ಕೋವಿಡ್ ಕರ್ಫ್ಯೂ ಮುಂದುವರಿಕೆ?
14 ದಿನದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮೂರನೇ ವಾರಕ್ಕೆ ವಿಸ್ತರಣೆ ಮಾಡಲು ಚಿಂತನೆ | ಚೈನ್ ಲಿಂಕ್ ತುಂಡರಿಸುವುದು ತುರ್ತು ಅಗತ್ಯ | ಜನತೆ ಸಹಕರಿಸದಿದ್ದರೆ ಕಟ್ಟುನಿಟ್ಟು ಕ್ರಮ ಅನಿವಾರ್ಯ
Team Udayavani, Apr 30, 2021, 6:47 PM IST
ಧಾರವಾಡ: ರಾಜ್ಯದಲ್ಲಿ ಕೋವಿಡ್ ಚೈನ್ ಲಿಂಕ್ ತುಂಡರಿಸಿ ಸೋಂಕು ನಿಯಂತ್ರಣಕ್ಕೆ ತರಲು ಕನಿಷ್ಟ ಮೂರು ವಾರಗಳ ಕರ್ಫ್ಯೂ ವಿಧಿಸುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳು ಆರಂಭದಲ್ಲಿ ಕರ್ಫ್ಯೂ 14 ದಿನಗಳಿಗೆ ಮಾತ್ರ ಸೀಮಿತಗೊಳಿಸಿದ್ದು, ಸಾರ್ವಜನಿಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಇಲ್ಲದಿದ್ದರೆ ಕರ್ಫ್ಯೂ ಮುಂದುವರೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರ ಸಹಕಾರ ಸಿಗದೆ ಕೋವಿಡ್ ನಿಯಂತ್ರಣ ಕಷ್ಟ ಸಾಧ್ಯವಾದಲ್ಲಿ ಕರ್ಫ್ಯೂ ಮತ್ತೆ ಮುಂದುವರಿಸಲು ಚಿಂತಿಸೋಣ ಎಂದು ತಿಳಿಸಿದ್ದಾರೆ. ಹೀಗಾಗಿ ಈ 14 ದಿನಗಳ ಕಾಲ ಕರ್ಫ್ಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅವಳಿ ನಗರದಲ್ಲಿ ಜನದಟ್ಟಣೆ ಉಂಟಾಗುವ ಮಾರುಕಟ್ಟೆ ಪ್ರದೇಶ ಹಾಗೂ ಎಪಿಎಂಸಿಗಳಲ್ಲಿ ಹೆಚ್ಚು ಜನ ಸೇರದಂತೆ ಮತ್ತು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ನಿಗಾ ವಹಿಸುವಂತೆ ವಿಶೇಷ ಕ್ರಮ ವಹಿಸಲಾಗುವುದು.
ಜನರ ಹಿತಕ್ಕಾಗಿಯೇ ಈ ಎಲ್ಲ ಕ್ರಮ ಕೈಗೊಂಡಿದ್ದು, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಯಮ ರೂಪಿಸಿ ನಿರ್ಬಂಧಿಸಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಕೋವಿಡ್ ಚೈನ್ ಲಿಂಕ್ ತುಂಡರಿಸಲು ಸಾಧ್ಯವಾಗುತ್ತದೆ. ಈ 14 ದಿನಗಳ ಅವ ಧಿಯಲ್ಲಿ ಅನಗತ್ಯವಾಗಿ ಸಂಚರಿಸದೆ ಮನೆಯಲ್ಲಿದ್ದು, ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಸಾಮಾಜಿಕ ಅಂತರ ಕಾಪಾಡಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪಿನಿಂದ ಕೈ ತೊಳೆಯಬೇಕು ಎಂದು ವಿನಂತಿಸಿದರು.