ಮಹದಾಯಿ ಯೋಜನೆಗೆ ಉಪವಾಸ ಸತ್ಯಾಗ್ರಹ ಆರಂಭ
Team Udayavani, Sep 11, 2017, 7:00 AM IST
ನವಲಗುಂದ: ಮಹದಾಯಿ ಯೋಜನೆ ಜಾರಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಏಳು ಜನ ರೈತರು ಪಟ್ಟಣದ ರೈತ ಭವನದಲ್ಲಿ ಭಾನುವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ರವಿಗೌಡ ಪಾಟೀಲ, ಸಂಗಪ್ಪ ನಿಡವಣಿ, ಬಸಯ್ಯ ಮಠಪತಿ, ಬೆನ್ನರಡ್ಡಿ ಕುರಹಟ್ಟಿ, ಶಿವಪ್ಪ ಸಂಗಟಿ, ಹುಸೇನ
ಸಾಬ ನದಾಫ್, ಯಲ್ಲಪ್ಪ ದಾಡಿಬಾವಿ ಉಪವಾಸ ಕೈಗೊಂಡವರು. ಧಾರವಾಡದ ಮನಸೂರು ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಡ ತರಲು ಸಂಸದರು ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಕಂಬಕ್ಕೆ ಕಟ್ಟಿ ಬಾರಕೋಲು ಏಟು ನೀಡುವ ಸಮಯ ದೂರವಿಲ್ಲ ಎಂದು ಕಿಡಿಕಾರಿದರು.
ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, 2 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಚಕಾರವೆತ್ತದ ಬಿಜೆಪಿಯವರು ಮಂಗಳೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯಾಗಿದ್ದಕ್ಕೆ “ಮಂಗಳೂರು ಚಲೋ’ ಚಳವಳಿ ನಡೆಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು. ಇದಕ್ಕೂ ಮೊದಲು ಪಕ್ಷಾತೀತ ಹೋರಾಟ ಸಮಿತಿಯ ರೈತ ಹೋರಾಟಗಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.