ಉತ್ತರ ಕರ್ನಾಟಕದ ಕಥೆ ಇಷ್ಟೇನಾ?
•ಮುಂದುವರಿದಿದೆ ಅನ್ಯಾಯದ ಬಳುವಳಿ•ಜನಾಗ್ರಹಕ್ಕಿಲ್ಲ ಬೆಲೆ
Team Udayavani, Jun 17, 2019, 12:47 PM IST
ಹುಬ್ಬಳ್ಳಿ: ಉತ್ತರ ಕರ್ನಾಟಕದ ಗತಿ-ಸ್ಥಿತಿ, ಕಥೆ ಇಷ್ಟೇನಾ? ಈ ಪ್ರಶ್ನೆ ಯಾರನ್ನು ಕೇಳಬೇಕು, ಯಾರ ಮುಂದೆ ಅಳಲು ತೋಡಿಕೊಳ್ಳಬೇಕು?
– ಶಿಕ್ಷಣ, ನೀರಾವರಿ, ಮೂಲ ಸೌಲಭ್ಯ, ಅಭಿವೃದ್ಧಿ ವಿಚಾರದಲ್ಲಿ ಸರಕಾರಗಳ ವರ್ತನೆ, ಉದಾಸೀನತೆ ಈ ಭಾಗದ ಅಸಂಖ್ಯಾತರ ಮನದೊಳಗೆ ಇಂತಹ ಮಾತು ಹಾಗೂ ಪ್ರಶ್ನೆಗಳನ್ನು ಮೂಡಿಸಿದೆ.
ಉತ್ತರ ಕರ್ನಾಟಕವನ್ನು ಮತ್ತೆ ಮತ್ತೆ ಕಡೆಗಣಿಸಲಾಗುತ್ತಿದೆ. ನಿಮಗಾಗಿಯೇ ‘ಸುವರ್ಣ ವಿಧಾನ ಸೌಧ’ ಕಟ್ಟಿದ್ದೇವೆಂದು ಭೂತಬಂಗಲೆ ದರ್ಶನ ಮಾಡಿಸಲಾಗುತ್ತಿದೆ. ಕುಲಪತಿ ಹುದ್ದೆಗಳು ಆರೆಂಟು ತಿಂಗಳು ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಸೇರಿದಂತೆ ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳು ಕಡತಗಳಲ್ಲೇ ಅಣಕಿಸುತ್ತಿವೆ, ಇದ್ದ ಸೌಲಭ್ಯಗಳನ್ನು ಕಿತ್ತುಕೊಂಡು ಬೇರೆ ಕಡೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಲೇ ಇದೆ. ವಿವಿಧ ಇಲಾಖೆಗಳ ಸ್ಥಳಾಂತರ ಭರವಸೆ ಆಚೆ-ಈಚೆ ಆಗಿಲ್ಲ.
ಉತ್ತರ ಕರ್ನಾಟಕದಲ್ಲಿ ಎಂತಹ ಗಂಭೀರ ಸಮಸ್ಯೆ-ಸಂಕಷ್ಟ ಇದ್ದರೂ, ಸರಕಾರದ ದೃಷ್ಟಿಯಲ್ಲಿ ಅದು ನಗಣ್ಯ ರೂಪ ಪಡೆಯುತ್ತದೆ. ಬೇರೆ ಕಡೆಯ ನೀರು ವಿಚಾರ ಬಂದರೆ ಸರಕಾರ ಎಂಥ ಕ್ರಮಕ್ಕೂ ಮುಂದಾಗುತ್ತದೆ. ಆದರೆ, ಉತ್ತರದಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟವಿದ್ದರೂ ‘ನೆರೆ ರಾಜ್ಯದಿಂದ ನೀರು ತರುವ ನಿಟ್ಟಿನಲ್ಲಿ ಪತ್ರ ಬರೆದಿದ್ದೇವೆ, ನೀರು ನೀಡುವ ವಿಶ್ವಾಸವಿದೆ’ ಎಂಬ ಭರವಸೆ ಮಾತುಗಳಷ್ಟೇ ಸಿಗುತ್ತವೆ.
ಆಲಮಟ್ಟಿ ಎತ್ತರ ಹೆಚ್ಚಿಲ್ಲ: ಆಲಮಟ್ಟಿ ಜಲಾಶಯದ ನೀರು ಬಳಕೆಯಲ್ಲಿ ಇಂದಿಗೂ ಉತ್ತರ ಕರ್ನಾಟಕಕ್ಕೆ ಸಮರ್ಪಕ ನ್ಯಾಯ ಸಿಕ್ಕಿಲ್ಲ. 2010ರ ಡಿಸೆಂಬರ್ನಲ್ಲಿ ನ್ಯಾ| ಬ್ರಿಜೇಶ ಕುಮಾರ ಆಯೋಗ ಆಲಮಟ್ಟಿ ಜಲಾಶಯವನ್ನು 519 ಮೀಟರ್ನಿಂದ 524 ಮೀಟರ್ಗೆ ಹೆಚ್ಚಿಸಿ ನೀರು ಸಂಗ್ರಹಕ್ಕೆ ಕೆಲ ನಿಯಮಗಳೊಂದಿಗೆ ಅನುಮತಿ ನೀಡಿತ್ತು. ಇದರಿಂದ ಸುಮಾರು ಒಂದು ಲಕ್ಷ ಎಕರೆ ಪ್ರದೇಶ ಮುಳುಗಡೆ ಹಾಗೂ 22 ಗ್ರಾಮಗಳ ಸ್ಥಳಾಂತರ ಮಾಡಬೇಕಾಗಿದೆ. ಆದರೆ ಪ್ರತಿ ವರ್ಷ ನೀರು ಸಂಕಷ್ಟ ಸ್ಥಿತಿಯಲ್ಲಿ ಹೆಚ್ಚುವರಿ ನೀರು ಪಡೆಯುವ ವಿಚಾರದಲ್ಲಿ ಸರಕಾರ ಒಂದು ಹೆಜ್ಜೆ ಸಹ ಮುಂದೆ ಹೋಗಿಲ್ಲ.
ಭೀಕರ ಬರ ದಿಂದಾಗಿ ಕೃಷ್ಣಾ ನದಿ ಬತ್ತಿದ್ದು, ಕೋಯ್ನಾದಿಂದ ನಾಲ್ಕು ಟಿಎಂಸಿ ಅಡಿ ನೀರು ಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಇಂದಿಗೂ ಹನಿ ನೀರು ಬಂದಿಲ್ಲ. ನೀರು ತರುವ ನಿಟ್ಟಿನಲ್ಲಿ ಸರಕಾರವಾಗಿ, ವಿಪಕ್ಷವಾಗಿ ಯಾರೊಬ್ಬರು ಜವಾಬ್ದಾರಿಯುತ ಯತ್ನ ತೋರಲೇ ಇಲ್ಲ. ತುಂಗಭದ್ರ ಜಲಾಶಯದಲ್ಲಿ ಹೂಳಿನ ಸಮಸ್ಯೆ ಹೆಚ್ಚಿದ್ದು, ಸಮನಾಂತರ ಜಲಾಶಯ ನಿರ್ಮಾಣ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ, ಯೋಜನೆಗೆ ಅನುಮೋದನೆ ದೊರೆತಿದೆ ಎಂಬುದು ಬಿಟ್ಟರೆ ಇಂದಿಗೂ ಭೂಸ್ವಾಧೀನ ಇನ್ನಿತರ ಯಾವ ಕಾರ್ಯವೂ ಆಗಿಲ್ಲ.
ಮಹದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ತೀರ್ಪು ನೀಡಿದ್ದರೂ, ಅಧಿಸೂಚನೆ ವಿಚಾರದ ಮಾತಿನ ಸಮರ ನಡೆದಿದ್ದು ಬಿಟ್ಟರೆ ಮತ್ತೇನು ಆಗಿಲ್ಲ.
ಡಾ| ಡಿ.ಎಂ.ನಂಜುಂಡಪ್ಪ ವರದಿ, ಹೈಕ ಭಾಗಕ್ಕೆ 371(ಜೆ)ಕಲಂ ಜಾರಿಗೊಂಡರೂ ಸಮರ್ಪಕ ಅನುಷ್ಠಾನವಾಗಿಲ್ಲ. ಮುಂಬಯಿ ಕರ್ನಾಟಕ, ಹೈದರಾಬಾದ ಕರ್ನಾಟಕ್ಕೆ ವಿವಿಧ ಇಲಾಖೆಯಡಿ ಸಾಮಾನ್ಯವಾಗಿ ಬರಬೇಕಾದ ನಿಧಿಯನ್ನೇ ವಿಶೇಷ ಅಭಿವೃದ್ದಿ ನಿಧಿಯಲ್ಲಿ ತೋರಿಸಲಾಗಿದೆ. 371(ಜೆ)ಕಲಂ ಅಡಿಯಲ್ಲಿ ಶೇ.50ರಷ್ಟು ಸಹ ಅನುದಾನ ವೆಚ್ಚವಾಗಿಲ್ಲ ಎಂಬ ಕೊರಗು ಈ ಭಾಗದ ಜನರದ್ದಾಗಿದೆ.
