ರಾಜಕೀಯ ಸಂಘಟಿತ ಪ್ರಯತ್ನಕ್ಕೆ ಶ್ರೀಕಾರ
Team Udayavani, Jan 6, 2020, 11:19 AM IST
ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ರಾಜಕೀಯ ಸಂಘಟಿತ ಯತ್ನಕ್ಕೆ ಶ್ರೀಕಾರ ಹಾಕಲಾಗಿದೆ. ರಾಜಕೀಯ ಒಳಸುಳಿಗೆ ಸಿಲುಕಿದ್ದ ಮಹದಾಯಿ ವಿಷಯವಾಗಿ ಇದೀಗ ಒಗ್ಗಟ್ಟಿನ ಮಂತ್ರ ನಿನಾದಿಸತೊಡಗಿದೆ.
ಮಹದಾಯಿ, ಕಳಸಾ-ಬಂಡೂರಿ ನಾಲಾ ವಿಚಾರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆಯಾದರೂ, ನಿರೀಕ್ಷಿತ ಫಲ ದೊರೆತಿಲ್ಲ. ಮಹದಾಯಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಪಕ್ಷಗಳ ಶಾಸಕರು, ಸಂಸದರು ಸಂಘಟಿತ ಧ್ವನಿ ಮೊಳಗಿಸಲು ಮುಂದಾಗಿರುವುದು, ಆಶಾದಾಯಕ ಬೆಳವಣಿಗೆಯಾಗಿದೆ.
ನಿರಂತರತೆ ಮುಖ್ಯ: ರಾಜ್ಯದ ನೆಲ, ಜಲ, ಪ್ರದೇಶದ ಅಭಿವೃದ್ಧಿ ವಿಚಾರಕ್ಕೆ ಬಂದಾಗ ರಾಜಕೀಯ ಲಾಭ-ನಷ್ಟ ಬದಿಗಿರಿಸಿ ಒಗ್ಗಟ್ಟಿನ ಮಂತ್ರ ಪಠಿಸಬೇಕಾದ ಅನಿವಾರ್ಯತೆ ಇದೆ. ನೆರೆ ರಾಜ್ಯಗಳಲ್ಲಿ, ನಮ್ಮದೇ ರಾಜ್ಯದ ದಕ್ಷಿಣ ಭಾಗದಲ್ಲಿ ಜನಪ್ರತಿನಿಧಿಗಳು ಹಲವು ವಿಚಾರಗಳಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅದರ ಕೊರತೆ ಇತ್ತು. ಇದೀಗ ಮಹದಾಯಿ ವಿಚಾರದಲ್ಲಿ ಸಂಘಟಿತ ಧ್ವನಿ ಮೊಳಗಿರುವುದು ಹೊಸ ಬೆಳವಣಿಗೆಯಾಗಿದೆ.
ಮಹದಾಯಿ, ಕಳಸಾ-ಬಂಡೂರಿ ನಾಲಾ ಕುರಿತಾಗಿ ಪಕ್ಷಾತೀತವಾಗಿ ಸಂಘಟಿತ ಧ್ವನಿ ಮೊಳಗಿಸಲು ವಿಧಾನ ಪರಿಷತ್ತು ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಶಾಸಕರು, ಸಂಸದರ ಸಭೆ ಆಯೋಜಿಸಿದ್ದರು. ಸಭೆಗೆ ಒಟ್ಟು 6 ಜನ ಸಂಸದರು, 15 ಜನ ವಿಧಾನಸಭೆ ಸದಸ್ಯರು, 12 ಜನ ವಿಧಾನಪರಿಷತ್ತು ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು. ರವಿವಾರ ನಡೆದ ಸಭೆಗೆ ಒಬ್ಬರು ಸಂಸದರು, 6 ಜನ ವಿಧಾನಸಭೆ ಸದಸ್ಯರು, 4 ಜನ ವಿಧಾನಪರಿಷತ್ತು ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಮಾತ್ರ ಆಹ್ವಾನಿತ ಸಂಸದರಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ.
