ಸಂಬಂಧಿಕರಿಂದಲೇ ಕೊಲೆಯಾಗಿದ್ದ ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು
Team Udayavani, Sep 29, 2022, 7:46 AM IST
ಹುಬ್ಬಳ್ಳಿ: ಪತ್ನಿಯ ಸಂಬಂಧಿಗಳಿಂದಲೇ ಭೀಕರ ಕೊಲೆಯಾಗಿದ್ದ ಗಂಗಿವಾಳ ಗ್ರಾಪಂ ಸದಸ್ಯ ದೀಪಕ ಪಟದಾರಿ ಅವರ ಪತ್ನಿ ಪುಷ್ಪಾ ಪಟದಾರಿ ಬುಧವಾರ ರಾತ್ರಿ ತಮ್ಮ ಇಲ್ಲಿನ ನವನಗರದ ಸಿಟಿ ಪಾರ್ಕ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದ ತಾಲೂಕಿನ ರಾಯನಾಳದ ಪುಷ್ಪಾ ಗಂಗಿವಾಳದ ದೀಪಕರನ್ನು ಕುಟುಂಬದವರ ತೀವ್ರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದರು. ದೀಪಕರನ್ನು ಕೊಲೆ ಮಾಡಲಾಗಿತ್ತು. ಈಗ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಎಪಿಎಂಸಿ-ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸರಕಾರ ದೀಪಕ ಕೊಲೆ ಪ್ರಕರಣವನ್ನು ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 3-4 ದಿನಗಳ ಹಿಂದಷ್ಟೇ ಸಿಐಡಿಗೆ ವಹಿಸಿ ಆದೇಶಿಸಿತ್ತು. ಆರು ಜನರುಳ್ಳ ತಂಡ ಪ್ರಕರಣದ ಕುರಿತು ತನಿಖೆ ನಡೆಸಿತ್ತು. ಅಷ್ಟರಲ್ಲಿಯೇ ದೀಪಕನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್ ಚೆಟ್ರಿ ಯಶೋಗಾಥೆ