ಕದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಕದೀಮರು
Team Udayavani, Jun 14, 2021, 4:29 PM IST
ಹುಬ್ಬಳ್ಳಿ: ಕಳವು ಮಾಡಿದ್ದ ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಗೋಕುಲ ರಸ್ತೆ ಪೊಲೀಸರು ವಾಹನ ಸಮೇತ ರವಿವಾರ ಬಂಧಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರದ ಪಣಜಿ ನಿವಾಸಿ ತಂಜೀಮ್ ಐ. ಖಾನಾಪುರಿ ಹಾಗೂ ಬೆಳಗಾವಿ ವೈಭವನಗರ ಜನತಾ ಪ್ಲಾಟ್ನ ತನ್ವೀರ ಕೆ. ಸಯ್ಯದ ಬಂಧಿತರಾಗಿದ್ದಾರೆ. ಗೋಕುಲ ರಸ್ತೆ ಠಾಣೆಯ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮತ್ತು ಸಿಬ್ಬಂದಿ ಲಾಕ್ಡೌನ್ ನಿಮಿತ್ತ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ, ಬಂಧಿತರ ಕಾರು ತಡೆದು ವಾಹನದ ದಾಖಲೆಗಳನ್ನು ಕೇಳಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ.
ಬಂಧಿತರಲ್ಲಿ ಚಾಲಕನಾದ ತಂಜೀಮನು ಬೆಳಗಾವಿ ಜಿಲ್ಲೆಯ ಕಾಕತಿ, ಖಾನಾಪುರ, ನಂದಗಡ, ಟಿಳಕವಾಡಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಹಾವೇರಿ ಮತ್ತು ಇನ್ನಿತರೆಡೆಗಳಲ್ಲಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸುಮಾರು 8-10 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಾರನ್ನು ಎಲ್ಲಿ ಕಳವು ಮಾಡಲಾಗಿತ್ತು, ಎಷ್ಟು ಜನ ಸೇರಿ ಈ ಕೃತ್ಯವೆಸಗಿದ್ದರು ಎಂಬುದರ ಕುರಿತು ವಿಚಾರಣೆ ನಡೆಸಿದ್ದಾರೆ. ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಿಫ್ಟ್ ಕಾರು, ಕಾಕತಿ, ಖಾನಾಪುರ, ನಂದಗಡ, ಟಿಳಕವಾಡಿ ಪೊಲೀಸ್ ಠಾಣೆ, ಖಾನಾಪುರ,