ಕಾಣೆಯಾದ ಯುವತಿ ಪ್ರಿಯಕರನ ಜತೆ ಮದುವೆಯಾಗಿ ಪ್ರತ್ಯಕ್ಷ
ಮನೆಬಿಟ್ಟು ಹೋಗಿ ವಿವಾಹವಾದ ಪ್ರೇಮಿಗಳುಠಾಣೆಯಲ್ಲಿ ಪಾಲಕರ ಸಮಕ್ಷಮ ಶುಭ ಹಾರೈಕೆ
Team Udayavani, Jun 28, 2021, 4:39 PM IST
ಹುಬ್ಬಳ್ಳಿ: ಮಗಳು ಕಾಣೆಯಾಗಿದ್ದಾಳೆಂದು ದೂರು ಕೊಟ್ಟಿದ್ದ ಪಾಲಕರಿಗೆ ಮರುದಿನ ಮದುವೆಯಾಗಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ಗೋಕುಲ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೋಕುಲ ಕುರ್ಡಿಕೇರಿ ಓಣಿಯ 21 ವರ್ಷದ ಶಿಲ್ಪಾ ಎಂ. ಕುರಿ ಜೂ. 25ರಂದು ಬೆಳಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಕಾಣೆಯಾಗಿದ್ದಳು. ಈ ಕುರಿತು ಅವರ ತಂದೆ ಮಹಾದೇವಪ್ಪ ಅವರು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಅದರನ್ವಯ ಠಾಣೆಯ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮತ್ತು ಸಿಬ್ಬಂದಿ ಯುವತಿಯ ಮೊಬೈಲ್ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಪತ್ತೆ ಹಚ್ಚಿದ್ದಾರೆ. ಆಗ ತಾನು ಮಂಜುನಾಥ ಬಿ. ಉಣಕಲ್ ಎಂಬಾತನೊಂದಿಗೆ ಮದುವೆ ಆಗಿದ್ದೇನೆ. ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದಾರೆ.
ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರು ಯುವತಿ ಮತ್ತು ಯುವಕನ ಪಾಲಕರಿಗೆ ವಿಷಯ ತಿಳಿಸಿ, ಅವರನ್ನು ಠಾಣೆಗೆ ಕರೆಯಿಸಿದ್ದಾರೆ. ಇವರಿಬ್ಬರು ವಯಸ್ಸಿಗೆ ಬಂದವರಾಗಿದ್ದು, ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಇಚ್ಛೆಯಂತೆ ಇರಲು ಬಿಡಿ. ಯಾವುದೇ ತಕರಾರು ಮಾಡಬೇಡಿ ಎಂದು ತಿಳಿವಳಿಕೆ ನೀಡಿ, ಅವರ ಸಮಕ್ಷಮದಲ್ಲೇ ಇಬ್ಬರಿಗೂ ಶುಭ ಹಾರೈಸಿ ಕಳುಹಿಸಿದ್ದಾರೆ.
ಶಿಲ್ಪಾ ಮತ್ತು ಮಂಜುನಾಥ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಒಬ್ಬರಿಗೊಬ್ಬರು ಪರಿಚಿತರಾಗಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಂಜುನಾಥನು ಕೆಲ ತಿಂಗಳಿನಿಂದ ತಾಲೂಕಿನ ಗಂಗಿವಾಳ ಗ್ರಾಮದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಶಿಲ್ಪಾ ಮತ್ತು ಮಂಜುನಾಥ ಮನೆಬಿಟ್ಟು ಹೋಗಿ ಈಗ ಮದುವೆ ಮಾಡಿಕೊಂಡು ಬಂದು ಪೊಲೀಸರ ಭದ್ರತೆಯಲ್ಲಿ ಪಾಲಕರ ಎದುರು ಪ್ರತ್ಯಕ್ಷವಾಗಿದ್ದಾರೆ.