ಮೂಗಿಗೆ ತುಪ್ಪ: ವಿವಿಧ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಕುರಿತು ಸಚಿವ ಸಂಪುಟ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ನಿರ್ಣಯ ಕೈಗೊಂಡಿದ್ದರೂ ಇಂದಿಗೂ ಯಾವ ಕಚೇರಿ ಬಂದಿಲ್ಲ. ಸಕ್ಕರೆ ನಿರ್ದೇಶನಾಲಯ, ಉಪ ಲೋಕಾಯುಕ್ತರ ಕಚೇರಿ ಬೆಳಗಾವಿಗೆ ; ಕೆಬಿಜೆಎನ್ಎಲ್ ಆಲಮಟ್ಟಿಗೆ, ಕೆಎನ್ಎನ್ಎಲ್ ದಾವಣಗೆರೆಗೆ, ಉಪ ಲೋಕಾಯುಕ್ತ ಕಚೇರಿ, ಮಾಹಿತಿ ಹಕ್ಕು ಆಯುಕ್ತರ ಕಚೇರಿ ಕಲಬುರಗಿಗೆ ಹೀಗೆ ಸುಮಾರು ಒಂಬತ್ತು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರದ ಘೋಷಣೆ ಮೂಗಿನ ತುದಿಯ ತುಪ್ಪವಾಗಿದೆ. ಕಚೇರಿಗಳು ಬರುವುದಿರಲಿ, ಕಚೇರಿ ಹೆಸರಲ್ಲಿ ಒಂದು ಟೇಬಲ್-ಕುರ್ಚಿ ಸಹ ಬಂದಿಲ್ಲ. ನಮಗೆ ನೀರಿಲ್ಲದಾಗಲೂ ತೆಲಂಗಾಣಕ್ಕೆ ಎರಡು ಟಿಎಂಸಿ ಅಡಿ ನೀರು ಹರಿಸಿದರೂ ಯಾರೊಬ್ಬರು ಚಕಾರವೆತ್ತಲಿಲ್ಲ. ಆ ಬಗ್ಗೆ ನಮ್ಮ ಭಾಗದ ಜನಪ್ರನಿಧಿಗಳಿಗೆ ಬೇಕಾಗಿಯೂ ಇಲ್ಲ ಎಂಬುದು ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಅವರ ಆಕ್ರೋಶ.
ಉತ್ತರ ಕರ್ನಾಟಕ್ಕೆ ವಿವಿಧ ಕಚೇರಿಗಳು ಬರುವುದಿರಲಿ, ಇದೇ ಭಾಗದಲ್ಲಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಇನ್ನಿತರ ಕಚೇರಿಗಳು ಹಾಸನ ಹಾಗೂ ರಾಮನಗರಕ್ಕೆ ಸ್ಥಳಾಂತಗೊಂಡಿವೆ. ವಿಟಿಯು ಇಬ್ಭಾಗ ಯತ್ನ ವ್ಯವಸ್ಥಿತ ರೂಪ ಪಡೆದಿದೆ. ಬಜೆಟ್ ಪೂರ್ವದಲ್ಲಿ ಉತ್ತರದ ಶಾಸಕರು ಒಟ್ಟಾಗಿ ಸೇರಿ ನಮ್ಮ ಭಾಗದ ಬೇಡಿಕೆ ಏನು, ಬಜೆಟ್ನಲ್ಲಿ ಎಷ್ಟು ಅನುದಾನ ಬೇಕೆಂಬ ಒತ್ತಾಯದ ಸಂಘಟಿತ ಧ್ವನಿ ಇಂದಿಗೂ ತೋರಿಲ್ಲ. ವರ್ಗಾವಣೆ ಆದೇಶಗಳಿಗೆ ಸಹಿ ಬಿದ್ದರೆ ಸಾಕು ಎನ್ನುವಂತೆ ಇದ್ದಾರೆ ಎಂಬುದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ಆರೋಪ.
ಈ ಭಾಗದ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರ ಹುದ್ದೆ ವರ್ಷದವರೆಗೂ ಖಾಲಿ ಇದ್ದರೂ ಭರ್ತಿಯ ಯತ್ನ ಆಗುತ್ತಿಲ್ಲ. ಈ ಭಾಗದವರನ್ನು ಕಡೆಗಣಿಸಿ ಬೇರೆ ಕಡೆಯವರನ್ನ ಕುಲಪತಿಯಾಗಿಸಲಾಗುತ್ತದೆ. ವಿವಿ ಸೇರಿದಂತೆ ಸರಕಾರಿ ಇಲಾಖೆಗಳಲ್ಲಿ ಅದೆಷ್ಟೋ ಪ್ರಮುಖ ಹುದ್ದೆಗಳು ಪ್ರಭಾರಿಯಲ್ಲೇ ಇವೆ. ಇಷ್ಟಾದರೂ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಹೀಗಾಗಿ ‘ನಮ್ಮ ಕಷ್ಟ ನೋವು-ಅಳಲು ಯಾರ ಮುಂದೆ ಹೇಳಿಕೊಳ್ಳಬೇಕು. ನಮಗೆ ನಾವೇ ಪ್ರಶ್ನೆ ಕೇಳಿಕೊಂಡು ಸ್ವಯಂ ಸಾಂತ್ವಾನ ಮಾಡಿಕೊಳ್ಳಬೇಕಾಗಿದೆ’ ಎಂಬುದು ಉತ್ತರದ ಜನರ ಅಳಲು.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