ಸರಕಾರಿ ಕಚೇರಿಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಕೆಗೆ ಚಿಂತನೆ: ಸುನಿಲ್ ಕುಮಾರ್
Team Udayavani, Aug 2, 2022, 10:43 PM IST
ಹುಬ್ಬಳ್ಳಿ: ವಿದ್ಯುತ್ ಬಿಲ್ ಬಾಕಿ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್ (ಮುಂಗಡ ಹಣ ನೀಡುವ ವಿಧಾನ) ವಿದ್ಯುತ್ ಮೀಟರ್ ಅಳವಡಿಕೆಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವ ಸುನಿಲ್ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರಿ ಇಲಾಖೆ ಗಳ ವಿದ್ಯುತ್ ಬಿಲ್ ಬಾಕಿ ಪಾವತಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಬಿಲ್ ಪಾವತಿಸದ ಜಲಸಂಪನ್ಮೂಲ ಇಲಾಖೆ, ಬಿಬಿಎಂಪಿ ಹಾಗೂ ಗ್ರಾ.ಪಂ.ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾ ಗಿತ್ತು. ಇದರಿಂದ ಕೆಲವು ಗ್ರಾ.ಪಂ.ಗಳು ವಾರದವರೆಗೆ ಸಮಸ್ಯೆ ಅನುಭವಿಸಿವೆ. ಗ್ರಾಹಕರಿಗೂ, ಸರಕಾರಿ ಇಲಾಖೆಗೂ ಒಂದೇ ನ್ಯಾಯ ಎಂದರು.
ಹೊಸದಾಗಿ 37ಉಪಕೇಂದ್ರ
ಸಮರ್ಪಕ-ನಿರಂತರ ವಿದ್ಯುತ್ ಪೂರೈಕೆಗಾಗಿ ರಾಜ್ಯದಲ್ಲಿ ಹೊಸದಾಗಿ 37 ನೂತನ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಉಪಕೇಂದ್ರ ಸ್ಥಾಪನೆ ನಡೆಯುತ್ತಿದೆ. ಮತ್ತಷ್ಟು ಉಪಕೇಂದ್ರ ಸ್ಥಾಪಿಸಲು ಹೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆಗಳು ಬರುತ್ತಿವೆ. ಅವುಗಳನ್ನು ಸಹ ಪ್ರಸ್ತುತ ಬಜೆಟ್ನಲ್ಲಿ ತೆಗೆದುಕೊಳ್ಳುವ ಚಿಂತನೆ ನಡೆದಿದೆ.
ರಾಜ್ಯದಲ್ಲಿ ಸೋಲಾರ್ ರೂಫ್ ಟಾಪ್ ಯೋಜನೆಯಡಿ ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸ ಬಹುದು ಎಂದು ಬೆಸ್ಕಾಂ ಸಮೀಕ್ಷೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ 1,108 ಕಡೆಗಳಲ್ಲಿ ಇವಿ ಸ್ಟೇಷನ್ ಸ್ಥಾಪಿಸಲು ಯೋಚಿಸಿದ್ದೇವೆ. ಆ ಕುರಿತು ಅಭಿಯಾನ ಸಹ ನಡೆಯುತ್ತಿದೆ ಎಂದು ತಿಳಿಸಿದರು.
ಕಟ್ಟುನಿಟ್ಟಿನ ಸೂಚನೆ
ಪೂರ್ವ ನಿಶ್ಚಿತವಾಗಿ ವಿದ್ಯುತ್ ಸ್ಥಗಿತ ಗೊಳಿಸುವು ದಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಬೇಕು. ಈ ಕುರಿತು ಎಲ್ಲಿಯೂ ಲೋಪದೋಷ ಗಳಾಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಗ್ರಾಹಕರು ಮತ್ತು ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.