ಗಣೇಶೋತ್ಸವಕ್ಕೆ ಅವಕಾಶ ಅಗತ್ಯ: ಕಟೀಲ್
Team Udayavani, Aug 31, 2021, 8:28 PM IST
ಹುಬ್ಬಳ್ಳಿ: ಕೋವಿಡ್ ಇಳಿಕೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಿಸಿದೆ. ಜನರ ಭಾವನೆಗಳಿಗೆ ಸ್ಪಂದಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಭಾವನೆಗಳಿಗೆ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಗಣೇಶೋತ್ಸವ ಆಚರಿಸಬೇಕು ಎನ್ನುವ ಕುರಿತು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿಯಮ ರೂಪಿಸಿ ಅವಕಾಶ ನೀಡಲಿದೆ. ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿಲ್ಲ, ಬದಲಾಗಿ ಕೆಲವೊಂದು ನಿಯಮಗಳನ್ನು ವಿಧಿಸಿದೆ. ಆದರೆ ಇನ್ನೊಮ್ಮೆ ಸಭೆ ಸೇರಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಗಣೇಶೋತ್ಸವ ಆಚರಣೆ ಆಗಬೇಕು ಎನ್ನುವುದು ವೈಯಕ್ತಿಕ ಅಭಿಪ್ರಾಯ ಎಂದರು.
ಇದನ್ನೂ ಓದಿ:ಗಣೇಶನ ಮೂರ್ತಿ ಸ್ಥಾಪನೆಗೆ ಅನುಮತಿ ನೀಡೋದು ಸಿಎಂಗೆ ಬಿಟ್ಟಿದ್ದು : ಪ್ರಭು ಚವ್ಹಾಣ್
ಕೋವಿಡ್ನಂತಹ ಸಂದರ್ಭದಲ್ಲಿ ಚುನಾವಣೆ ಬೇಡವಾಗಿತ್ತು. ಆದರೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿ ಕೋವಿಡ್ ನಿಯಮಗಳನ್ನು ಹಾಕಿದೆ. ಪ್ರಚಾರಕ್ಕೆ ಐವರನ್ನು ಸೀಮಿತಗೊಳಿಸಿ ಆದೇಶಿಸಿದ್ದು, ಪಾಲನೆ ಎಲ್ಲರಿಗೂ ಕಷ್ಟವಾಗಲಿದೆ. ಪ್ರಚಾರಕ್ಕೆ ನಾಯಕರು ಬಂದಾಗ ಕಾರ್ಯಕರ್ತರು, ಜನರು ಆಗಮಿಸುತ್ತಾರೆ. ಆಗ ಐವರು ಮಾತ್ರ ಎನ್ನುವ ನಿಯಮ ಪಾಲನೆ ಕಷ್ಟವಾಗಲಿದೆ. ಆದರೂ ಚುನಾವಣೆ ಆಯೋಗದ ನಿಯಮಗಳನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದರು.