ಕನ್ನಡ ಉಳಿಸಲು ಆತ್ಮಬಲಿದಾನಕ್ಕೆ ಯತ್ನಿಸಿದ್ದೆ
Team Udayavani, Sep 10, 2017, 7:05 AM IST
ಧಾರವಾಡ: “ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ನಾನು ಕೂಡ ಹಂಪಿಯ ಪಂಪಾ ನದಿಗೆ ಹಾರಿ ಆತ್ಮ ಬಲಿದಾನ ಮಾಡಲು ಯತ್ನಿಸಿದ್ದೆ’ ಎಂದು ಸಂಶೋಧಕ ಡಾ|ಎಂ. ಚಿದಾನಂದಮೂರ್ತಿ ಹೇಳಿದರು.
ಕವಿವಿಯ ಡಾ|ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಶನಿವಾರ ನಡೆದ ಡಾ|ಜಿ. ಎಂ.ನಾಗಯ್ಯ ಅವರು ಬರೆದ ಆತ್ಮಬಲಿದಾನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಆತ್ಮ ಬಲಿದಾನ ಎನ್ನುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಆತ್ಮಹತ್ಯೆಗೂ ಆತ್ಮ
ಬಲಿದಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆತ್ಮಹತ್ಯೆ ಎಂದರೆ ವ್ಯಕ್ತಿ ತಾನು ಅಂದುಕೊಂಡಿದ್ದು ಆಗದೇ ಹೋದಾಗ ಆತ್ಮವನ್ನು ಹತ್ಯೆ ಮಾಡಿಕೊಳ್ಳುತ್ತಾನೆ. ಆತ್ಮ ಬಲಿದಾನ ಎಂದರೆ ಒಂದು ನಿರ್ದಿಷ್ಠ ಉದ್ದೇಶಕ್ಕಾಗಿ ವ್ಯಕ್ತಿ ತನ್ನ ಜೀವವನ್ನು ಕೊಡುತ್ತಾನೆ. ನಾನು ಕೂಡ 1997ರಲ್ಲಿ ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿ ಅಧೋಗತಿಗೆ ಹೋದಾಗ, ಅದನ್ನು ಉಳಿಸಲು ಏನು ಮಾಡಲು ಸಾಧ್ಯ ಎಂದು ಯೋಚಿಸಿದ್ದೆ. ಅದನ್ನೇ ನೆಪವಾಗಿಟ್ಟುಕೊಂಡು ಒಂದು ವಾರ ಹಂಪಿಯಲ್ಲಿ ಉಳಿದೆ. ಕೊನೆಗೆ ಹಂಪಿಯ ಪಂಪಾನದಿಯಲ್ಲಿ ವಿರುಪಾಕ್ಷನನ್ನು ಸ್ಮರಿಸುತ್ತ ಹಾರಿ ಆತ್ಮ ಬಲಿದಾನಕ್ಕೆ ಮುಂದಾದೆ. ಮುಳುಗಿ, ತೇಲಿ, ಹೊರಳಾಡಿ ಕೊನೆಗೆ ಯಾರೋ ಕೆಲವರು ನನ್ನನ್ನು ರಕ್ಷಿಸಿಕೊಂಡು ದಡಕ್ಕೆ
ಬಂದು ಹಾಕಿದರು. ಈ ಕುರಿತು ನಾನು ನನ್ನ ಗುರುಗಳಾದ ಎಲ್.ಎಸ್.ಶೇಷಗಿರಿರಾವ್ ಅವರಿಗೆ ಅಂದು ಪತ್ರ ಬರೆದಿದ್ದೆ ‘ಎಂದು ಹೇಳಿ ಸ್ವಲ್ಪ ಹೊತ್ತು ಅವರು ಭಾವುಕರಾದರು.