ಈಗ ಉದ್ಯೋಗ ಖಾತ್ರಿ ವರದಾನ
Team Udayavani, Apr 26, 2020, 2:31 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ನೀಡಿಕೆ, ಕೃಷಿ ಕ್ಷೇತ್ರಕ್ಕೆ ಪೂರಕ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಪರಿಣಾಮಕಾರಿ ಬಳಕೆಗೆ ಇದು ಸಕಾಲವಾಗಿದೆ. ಸಾಮಾಜಿಕ ಸೇವೆಗೆ ನಾವೆನ್ನುವ ಎನ್ಜಿಒಗಳು ನರೇಗಾ ಪಾಲುದಾರಿಕೆ ಪಡೆದು ಪ್ರಚಾರ, ಜಾಗೃತಿಗೆ ಮುಂದಾಗಬೇಕಾಗಿದೆ.
ಕೋವಿಡ್ 19 ಕಾರಣದಿಂದ ಉದ್ಯೋಗ ಹರಸಿ ವಿವಿಧ ಮಹಾನಗರಗಳಿಗೆ ವಲಸೆ ಹೋಗಿದ್ದ ಅನೇಕ ಜನ ತಮ್ಮ ಸ್ವ ಗ್ರಾಮಗಳಿಗೆ ಮರಳಿದ್ದು, ಉದ್ಯೋಗ ಇಲ್ಲದೆ ಕುಳಿತಿದ್ದಾರೆ. ಇನ್ನೊಂದು ಕಡೆ ಇದು ಮುಂಗಾರು ಹಂಗಾಮಿಗೆ ತಯಾರಿ ಸಮಯ ಇದಾಗಿದ್ದು, ನರೇಗಾದಡಿ ಕೃಷಿ ಪೂರಕ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ನರೇಗಾ ಕಾಮಗಾರಿ ಆರಂಭಿಸುವಂತೆಯೂ ಸೂಚಿಸಿದೆ. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ನರೇಗಾ ಕಾಮಗಾರಿ ಆರಂಭವಾಗಿದ್ದು, ಹಾವೇರಿ ಜಿಲ್ಲೆ ಸೇರಿದಂತೆ ಕೆಲವೊಂದು ಕಡೆ ಎನ್ಜಿಒಗಳು ನರೇಗಾ ಕಾಮಗಾರಿಯಲ್ಲಿ ಸಾಮಾಜಿಕ ಸೇವಾ ಪಾಲುದಾರಿಕೆ ಪಡೆದುಕೊಂಡಿವೆ.
ಕೃಷಿಗೆ ಪೂರಕ ಕಾರ್ಯ ಅವಶ್ಯ: ನರೇಗಾ ಅಡಿಯಲ್ಲಿ ರಸ್ತೆ, ಚರಂಡಿ, ಕಟ್ಟಡಗಳನ್ನು ನಿರ್ಮಿಸುವುದು ಒಳ್ಳೆಯದೆ. ಆದರೆ, ಅದಕ್ಕಿಂತ ಮುಖ್ಯವಾಗಿ ಕೃಷಿ-ತೋಟಗಾರಿಕೆಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದ್ದು, ಈ ನಿಟ್ಟಿನಲ್ಲಿಯೇ ಆಯಾ ಜಿಲ್ಲಾಡಳಿತ, ಗ್ರಾಪಂಗಳು ಗಮನ ನೀಡುವ ಅಗತ್ಯವಿದೆ.
ಮುಂಗಾರು ಹಂಗಾಮಿಗೆ ಪೂರ್ವ ತಯಾರಿ ಕಾಲ ಇದಾಗಿದೆ. ರೈತರು ಈ ಸಂದರ್ಭದಲ್ಲಿಯೇ ಹೊಲದ ಬದುಗಳನ್ನು ಹಾಕಿಕೊಳ್ಳುವುದು, ನಟ್ಟು ಕಡಿಯುವುದು, ಕೃಷಿ ಹೊಂಡಗಳ ನಿರ್ಮಾಣ, ಹೊಲದಲ್ಲಿನ ಕೆರೆಗಳ ಹೂಳೆತ್ತುವಿಕೆ, ಜಂಗಲ್ ಕಟಾವ್ ಇತ್ಯಾದಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ನರೇಗಾ ಅಡಿಯಲ್ಲಿ ಬದುಗಳ ನಿರ್ಮಾಣ, ಕೆರಗಳ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಜಂಗಲ್ ಕಟಾವ್ ನಂತಹ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ಇದು ಕೃಷಿಕರಿಗೆ ಪ್ರಯೋಜನಕಾರಿ ಆಗಲಿದೆ. ಉಪಯುಕ್ತ ಆಸ್ತಿಯ ಸೃಷ್ಟಿಯೂ ಆದಂತಾಗಲಿದೆ.
