ಮೀಸಲು ಅಧ್ಯಾದೇಶಕ್ಕೆ ಅಧಿವೇಶನದಲ್ಲಿ ಒಪ್ಪಿಗೆ: ಮುಖ್ಯಮಂತ್ರಿ
Team Udayavani, Oct 25, 2022, 6:35 AM IST
ಹುಬ್ಬಳ್ಳಿ: ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಅಧ್ಯಾದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಮೀಸಲಾತಿ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಕಾನೂನು ರಕ್ಷಣೆ ಕೊಡಲು ಎಲ್ಲ ಸಾಧ್ಯತೆಗಳನ್ನು ಮಾಡಲಾಗುವುದು. ಅಧ್ಯಾದೇಶಕ್ಕೆ ಮುಂಬರುವ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು. ಪಂಚಮಸಾಲಿ ಸಹಿತ ಎಲ್ಲ ಮೀಸಲಾತಿ ಕುರಿತು ಬೇರೆ ಬೇರೆ ಹಂತಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಲ್ಲಿ ಚರ್ಚೆಯಲ್ಲಿವೆ.
ಆಯಾ ಆಯೋಗದ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು. ಮುಸ್ಲಿಂ ಸಹಿತ ಇತರ ಜಾತಿಗಳ ಮೀಸಲಾತಿ ಹಿಂಪಡೆಯುವ ಕುರಿತು ಏನೂ ಹೇಳಲಾರೆ. ಮೀಸಲಾತಿ ಕುರಿತು ಸಂವಿಧಾನದಡಿಯಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಸರಕಾರ ನಡೆಯಲಿದೆ. ಈ ಕುರಿತು ಯಾರು ಏನೇ ಮಾತನಾಡಿದರೂ ಅದು ಅವರ ವೈಯಕ್ತಿಕ ವಿಚಾರ ಎಂದರು.