ಖಾಲಿ ಇದ್ದರೂ ಹುದ್ದೆ ನಿರೀಕ್ಷೆಯಲ್ಲಿ ಅಧಿಕಾರಿಗಳು!
Team Udayavani, Nov 23, 2018, 6:55 AM IST
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ “ಹುದ್ದೆಗಾಗಿ ಕಾಯ್ದಿರಿಸುವ ಪದ್ಧತಿ’ಗೆ ಅವಕಾಶ ನೀಡಬಾರದೆಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರೂ 22ಕ್ಕೂ ಹೆಚ್ಚು ಅಧಿಕಾರಿಗಳು ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸಾರಿಗೆ ಸಂಸ್ಥೆಗಳಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ರಾಜ್ಯದ ಇತರೆ ಇಲಾಖೆಗಳಂತೆ ಕರಾರಸಾಸಂ, ವಾಕರಸಾಸಂ, ಈಕರಸಾಸಂ ಹಾಗೂ ಬಿಎಂಟಿಸಿ ನಾಲ್ಕು ನಿಗಮಗಳಲ್ಲೂ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಬಹುತೇಕ ಅಧಿಕಾರಿಗಳು ಎರಡೆರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾಲ್ಕು ನಿಗಮಗಳಲ್ಲಿ ಹಿರಿಯ ಅಧಿಕಾರಿಗಳಿಂದ ಹಿಡಿದು ಸುಮಾರು 22 ಅಧಿಕಾರಿಗಳಿಗೆ ಸೂಕ್ತ ಹುದ್ದೆ ಸೂಚಿಸದೆ ನಿರೀಕ್ಷೆಯಲ್ಲಿರಿಸಲಾಗಿದೆ.
ಇತ್ತೀಚೆಗೆ ವರ್ಗಾವಣೆಗಾಗಿ ಪರದಾಡುತ್ತಿದ್ದ ಸಂಸ್ಥೆಯ ಅಧಿಕಾರಿಗಳು ಇದೀಗ ಹುದ್ದೆಗಾಗಿ ಪರದಾಡುವಂತಾಗಿದೆ. ಅಧಿಕಾರಿಗಳ ಕೊರತೆಯ ನಡುವೆಯೂ ಇಷ್ಟೊಂದು ಅಧಿಕಾರಿಗಳಿಗೆ ಹುದ್ದೆ ಸೂಚಿಸದೆ ಇರುವುದು ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಅರ್ಥವಾಗುತ್ತಿಲ್ಲ. ಪ್ರತಿಯೊಂದಕ್ಕೂ ಮಂತ್ರಿಗಳನ್ನು ಕೇಳಿ ಎಂದು ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ಅಧಿಕಾರಿಗಳು ನ್ಯಾಯಾಂಗದ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದಾರೆ.
ಸಿಎಸ್ ಆದೇಶಕ್ಕೂ ಬೆಲೆಯಿಲ್ಲ:ವರ್ಗಾವಣೆಯಾಗುವ ಅಧಿಕಾರಿ ಅಥವಾ ನೌಕರರ ಹುದ್ದೆ ನಿರೀಕ್ಷೆಯಲ್ಲಿರದಂತೆ ನೋಡಿಕೊಳ್ಳಬೇಕು. ಹುದ್ದೆ ನಿರೀಕ್ಷೆಯಲ್ಲಿ ಇರಿಸುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇಂತಹ ಘಟನೆಗಳಿಗೆ ಆಸ್ಪದ ನೀಡದಂತೆ ವರ್ಗಾವಣೆ ಮಾಡಬೇಕೆಂದು 2013ರ ಜೂನ್ 7ರ ಮಾರ್ಗಸೂಚಿಯಲ್ಲಿದೆ. ಈ ಮಾರ್ಗಸೂಚಿಯನ್ನು ಉಲ್ಲೇಖೀಸಿ ಸಿಎಸ್ ವಿಜಯ ಭಾಸ್ಕರ ಎಲ್ಲಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಲಿಖೀತವಾಗಿ ಸೂಚಿಸಿದ್ದಾರೆ. ಆದರೆ ಸಾರಿಗೆ ಸಂಸ್ಥೆಗಳಲ್ಲಿ ಮಾತ್ರ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಪುಕ್ಕಟೆ ವೇತನ:ಇಷ್ಟೊಂದು ಅಧಿಕಾರಿಗಳಿಗೆ ಯಾವುದೇ ಸೂಕ್ತ ಹುದ್ದೆ ನೀಡದೆ ಅವರಿಗೆ ಪುಕ್ಕಟೆಯಾಗಿ ವೇತನ ನೀಡಲಾಗುತ್ತಿದೆ. ನಾಲ್ಕು ನಿಗಮಗಳಲ್ಲಿ ಅಧಿಕಾರಿಗಳ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಇರುವ ಅಧಿಕಾರಿಗಳಿಗೆ ಖಾಲಿ ಕೂಡಿಸಿ ವೇತನ ನೀಡುತ್ತಿರುವ ಸಾರಿಗೆ ಇಲಾಖೆಯ ನಡೆ ಅನುಮಾನ ಮೂಡಿಸಿದೆ. ಸಂಸ್ಥೆಯ ಜೀವಾಳವಾಗಿರುವ ಬಸ್ ಘಟಕಗಳಲ್ಲಿ ಘಟಕ ವ್ಯಸ್ಥಾಪಕರ ಕೊರತೆ ದೊಡ್ಡ ಮಟ್ಟದಲ್ಲಿದೆ. ಇದೀಗ ಹುದ್ದೆ ನಿರೀಕ್ಷೆಯಲ್ಲಿರುವವರು ಘಟಕ ವ್ಯವಸ್ಥಾಪಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಂಸ್ಥೆಯ ಆದಾಯ, ಘಟಕ ನಿರ್ವಹಣೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂಬುವುದು ಅಧಿಕಾರಿಗಳ ಅಭಿಪ್ರಾಯ.
