ಉದಾಸೀನತೆ+ನಿರ್ಲಕ್ಷ್ಯ= 105 ಕೋಟಿ ಖೋತಾ!
Team Udayavani, Jun 24, 2017, 2:27 PM IST
ಹುಬ್ಬಳ್ಳಿ: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಾನಗರ ಪಾಲಿಕೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಉದಾಸೀನತೆಯಿಂದಾಗಿ ಸುಮಾರು 105 ಕೋಟಿ ರೂ.ಗಳು ಖೋತಾ ಆಗಿದೆ. ಸರಕಾರದಿಂದ ಬರಬೇಕಾದ ಪಾಲಿಕೆ ನೌಕರರ ಪಿಂಚಣಿ ಬಾಕಿ ಹಣಕ್ಕೆ ಎಳ್ಳು-ನೀರು ಬಿಟ್ಟಂತಾಗಿದೆ.
ರಾಜ್ಯ ಸರಕಾರ ಉಳಿದೆಲ್ಲ ಮಹಾನಗರ ಪಾಲಿಕೆಗಳಿಗೆ ನಿವೃತ್ತ ನೌಕರರ ಪಿಂಚಣಿ ಹಣ ನೀಡಿ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಹಣ ನೀಡದೆ ತಾರತಮ್ಯ ತೋರುತ್ತಿದೆ ಎಂಬ ಆರೋಪ ಇದೆಯಾದರೂ, ಪ್ರಕರಣದ ಕುರಿತಾಗಿ ಸೂಕ್ಷ್ಮವಾಗಿ ಗಮನಿಸಿದರೆ ಉದಾಸೀನತೆ, ನಿರ್ಲಕ್ಷ್ಯದ ಕಾರಣದಿಂದ ಬರಬೇಕಾದ ಹಣ ಕೈ ತಪ್ಪಿರುವುದು ಗೋಚರಿಸುತ್ತದೆ.
ಮುಖ್ಯವಾಗಿ ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಾಭಿವೃದ್ಧಿ ಇಲಾಖೆ ನಡುವಿನ ಸಮನ್ವಯ ಕೊರತೆ, ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು, ಮಹಾಪೌರರು ಸಮರ್ಪಕ ಒತ್ತಡ ಹಾಕದಿರುವುದು, ಪ್ರಕರಣದ ಗಂಭೀರತೆಯನ್ನು ಡಿಎಂಎ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ಅಧಿಕಾರಿಗಳೂ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ.
ಪಾಲಿಕೆಯಲ್ಲಿ ನೌಕರರ ಪಿಂಚಣಿಗೆ ತಿಂಗಳಿಗೆ ಸುಮಾರು 2.5ರಿಂದ 3 ಕೋಟಿ ರೂ.ವರೆಗೆ ವಾರ್ಷಿಕವಾಗಿ 26-27 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ನಾಲ್ಕು ವರ್ಷಗಳಿಂದ ಬಾಕಿ ಬಾಲ ಬೆಳೆಯುತ್ತಲೇ ಸಾಗಿದೆ.
ಹೆಚ್ಚುವರಿ ಅನುದಾನಕ್ಕೆ ಒತ್ತು ಕೊರತೆ?: ನೌಕರರ ಪಿಂಚಣಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಎಸ್ಎಫ್ಸಿ ಅಡಿಯಲ್ಲಿ ಅನುದಾನ ಬರುತ್ತದೆ. ಎಸ್ಎಫ್ಸಿಯಿಂದ ಬರುವ ಅನುದಾನ ಟೈಡ್ ಮತ್ತು ಅನ್ಟೈಡ್ ಎಂಬ ಎರಡು ವಿಭಾಗಗಳಲ್ಲಿ ಹಂಚಿಕೆಯಾಗುತ್ತದೆ. ಅನ್ಟೈಡ್ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸುವುದಾದರೆ, ಟೈಡ್ ನೌಕರರ ವೇತನ, ಸೌಲಭ್ಯ, ಪಿಂಚಣಿಯನ್ನು ಹೊಂದಿರುತ್ತದೆ.
ಆಯಾ ವರ್ಷಕ್ಕೆ ಬಂದ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಸಕಾಲಕ್ಕೆ ಸಲ್ಲಿಸುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸುವುದು ಮುಖ್ಯವಾಗಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಳಕೆ ಪ್ರಮಾಣ ಪತ್ರದ ಸಲ್ಲಿಕೆ ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಮರ್ಪಕವಾಗಿಲ್ಲದಿರುವುದೇ ಇಂದಿನ ಪಿಂಚಣಿ ಬಾಕಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ರಾಯಚೂರು, ಬೀದರ, ಕೊಪ್ಪಳದಂತಹ ಸಣ್ಣ ನಗರಗಳು ತಮಗೆ ಬಂದಂತಹ ಅನುದಾನ ಬಳಕೆಯೊಂದಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿ ಅಷ್ಟು ಇಷ್ಟು ಹಣ ಪಡೆದುಕೊಂಡಿವೆ. ಇವುಗಳಿಗೆ ಹೋಲಿಸಿದರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಯೋಜನೆ ಗಾತ್ರ ದೊಡ್ಡದಾಗಿದೆ. ಆದರೆ, ಬಂದ ಅನುದಾನದ ಸಮರ್ಪಕ ಹಾಗೂ ಸಕಾಲಿಕ ಬಳಕೆಯ ಕೊರತೆ ಹಲವು ಕಡೆ ಎದ್ದು ಕಾಣುತ್ತಿದೆ.
ಆರೋಪ-ಪ್ರತ್ಯಾರೋಪವಷ್ಟೇ ಬಳುವಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದ ಬಗ್ಗೆ ಈ ಹಿಂದೆ ವಿನಯಕುಮಾರ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗಲೂ ಈ ಬೇಡಿಕೆ ಮಂಡನೆ ಆಗಿತ್ತು. ಮುಖ್ಯಮಂತ್ರಿ ಬಂದಾಗಲೂ ಈ ಬಗ್ಗೆ ಮನವಿ ಮಾಡಲಾಗಿತ್ತು. ನೀಡುತ್ತೇವೆ ಎಂಬ ಭರವಸೆ ಕಾಂಗ್ರೆಸ್ನವರದ್ದಾದರೆ, ಪಿಂಚಣಿ ಬಾಕಿಗೆ ನಿರ್ಲಕ್ಷ್ಯ ಎಂಬ ಆರೋಪ ಬಿಜೆಪಿಯದ್ದಾಗಿತ್ತು.
ಆದರೆ ಡಿಎಂಎ ಹಾಗೂ ನಗರಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಯಾಕೆ ವಿಳಂಬ, ಅದಕ್ಕೆ ಪರಿಹಾರದ ಕ್ರಮವೇನೆಂದು ಯಾರೊಬ್ಬರು ತೀವ್ರ ರೀತಿಯ ಯತ್ನ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಬಂದ ಅನುದಾನದ ವಿನಿಯೋಗದ ಬಳಕೆ ಪ್ರಮಾಣ ಪತ್ರದ ಸಕಾಲಿಕ ಸಲ್ಲಿಕೆ ಆಗದಿರುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಸಮರ್ಪಕ ಒತ್ತಡ ಇಲ್ಲದಿರುವುದರಿಂದ, ನಗರಾಭಿವೃದ್ಧಿ ಇಲಾಖೆ ಆಯಾ ವರ್ಷದ ಹೆಚ್ಚುವರಿ ಅನುದಾನವನ್ನು ಇತರೆ ಕಾರ್ಯಗಳಿಗೆ ಅಥವಾ ಬೇಡಿಕೆ ಬಂದ ಕಡೆ ಹಂಚಿಕೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗೆ ಹೆಚ್ಚುವರಿ ಹಣ ಹಂಚಿಕೆ ಆಗದಿರುವುದಕ್ಕೆ ಇದು ಕೂಡ ಪ್ರಮುಖ ಕಾರಣಗಲ್ಲೊಂದಾಗಿದೆ. ಇದರ ಹಿಂದೆ ರಾಜಕೀಯ ತಾರತಮ್ಯ ನೀತಿ ಅಡಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ನಿವೃತ್ತಿ ನೌಕರರ ಪಿಂಚಣಿ ಬಾಕಿ ಹಣದ ಬಗ್ಗೆ ಸಮರ್ಪಕ ಕ್ರಮ ಇಲ್ಲದ್ದರಿಂದ ಬಾಕಿ ಪ್ರಮಾಣ 30, 40 ಕೋಟಿ ರೂ.ಗಳ ಬಾಕಿಯ ಬಾಲ ಇದೀಗ 105ಕೋಟಿ ರೂ.ಗೆ ಬೆಳೆದು ನಿಂತಿದೆ.
ಏಪ್ರಿಲ್ನಿಂದ ಮಾತ್ರ ಪಿಂಚಣಿ ಹಣ: ಪಿಂಚಣಿ ಬಾಕಿ ಹಣ ಕುರಿತಾಗಿ ಮಹಾಪೌರ ಡಿ.ಕೆ.ಚವ್ಹಾಣ ನೇತೃತ್ವದಲ್ಲಿ ಪಾಲಿಕೆ ಸರ್ವಪಕ್ಷಗಳ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ಬೇಗ್ ಅವರನ್ನು ಭೇಟಿ ಮಾಡಿ ಬಾಕಿ ಹಣಕ್ಕೆ ಒತ್ತಾಯಿಸಿತಾದರೂ, ಸರಕಾರ ಮಾತ್ರ ಇದಕ್ಕೆ ಒಪ್ಪದೆ, ಬಾಕಿ 105 ಕೋಟಿ ರೂ. ಹಣ ನೀಡಿಕೆ ಸಾಧ್ಯವಿಲ್ಲ.
ಏಪ್ರಿಲ್ನಿಂದ ಪಿಂಚಣಿ ಹಣವನ್ನು ಪಾವತಿ ಮಾಡುವುದಾಗಿ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದು, 105 ಕೋಟಿ ರೂ.ಗಳನ್ನು ಮರೆತು ಸರಕಾರದಿಂದ ಕೇವಲ ಎರಡು ತಿಂಗಳ ಬಾಕಿ ಹಣ ಹಾಗೂ ಮುಂದೆ ಪಿಂಚಣಿ ಹಣದ ಚಾಲ್ತಿ ಪಡೆದಿದೆ ಎಂಬುದಕ್ಕಷ್ಟೇ ಪಾಲಿಕೆ ತೃಪ್ತಿ ಪಟ್ಟುಕೊಳ್ಳುವಂತೆ ಆಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