ಕೆನ್ನಾಲಿಗೆಗೆ ರವಾ ಮಿಲ್ ಆಹುತಿ
ವೀರಾಪುರ ಓಣಿಯಲ್ಲಿ ಘಟನೆ! 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿ ಹಾನಿ! 3 ಅಗ್ನಿಶಾಮಕ ವಾಹನದಿಂದ 6 ತಾಸು ಕಾರ್ಯಾಚರಣೆ
Team Udayavani, Jul 9, 2021, 6:34 PM IST
ಹುಬ್ಬಳ್ಳಿ: ವೀರಾಪುರ ಓಣಿಯಲ್ಲಿ ಸ್ಥಗಿತಗೊಂಡಿದ್ದ ರವಾ ಮಿಲ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಸುಮಾರು 3 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಸಾಮಗ್ರಿಗಳು ಆಹುತಿಯಾದ ಘಟನೆ ಗುರುವಾರ ನಡೆದಿದೆ.
ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿ ಶಾಮಕಾಧಿಕಾರಿ ಚಂದ್ರಶೇಖರ ಭಂಡಾರಿ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಮೂರು ವಾಹನಗಳು ಸತತವಾಗಿ ಸುಮಾರು 6 ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯ ನಡೆಸಿದವು. ಪ್ರಶಾಂತ ಹಬೀಬ ಎನ್ನುವವರಿಗೆ ಸೇರಿದ ಟಿ.ಕೆ.ಹಬೀಬ ರವಾ ಮಿಲ್ ಇದಾಗಿದ್ದು, ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ತೆರವು ಕಾರ್ಯಚರಣೆ ನಡೆದಿತ್ತು ಎನ್ನಲಾಗಿದೆ. ಆದರೆ ಬೆಳಗ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಟ್ಟಡದೊಳಗೆ ಕಟ್ಟಿಗೆ ಸಾಮಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಬೆಂಕಿ ತೀವ್ರತೆಯಿಂದ ಕೂಡಿತ್ತು. ಕಿಟಕಿಯ ಮೂಲಕ ಬೆಂಕಿ ಕೆನ್ನಾಲಿಗೆ ಹೊರ ಬರುತ್ತಿದ್ದಂತೆ ಸ್ಥಳೀಯರಿಗೆ ಗೊತ್ತಾಗಿದೆ. ಬೆಂಕಿಯ ತೀವ್ರತೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಬೆಂಡಿಗೇರಿ ಪೊಲೀಸರು ಆಗಮಿಸಿ ಪರಿಶೀಲಿಸಿದರು.