ಲೋಕಸಭೆ ಸದಸ್ಯರಾದ ಸುರೇಶ ಅಂಗಡಿ, ಅನಂತಕುಮಾರ ಹೆಗಡೆ, ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಗೈರು ಹಾಜರಾಗಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ವಿಧಾನಸಭೆ ಸದಸ್ಯರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಆನಂದ ಮಾಮನಿ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಪಾಲ್ಗೊಂಡಿದ್ದರು. ಸಚಿವ ಸಿ.ಸಿ.ಪಾಟೀಲ, ದೊಡ್ಡಗೌಡ್ರ ಮಹಾಂತೇಶ ಕಿತ್ತೂರು, ಮಹಾಂತೇಶ ಕೌಜಲಗಿ, ಮಹಾದೇವಪ್ಪ ಯಾದವಾಡ, ಕಳಕಪ್ಪ ಬಂಡಿ, ಎಚ್.ಕೆ. ಪಾಟೀಲ, ಅಂಜಲಿ ನಿಂಬಾಳ್ಕರ, ಕುಸುಮಾವತಿ ಶಿವಳ್ಳಿ ಗೈರು ಹಾಜರಾಗಿದ್ದರು. ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಾದಾಮಿ ಶಾಸಕ ಸಿದ್ಧರಾಮಯ್ಯ ಅವರು ಪತ್ರ ಕಳುಹಿಸಿದ್ದು, ಸಭೆಯ ನಿರ್ಣಯಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ತು ವಿಪಕ್ಷ ನಾಯಕ ಎಸ್. ಆರ್. ಪಾಟೀಲ, ಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ, ಶ್ರೀನಿವಾಸ ಮಾನೆ ಪಾಲ್ಗೊಂಡಿದ್ದರು. ಎಸ್.ವಿ. ಸಂಕನೂರು, ಅರುಣ ಶಹಾಪುರ, ಹನುಮಂತ ನಿರಾಣಿ, ಎಸ್.ಎಲ್.
ಘೋಕ್ಲೃಕರ, ಆರ್.ಬಿ. ತಿಮ್ಮಾಪುರ, ವಿವೇಕರಾವ್ ಪಾಟೀಲ, ಸನೀಲಗೌಡ ಪಾಟೀಲ, ಮಹಾಂತೇಶ ಕೌಟಗಿಮಠ ಗೈರು ಹಾಜರಾಗಿದ್ದರು. ಮಹದಾಯಿ ವಿಷಯವಾಗಿ ಶಾಸಕರು ಹಾಗೂ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನ ಮಂತ್ರಕ್ಕೆ ಮುಂದಾಗಿದ್ದು, ಇದು ನಿರಂತರತೆ ಹೊಂದಬೇಕಾಗಿದೆ. ಮೇಲಿಂದ ಮೇಲೆ ಸಭೆಗಳು ನಡೆದು ಇನ್ನಷ್ಟು ಸ್ಪಷ್ಟತೆಗೆ ಬರಬೇಕಾಗಿದೆ. ಎಲ್ಲಿಯೂ ಪಕ್ಷ ರಾಜಕೀಯ, ರಾಜಕೀಯ ಲಾಭ-ನಷ್ಟ ಸೇರದೆ ರಾಜ್ಯ-ರೈತರ ಹಿತ ಮೊದಲು ಎಂಬುದು ಗಟ್ಟಿಗೊಳ್ಳಬೇಕಾಗಿದೆ. ಸಭೆಗೆ ಬಾರದಿರುವ ಜನಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ತಮ್ಮ ಹಾಜರಾತಿ ತೋರಿಸುವ ಮೂಲಕ ಸಂಘಟಿತ ಯತ್ನಕ್ಕೆ ಬಲ ಹೆಚ್ಚಿಸಬೇಕಾಗಿದೆ.
