ಕಮಲ ಹಿಡಿದಳೇ ಸರಸ್ವತಿ, ಕೈಗೆ ಬಂತೇ ಲಕ್ಷ್ಮೀ?
ಹು-ಧಾ ಪಶ್ಚಿಮದಲ್ಲೀಗ ಒಳಹೊಡೆತಗಳದ್ದೇ ಚರ್ಚೆ, ಹಳ್ಳಿಗಳಲ್ಲಿ ವಿನಯಣ್ಣಾ, ನಗರದಲ್ಲಿ ನಮೋಸ್ತುತಿ
Team Udayavani, Apr 29, 2019, 10:39 AM IST
ಹು-ಧಾ ಪಶ್ಚಿಮ ಕ್ಷೇತ್ರ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಇಲ್ಲಿ 3,38,976 ಜನ ಮತದಾರರಿದ್ದು, ಈ ಬಾರಿ ಇಲ್ಲಿ ಒಟ್ಟು ಶೇ.63.86 ಮತದಾನವಾಗಿ 1,55,310 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಲೆಕ್ಕ ನೋಡಿದರೆ ಈ ಕ್ಷೇತ್ರ ಬಿಜೆಪಿಗೆ ಅತೀ ಹೆಚ್ಚು ಅನುಕೂಲವಾಗಿರುವ ಕ್ಷೇತ್ರ. 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಕಣದಿಂದಲೇ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಕೈ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರಗೆ ಬೆಂಬಲ ಸೂಚಿಸಿದರು.
ಭವಿಷ್ಯಃ ಅದೇ ಕಾಂಗ್ರೆಸ್ ಸೋಲಿಗೆ ಇಲ್ಲಿ ಪ್ರಬಲ ಕಾರಣವಾಗಿ ಮುಸ್ಲಿಂ ಮತಗಳು ಕ್ರೂಢೀಕರಣವಾಗುತ್ತಿದ್ದಂತೆಯೇ ಬಿಜೆಪಿ ಹಣೆಗೆ ಕೇಸರಿ ಬಣ್ಣದ ತಿಲಕ ಇಡುವ ಅಭಿಯಾನ ಆರಂಭಿಸಿ ಕ್ಷೇತ್ರದಲ್ಲಿನ ಹಿಂದೂ ಮತ್ತು ಲಿಂಗಾಯತ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗೆದ್ದಿತು.
ನಗರ ಮಧ್ಯದ ಹಳ್ಳಿಗರು ಯಾರತ್ತ?: ಈ ಕ್ಷೇತ್ರ ನಗರ ಕ್ಷೇತ್ರವಾದರೂ ಇಲ್ಲಿ ಇನ್ನೂ ಕೃಷಿ ಸಮುದಾಯದ ದೊಡ್ಡ ದೊಡ್ಡ ಹಳ್ಳಿಗಳಿವೆ. ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ಉಣಕಲ್, ಗೋಕುಲ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ಗೆ ಹೆಚ್ಚು ಒಲವು ವ್ಯಕ್ತವಾಗಿದ್ದು ಸತ್ಯ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಬರೊಬ್ಬರಿ 20,843 ಮತಗಳ ಅಂತರ ಕಾಯ್ದುಕೊಂಡಿತ್ತು. ಆದರೆ ಈ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಕೃಷಿಕರಿದ್ದು, ಈ ಪೈಕಿ ಹೆಚ್ಚಿನ ಜನರು ಈ ಬಾರಿ ವಿನಯ್ ಬೆಂಬಲಕ್ಕೆ ನಿಂತಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಈ ಕ್ಷೇತ್ರದಲ್ಲಿನ ಮಧ್ಯಮ ವರ್ಗದ ಲಿಂಗಾಯತರು ಮತ್ತು ಬಿಜೆಪಿ ಬೆಂಬಲಿಗರು ಬರೊಬ್ಬರಿ 1.5 ಲಕ್ಷದಷ್ಟಿದ್ದು, ಈ ಪೈಕಿ ಹೆಚ್ಚಿನವರು ಬಿಜೆಪಿಯತ್ತ ಒಲವು ತೋರಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕಳೆದ ಬಾರಿಯಷ್ಟು ಅಲ್ಲದೇ ಹೋದರೂ ಬಿಜೆಪಿ ಈ ಕ್ಷೇತ್ರದಲ್ಲಿ ಕೊಂಚ ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಕಳೆದ ಬಾರಿಗಿಂತ ಈ ಬಾರಿ ಲಿಂಗಾಯತ ವಿಚಾರ ಈ ಕ್ಷೇತ್ರದಲ್ಲೂ ತಕ್ಕಮಟ್ಟಿಗೆ ಕೆಲಸ ಮಾಡಿದೆ.
ಮತಗುಚ್ಛಗಳು ಎತ್ತ ?: ಇನ್ನು ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಕೊಳಗೇರಿ ಪ್ರದೇಶಗಳು ಇರುವುದು ಇದೇ ಕ್ಷೇತ್ರದಲ್ಲಿ. ಇಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ವಾಸವಾಗಿದ್ದು, ಕೊಳಗೇರಿಗಳಲ್ಲಿ ಮತದಾನ ಪ್ರಮಾಣ ಶೇ.80ಕ್ಕಿಂತಲೂ ಅಧಿಕವಾಗಿದೆ. ಲಕ್ಷ್ಮೀ ಸಿಂಗನಕೇರಿ, ಗೊಲ್ಲರ ಓಣಿ, ಸುಡಗಾಡು ಸಿದ್ಧರ ಕಾಲೋನಿ, ತೇಜಸ್ವಿನಗರ ಎಲ್ಲಕ್ಕಿಂತ ಹೆಚ್ಚಾಗಿ ಹುಬ್ಬಳ್ಳಿಯಲ್ಲಿರುವ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗಿದ್ದು, ಇದು ಯಾರಿಗೆ ಸಿಹಿ, ಯಾರಿಗೆ ಕಹಿ ಎನ್ನುವ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಈ ಸ್ಲಂಗಳಲ್ಲಿ ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಜನರೇ ಹೆಚ್ಚು ವಾಸವಾಗಿದ್ದಾರೆ. ಈ ಬಾರಿ ಇವರು ಯಾರಿಗೆ ಒಲವು ತೋರಿಸಿದ್ದಾರೆನ್ನುವುದು ಮೇ 23ಕ್ಕೆ ಗೊತ್ತಾಗಲಿದೆ. ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಧಾರವಾಡ ಬಿಜೆಪಿ ಕೈ ಹಿಡಿದಿದ್ದರೆ, ಹುಬ್ಬಳ್ಳಿ ಕಾಂಗ್ರೆಸ್ ಕೈ ಹಿಡಿಯುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹು-ಧಾ ಪಶ್ಚಿಮ ಕ್ಷೇತ್ರ:
ಈ ಬಾರಿ ಖಂಡಿತಾ ಈ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಅಣ್ಣಾವರ್ರೇ ಹೆಚ್ಚು ಮತಗಳನ್ನು ಪಡೆಯುತ್ತಾರೆ. ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಬಿಜೆಪಿಗಿಂತ ಇಲ್ಲಿ ಕಾಂಗ್ರೆಸ್ ಬಲಗೊಂಡಿದ್ದು, ಗೆಲುವು ನಮ್ಮದೇ . -ಸೃಜನ್, ಕಾಂಗ್ರೆಸ್ ಕಾರ್ಯಕರ್ತ
•ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