ಹೊಸಬರಿಗೆ ಮಣೆ!: ಹೊಸದಾಗಿ ನೇಮಕ ಹೊಂದಿದ ಅಧಿಕಾರಿಗಳನ್ನು ಖಾಲಿಯಿರುವ ಹುದ್ದೆಗಳಿಗೆ ಭರ್ತಿ ಮಾಡುವುದು ನಿಯಮ. ಆದರೆ ಸಾರಿಗೆ ಸಂಸ್ಥೆಯಲ್ಲಿ ಮಾತ್ರ ಒಂದು ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರನ್ನು ವರ್ಗಾವಣೆ ಅಥವಾ ಅದೇ ಸ್ಥಳಕ್ಕೆ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂಬುವುದು ಹಿರಿಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ಕಾರ್ಯ ವೈಖರಿಯಿಂದ ಬೇಸತ್ತಿರುವ ಕೆಲ ಅಧಿಕಾರಿಗಳು ನ್ಯಾಯಾಲಯ ಮೆಟ್ಟಿಲು ಏರಲು ಸಿದ್ಧತೆ ನಡೆಸಿದ್ದಾರೆ.
ಹೆಚ್ಚುತ್ತಿರುವ ಕಾರ್ಯಭಾರ
ಬೇಕಾಬಿಟ್ಟಿ ವರ್ಗಾವಣೆ, ಹುದ್ದೆಗಾಗಿ ಕಾಯ್ದಿರಿಸಿರುವುದು ಹಾಗೂ ವರ್ಗಾವಣೆಯಾದ ಅಧಿಕಾರಿಗಳನ್ನು ಬಿಡುಗಡೆಗೊಳಿಸದೇ ಇರುವುದರಿಂದ ಇತರೆ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಉಂಟಾಗಲು ಕಾರಣವಾಗಿದೆ. ಓರ್ವ ಅಧಿಕಾರಿ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅದೇ ಅಧಿಕಾರಿ ವಿಭಾಗದ ಮಟ್ಟದ ಹುದ್ದೆಯನ್ನೂ ನಿರ್ವಹಿಸಬೇಕು. ಬಹುತೇಕ ಅಧಿಕಾರಿಗಳು ಎರಡೆರಡು ಹುದ್ದೆಗಳನ್ನು ನಿಭಾಯಿಸುವಂತಾಗಿದೆ ಎನ್ನುವುದು ಸಂಸ್ಥೆಯ ಅಧಿಕಾರಿಗಳ ಹಾಗೂ ಕಾರ್ಮಿಕರ ಆರೋಪ.
ಕಳೆದ ಒಂದೂವರೆ ತಿಂಗಳ ಹಿಂದೆ ವರ್ಗಾವಣೆಯಾಗಿದೆ. ಹುದ್ದೆ ಖಾಲಿಯಿದ್ದರೂ ನನಗೆ ಹುದ್ದೆ ಸೂಚಿಸದೆ ಕಾಯ್ದಿರಿಸಲಾಗಿದೆ ಎಂದು ಸೂಚಿಸಿದ್ದಾರೆ. ಕೆಲವೆಡೆ ಹೊಸಬರಿಗೆ ಮಣೆ ಹಾಕಿ ಅಲ್ಲಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಖಾಲಿ ಕೂಡಿಸಲಾಗಿದೆ. ಸಾಕಷ್ಟು ಅಧಿಕಾರಿಗಳು ಎರಡೆರಡು ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಹುದ್ದೆಗಾಗಿ ಕಾಯ್ದಿರಿಸುವುದು ಸಾರಿಗೆ ಸಂಸ್ಥೆ ಇತಿಹಾಸದಲ್ಲೇ ಮೊದಲು.
– ಹೆಸರು ಹೇಳಲಿಚ್ಛಿಸದ ಅಧಿಕಾರಿ
– ಹೇಮರಡ್ಡಿ ಸೈದಾಪುರ