ಸೂಕ್ಷ್ಮ ವಿಚಾರ: ಮಹದಾಯಿ ಕೇವಲ ಸುಲಭವಾಗಿ ಇಲ್ಲವೆ ಜನಪ್ರತಿನಿಧಿಗಳ ಒಂದೆರಡು ಸಭೆಗಳಿಂದ ಇತ್ಯರ್ಥಗೊಳ್ಳುವುದಲ್ಲ ಎಂಬುದು ಸ್ಪಷ್ಟ. ಇದೊಂದು ಅಂತಾರಾಜ್ಯ ವಿವಾದವಾಗಿದೆ. ಕಾನೂನು ಸಮರವೂ ಚಾಲ್ತಿಯಲ್ಲಿರುವುದರಿಂದ ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಎಚ್ಚರಿಕೆ ಹೆಜ್ಜೆ ಇರಿಸಬೇಕಾಗಿದೆ. ಸಮಯಾವಕಾಶವು ಅಗತ್ಯವಾಗಿದೆ ಎಂಬುದು ಹಲರ ಅಭಿಪ್ರಾಯ.
ಹುಬ್ಬಳ್ಳಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ನಡೆದ ಚರ್ಚೆಯಲ್ಲಿ ಎಲ್ಲಿಯೂ ಪಕ್ಷ ರಾಜಕೀಯ ಸುಳಿದಾಟ, ಪರಸ್ಪರ ಕಾಲೆಳೆಯುವ ಯತ್ನಗಳು ನಡೆಯದೆ, ಮುಕ್ತ ಮನಸ್ಸಿನೊಂದಿಗೆ ಮಹದಾಯಿಗೆ ತಾರ್ಕಿಕ ಅಂತ್ಯ ಕಾಣಿಸುವುದು ಹೇಗೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಮೂರು ಪಕ್ಷಗಳ ಜನಪ್ರತಿನಿಧಿಗಳ ಒಟ್ಟು ಆಶಯ ಹೇಗಾದರೂ ಮಾಡಿ ಮಹದಾಯಿ ನೀರಿನ ಪಾಲು ಪಡೆಯುವುದಾಗಿತ್ತು ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಕಾನೂನು ಹಾಗೂ ತಾಂತ್ರಿಕ ವಿಚಾರವಾಗಿ ಏನೆಲ್ಲಾ ಹೋರಾಟಕ್ಕೆ ಮುಂದಾಗಬೇಕು. ಹಿಂದಿನ ಕೆಲವೊಂದು ಲೋಪಗಳನ್ನು ಹೇಗೆ ಸರಿಪಡಿಸಿ, ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಯಾವ ಹೆಜ್ಜೆಗಳನ್ನಿರಿಸಬೇಕೆಂದು ಕಾನೂನು ತಜ್ಞರ ಸ್ಪಷ್ಟ ಸಲಹೆ ಪಡೆಯುವ ಬಗ್ಗೆಯೇ ಹೆಚ್ಚು ಒತ್ತು ನೀಡಲಾಯಿತು. ವಿಷಯ ಸೂಕ್ಷ್ಮವಾಗಿದ್ದರಿಂದ, ಕೇಂದ್ರಕ್ಕೆ ಮನವರಿಕೆ ಹಾಗೂ ರಾಜ್ಯದ ಹಿತಕ್ಕೆ ಪೂರಕ ಯತ್ನಗಳಿಗೆ ಒಂದಿಷ್ಟು ಕಾಲಾವಕಾಶದ ಅಗತ್ಯ ಇದೆ ಎಂಬುದಕ್ಕೆ ಸಭೆಯ ಹಾಜರಿದ್ದ ಎಲ್ಲ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ಮಹದಾಯಿ ವಿಚಾರದಲ್ಲಿ ಸಂಘಟಿತ ಧ್ವನಿಯೊಂದಿಗೆ ಹಲವಾರು ಹೆಜ್ಜೆಗಳನ್ನು ಇರಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ರಾಜಕೀಯವಾಗಿ ಒಗ್ಗಟ್ಟಿನ ನಿಲುವಿನ ಮೊದಲ ಹೆಜ್ಜೆ ಇರಿಸಿಯಾಗಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