ಸಂಕಷ್ಟದಲ್ಲಿ ಉದ್ಯೋಗ ಸೃಷ್ಟಿ: ಕೋವಿಡ್ 19 ಸಂಕಷ್ಟದಿಂದಾಗಿ ಎಲ್ಲ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ, ಇದ್ದ ಕೆಲವು ಮಂದಗತಿಯಲ್ಲಿವೆ. ಉದ್ಯೋಗವೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕರು ಸ್ವಗ್ರಾಮಗಳಿಗೆ ಮರಳಿದ್ದು, ಉದ್ಯೋಗವಿಲ್ಲದೆ ಕುಳಿತುಕೊಳ್ಳುವಂತಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೂ ಇದೀಗ ಕೆಲಸವಿಲ್ಲದ ಸಮಯವಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಿದರೆ ಉದ್ಯೋಗವಿಲ್ಲದೆ ಕುಳಿತವರಿಗೆ ಉದ್ಯೋಗ ದೊರೆಯಲಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರ ಉಚಿತ ಪಡಿತರವೆಂದು ಅಕ್ಕಿ, ಗೋಧಿ, ಬೇಳೆ ನೀಡುತ್ತಿದೆ. ಉಳಿದ ಪದಾರ್ಥಗಳು ಹಾಗೂ ಕುಟುಂಬ ನಿರ್ವಹಣೆಗೆ ಕೃಷಿ ಕೂಲಿಕಾರರು, ಬಡವರಿಗೆ ಹಣ ಎಲ್ಲಿಂದ ಬರುತ್ತದೆ. ನರೇಗಾದಡಿ ಉದ್ಯೋಗ ನೀಡಿದರೆ, ಹಣ ದೊರೆತಂತಾಗಲಿದೆ. ಪ್ರಸ್ತುತ ನರೇಗಾ ಅಡಿಯಲ್ಲಿ ಒಂದು ದಿನಕ್ಕೆ 275 ರೂ. ಹಣ ನೀಡಲಾಗುತ್ತಿದ್ದು, ಕೆಲಸಕ್ಕೆ ಬರುವವರು ತಮ್ಮದೇ ಗುದ್ದಲಿ, ಸಲಿಕೆ ತಂದರೆ 10 ರೂ. ಸೇರಿ ಒಟ್ಟು 285 ರೂ. ಸಿಗುತ್ತದೆ. ಉದ್ಯೋಗವಿಲ್ಲವೆಂದು ಪರಿತಪಿಸುವವರಿಗೆ ಇದೊಂದು ಮಹತ್ವದ ವರದಾನವಾಗಲಿದೆ.
ನರೇಗಾ ಉದ್ಯೋಗಕ್ಕೆ ಆಗಮಿಸುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುವಿಕೆ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತ್ ನಿಂದಲೇ ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ. ಬೆಳಗ್ಗೆ 5ರಿಂದ 10-11 ಗಂಟೆವರೆಗೆ ಕೆಲಸ ಮಾಡಿದರೆ ಉದ್ಯೋಗಿಗಳಿಗೆ ಬಿಸಿನ ತಾಪವೂ ಇರದು. ಸಮರ್ಪಕ ಹಾಗೂ ಗುಣಮಟ್ಟದ ಕೆಲಸದ ಮೇಲುಸ್ತುವಾರಿ ಇರಬೇಕು. ಯಾರ ಹೊಲದಲ್ಲಿ ಕೆಲಸ ನಡೆಯುತ್ತದೆಯೋ ಆ ಹೊಲದ ರೈತ ಪಾಲುದಾರನನ್ನಾಗಿಸುವುದರಿಂದ ಕೆಲಸದ ನಿರ್ವಹಣೆಯನ್ನು ಆತನು ಗಮನಿಸುತ್ತಿರುತ್ತಾನೆ. ಕೋವಿಡ್ 19 ಹಿನ್ನೆಲೆಯಲ್ಲಿ ನರೇಗಾ ಅಡಿಯಲ್ಲಿ 100 ರೂ. ಕೆಲಸದಲ್ಲಿ ಉದ್ಯೋಗಿ 70 ರೂ.ನಷ್ಟು ಕೆಲಸ ಮಾಡಿದರೂ, ಅದನ್ನು ಪೂರ್ಣವೆಂದು ಪರಿಗಣಿಸಿ 100 ರೂ.ನಷ್ಟು ಕೂಲಿ ನೀಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.
