆ ಸಾಧ್ಯತೆ ಇದೆ. ಆದರೆ, ಕೆಲ ಮೂಲಗಳ ಪ್ರಕಾರ ಮಹೇಶ ಕುಮಟಳ್ಳಿಗೆ ನಿಗಮ-ಮಂಡಳಿ ಇಲ್ಲವೇ ಬೇರೆ ಅವಕಾಶ ನೀಡಿ, ಸವದಿ ಅವರನ್ನೇ ಸ್ಪರ್ಧೆಗಿಳಿಸಲಾಗುತ್ತಿದೆ ಎನ್ನಲಾಗಿದೆ.
ಕಾಗವಾಡ ಶಾಸಕ ಶ್ರೀಮಂತಗೌಡ ಪಾಟೀಲ ರಾಜೀನಾಮೆ ನೀಡಿದರೆ ಅಲ್ಲಿನ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಅವರ ನಡೆ ಏನು ಎಂಬ ಪ್ರಶ್ನೆ ಬರುತ್ತದೆ. ಅಗತ್ಯ ಬಿದ್ದರೆ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅದಲು-ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಿರೇಕೆರೂರುನಲ್ಲಿ ಬಿ.ಸಿ.ಪಾಟೀಲ ಬಿಜೆಪಿಗೆ ಬಂದರೆ ಮಾಜಿ ಶಾಸಕ ಯು.ಬಿ.ಬಣಕಾರ ಸ್ಥಾನವೇನು ಎಂಬ ಪ್ರಶ್ನೆಗೆ, ಕೆಲ ಮೂಲಗಳ ಪ್ರಕಾರ ಅವರಿಗೆ ವಿಧಾನ ಪರಿಷತ್ತು ಸ್ಥಾನ ನೀಡುವುದು, ಮುಂದಿನ ಚುನಾವಣೆಯಲ್ಲಿ ಬಿ.ಸಿ.ಪಾಟೀಲರನ್ನು ರಾಣೆಬೆನ್ನೂರು ಅಭ್ಯರ್ಥಿಯಾಗಿಸುವ ಸಂಧಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರತಾಪಗೌಡ ಪಾಟೀಲ ಈ ಹಿಂದೆ ಬಿಜೆಪಿಯಿಂದ ಶಾಸಕರಾಗಿ ಗೆದ್ದು ನಂತರ ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. ಇದೀಗ ಮತ್ತೆ ಬಿಜೆಪಿ ಹೋದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಸುಮಾರು 200 ಮತಗಳ ಅಂತರದಿಂದ ಸೋಲು ಕಂಡಿರುವ ಬಿಜೆಪಿಯ ಬಸನಗೌಡ ತುರವಿಹಾಳ ಕಾಂಗ್ರೆಸ್ ಕಡೆ ಮುಖ ಮಾಡಬಹುದೆ ಎಂಬ ಚರ್ಚೆಗಳು ಶುರುವಾಗಿವೆ. ಬಸನಗೌಡ ಅವರು ಕಾಂಗ್ರೆಸ್ನ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಬೆಂಬಲಿಗರಾದವರು ಎಂಬುದು ಗಮನಾರ್ಹ.
ಹೊಸಪೇಟೆಯಲ್ಲಿ ಶಾಸಕ ಆನಂದಸಿಂಗ್ ಸಹ ಬಿಜೆಪಿಯಿಂದ ಶಾಸಕರಾದವರು, ಅವರ ರಾಜೀನಾಮೆ ಅಂಗೀಕಾರವಾಗಿ ಬಿಜೆಪಿಗೆ ಮರಳಿದರೆ ಇವರ ವಿರುದ್ಧ ಸೋತ ಗವಿಯಪ್ಪ ಅವರ ನಡೆ ಏನಾಗಬಹುದು ಎಂಬ ಕುತೂಹಲ ಹೆಚ್ಚಿದೆ. ಅದೇ ರೀತಿ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಟಾರ ಅವರು ಬಿಜೆಪಿಗೆ ಹೋದರೆ, ಬಿಜೆಪಿಯ ವಿ.ಎಸ್.ಪಾಟೀಲ ನಡೆ ಏನಾಗುತ್ತದೆ ಎಂದು ನೋಡಬೇಕಾಗಿದೆ.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