ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ : ಸಚಿವ ಶಿವರಾಂ ಹೆಬ್ಬಾರ್
Team Udayavani, Mar 3, 2022, 8:54 PM IST
ಧಾರವಾಡ : ಲಾರಿ, ಟ್ರಕ್, ಆಟೋ, ಪ್ರವಾಸಿ ವಾಹನ, ಪ್ರಯಾಣಿಕರ ವಾಹನ ಸೇರಿದಂತೆ ವಿವಿಧ ರೀತಿಯ ವಾಹನಗಳನ್ನು ದಿನನಿತ್ಯ ಓಡಿಸುವ ಚಾಲಕರು, ಕ್ಲೀನರ್ಗಳ ಬದುಕು ರಕ್ಷಿಸಲು ಮತ್ತು ಅವರ ಮಕ್ಕಳು, ಕುಟುಂಬ ಸದಸ್ಯರಿಗೆ ನೆರವಾಗಲು ಕಾರ್ಮಿಕ ಕಲ್ಯಾಣ ಮಂಡಳಿಯಂತೆ ರಾಜ್ಯದಲ್ಲಿ ಶೀಘ್ರವಾಗಿ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾ ಹೇಳಿದರು.
ನಗರದ ಕವಿಸಂನಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 400 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಡಿಬಿಟಿ ಮೂಲಕ ಶಿಷ್ಯವೇತನವನ್ನು 1,56000 ದಷ್ಟು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೆರವಾಗಿ ಜಮೆ ಮಾಡಲಾಗುತ್ತಿದೆ. ಐಐಟಿ, ಐಐಐಟಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಎಲ್ಲ ರೀತಿಯ ತಾಂತ್ರಿಕ ಹಾಗೂ ಇತರ ಉನ್ನತ ಶಿಕ್ಷಣ ಕಲಿಯಲು ಕಾರ್ಮಿಕರ ಮಕ್ಕಳಿಗೆ ಉಚಿತ ಅವಕಾಶ ನೀಡಿ, ಇಲಾಖೆಯಿಂದ ವೆಚ್ಚ ಭರಿಸಲು ನಿರ್ಧರಿಸಲಾಗಿದೆ ಎಂದರು.