ಎನ್ಜಿಒಗಳು ಪಾಲುದಾರಿಕೆ ಪಡೆಯಲಿ: ಸಾಮಾಜಿಕ ಸೇವೆಯಲ್ಲಿ ತೊಡಗಿದ, ಕೋವಿಡ್ 19 ಇನ್ನಿತರ ವಿಕೋಪ ಸ್ಥಿತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಹಂಚಿಕೆ, ಸಂಗ್ರಹ ಕಾರ್ಯದಲ್ಲಿ ತೊಡುವ ಸ್ವಯಂ ಸೇವಾ ಸಂಸ್ಥೆಗಳು(ಎನ್ಜಿಒ) ಸಾಕಷ್ಟು ಇವೆ. ಸಾಮಾಜಿಕ ಸೇವೆಯ ಭಾಗವಾಗಿ ಎನ್ ಜಿಒಗಳು ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಜನರಿಗೆ ಜಾಗೃತಿ-ಪ್ರೇರಣೆ ನೀಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ಹಾವೇರಿ ಜಿಲ್ಲೆಯಲ್ಲಿ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗಾಗಲೇ ರಾಣೆಬೆನ್ನೂರು, ಹಿರೇಕೆರೂರು ತಾಲೂಕುಗಳ ನಾಲ್ಕೈದು ಗ್ರಾಮ ಪಂಚಾಯತ್ಗಳಲ್ಲಿ ನರೇಗಾ ಕೆಲಸಕ್ಕೆ ಜನರನ್ನು ಪ್ರೇರೆಪಿಸುವ ಮೂಲಕ ಕೆಲಸಕ್ಕಚ್ಚಿದೆ. ವನಸಿರಿ ಸಂಸ್ಥೆ ಎರಡು ತಾಲೂಕುಗಳ ನಾಲ್ಕೈದು ಗ್ರಾಪಂ ವ್ಯಾಪ್ತಿಯಲ್ಲಿ ಬದು ಹಾಕುವುದು, ಕೆರೆ ಹೂಳೆತ್ತುವುದು, ಜಂಗಲ್ ಕಟಾವ್ ಕಾರ್ಯದಲ್ಲಿ ಸುಮಾರು 180-200 ಜನರನ್ನು ಉದ್ಯೋಗಕ್ಕಿಳಿಸುವ ಕಾರ್ಯ ಮಾಡಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ಎನ್ಜಿಒಗಳು ಆಯಾ ಜಿಲ್ಲೆಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆ ಪ್ರದರ್ಶನಕ್ಕಿಳಿಯಬೇಕಾಗಿದೆ, ಗ್ರಾಮೀಣ ಜನರನ್ನು ನರೇಗಾ ಕಾಮಗಾರಿಗೆ ಪ್ರೇರೇಪಿಸಬೇಕಾಗಿದೆ.
ಜಿಪಂ ಹಾಗೂ ಕೃಷಿ ಇಲಾಖೆ ಸಹಕಾರದೊಂದಿಗೆ ನಮ್ಮ ಸಂಸ್ಥೆ ಕಳೆದ ಎರಡು ವಾರಗಳಿಂದ ನಾಲ್ಕೈದು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗೆ ಜನರನ್ನು ತೊಡಗಿಸುವ ಕೆಲಸ ಮಾಡಿದೆ. ಇಂದಿನ ಸಂಕಷ್ಟ ಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿ ದೊಡ್ಡ ಸವಾಲು ಆಗಿದ್ದು, ನರೇಗಾ ಯೋಜನೆ ಇದಕ್ಕೆ ಮಹತ್ವದ ಪರಿಹಾರ ಆಗಿದೆ ಎಂಬುದನ್ನು ಗ್ರಾಮೀಣ ಜನತೆ ಅರಿಯಬೇಕಾಗಿದೆ. –ಎಸ್.ಡಿ.ಬಳಿಗಾರ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ
–ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