ಕೆಎಲ್ಇ ಸಂಸ್ಥೆ ವ್ಯಕ್ತಿಗತ ಸ್ವತ್ತಲ್ಲ, ಸಮಾಜದ ಸ್ವತ್ತು
Team Udayavani, Feb 15, 2021, 3:41 PM IST
ಹುಬ್ಬಳ್ಳಿ: ಕೆಎಲ್ ಇ ಸಂಸ್ಥೆ ಲಿಂಗಾಯತ ಸಮಾಜದ ಸ್ವಾಭಿಮಾನದ ಪ್ರತೀಕ. ಅನೇಕ ತ್ಯಾಗಮಯಿಗಳು, ಸಾವಿರಾರು ದಾನಿಗಳು, ನೂರಾರು ಮಠಗಳ ನೆರವಿನೊಂದಿಗೆ ಬೆಳೆದ ಸಂಸ್ಥೆ ಇದು. ಇಂತಹ ಸಂಸ್ಥೆ ಬಗ್ಗೆ ಲಘುವಾಗಿ, ಕೀಳುಭಾಷೆ ಬಳಸುವುದು ಸಮಾಜಕ್ಕೆ ಮಾಡಿದ ಅವಮಾನವಲ್ಲದೆ ಮತ್ತೇನು?
ಸಂಸ್ಥೆ ಬಗ್ಗೆ ಕೀಳಾಗಿ ಮಾತನಾಡುವುದು ತ್ಯಾಗಮಯಿ ಹಾಗೂ ದಾನಿಗಳಿಗೆ ಅವಮಾನ ಮಾಡಿದಂತೆ. ಇದನ್ನು ಸಮಾಜ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಮಾಜದ-ಕೆಎಲ್ಇ ಸಂಸ್ಥೆ ವಿರುದ್ಧ ಷಡ್ಯಂತ್ರ ಹೊಸದೇನು ಅಲ್ಲ. ಅವುಗಳನ್ನು ಮೆಟ್ಟಿ ನಿಂತು ಕೆಎಲ್ಇ ಇಂದು ಕೇವಲ ಕರ್ನಾಟಕವಷ್ಟೇ ಅಲ್ಲ ದೇಶ-ವಿದೇಶಗಳಲ್ಲೂ ಬೆಳೆದು ನಿಂತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ರೋಗಿಗಳಿಗೆ ಆರೋಗ್ಯ ಸೇವೆಯಲ್ಲಿ ತೊಡಗಿದೆ. ಕೆಎಲ್ಇ ವ್ಯಕ್ತಿಗತ ಸ್ವತ್ತಲ್ಲ, ಸಮಾಜದ ಸ್ವತ್ತು. ಸಮಾಜವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದರೆ ಅದಕ್ಕೆ ತಕ್ಕ ಉತ್ತರ ನೀಡದೆ ಬೇರೆ ದಾರಿ ಏನಿದೆ ಹೇಳಿ?.. ಇದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ ಸ್ಪಷ್ಟೋಕ್ತಿ.
ಕೆಎಲ್ಇ ಸಂಸ್ಥೆ ವಿರುದ್ಧದ ಆರೋಪ, ಹುಬ್ಬಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಲ್ಇ ಸಂಸ್ಥೆಯ ವೈದ್ಯಕೀಯ ಆಸ್ಪತ್ರೆ ಕುರಿತಾಗಿ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದರು.
ಷಡ್ಯಂತ್ರ ಹೊಸತಲ್ಲ: ಸಮಾಜ ವಿರುದ್ಧದ ಷಡ್ಯಂತ್ರ ಹೊಸತಲ್ಲ. ಕಾಲ ಕಾಲಕ್ಕೆ ಇಂತಹ ಘಟನೆಗಳು ನಡೆದು ಬಂದಿವೆ. ಸಮಾಜ-ಕೆಎಲ್ಇ ವಿರುದ್ಧ ಹತ್ತು ಹಲವು ರೂಪದಲ್ಲಿ ಷಡ್ಯಂತ್ರಗಳು ನಡೆದಿವೆ. ಇದೀಗ ಅದಕ್ಕೆ ಮತ್ತೂಂದು ಹೊಸ ಸೇರ³ಡೆಯಾಗಿದೆಯಷ್ಟೆ. ಇಂತಹ ಅದೆಷ್ಟೋ ಷಡ್ಯಂತ್ರ, ಅಪಪ್ರಚಾರ, ನಿಂದನೆಗಳನ್ನು ಮೆಟ್ಟಿ ನಿಂತು ಕೆಎಲ್ಇ ಬೆಳೆದಿದೆ. ಹುಬ್ಬಳ್ಳಿಗೆ ಕೆಎಲ್ಇ ವೈದ್ಯಕೀಯ ಕಾಲೇಜು-ಆಸ್ಪತ್ರೆ ಬರಬಾರದೆಂಬ ಷಡ್ಯಂತ್ರವನ್ನು ಕೆಲ ಕಾಣದ ಶಕ್ತಿಗಳು ಸೃಷ್ಟಿಸುವ, ಪರೋಕ್ಷವಾಗಿ ಬೆಂಬಲಿಸುವುದನ್ನು ತಳ್ಳಿ ಹಾಕಲಾಗದು. ಹಲವು ತ್ಯಾಗಮಯಿಗಳು ಕೆಎಲ್ಇ ಸಂಸ್ಥೆ ಕಟ್ಟಿದರು. ಸಮಾಜ ಅದನ್ನು ಸದೃಢಗೊಳಿಸಿತು. ನನ್ನ ವಿರುದ್ಧ ಆರೋಪ ಮಾಡಿದರೆ ಸುಮ್ಮನಿರಬಹುದು. ಆದರೆ, ಸಮಾಜದ ಸ್ವಾಭಿಮಾನದ ಸಂಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಅವಮಾನಿಸುವ ಯತ್ನಕ್ಕೆ ಮುಂದಾದರೆ ಸಹಿಸಿಕೊಳ್ಳುವ ಮಾತೇ ಇಲ್ಲ.
ಸಮಾಜದ ಧ್ವನಿ: ಕೆಎಲ್ಇ ಸಂಸ್ಥೆಗೆ ಇಂತಹ ಆರೋಪ-ಅಪಪ್ರಚಾರದ ಯುದ್ಧ ಹೊಸತಲ್ಲ. ಇಂತಹ ಅದೆಷ್ಟೋ ಯುದ್ಧಗಳನ್ನು ಗೆದ್ದುಕೊಂಡೇ ಸಂಸ್ಥೆ ಇಂದು 270ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದೆ. ಸಮಾಜದ ಧ್ವನಿಯಾಗಿ, ಸೇವೆಯ ಪ್ರತೀಕವಾಗಿ ಮುಂದುವರಿದಿದೆ. ಕೆಎಲ್ಇ ಸಂಸ್ಥೆ ವಿರುದ್ಧ ಹಾದಿ-ಬೀದಿಯಲ್ಲಿ ಕೀಳುಮಟ್ಟದ ಆರೋಪಕ್ಕೆ ಮುಂದಾಗಿರುವ ಮಠಾಧೀಶರೊಬ್ಬರ ಹೆಸರು ಹೇಳುವುದಕ್ಕೂ ಬಯಸಲ್ಲ. ಇಂತಹ ಅದೆಷ್ಟೋ ಜನರು ಕೆಎಲ್ಇ ಸಂಸ್ಥೆ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಸಂಸ್ಥೆ ಅದನ್ನು ದಕ್ಕಿಸಿಕೊಂಡು ಬಂದಿದೆ. ಲಿಂಗಾಯತ ಸಮಾಜದ ಸಾಭಿಮಾನ ಪ್ರತೀಕವಾದ, ಸಮಾಜ ಸಪ್ತ ಋಷಿಗಳು ಭದ್ರ ಬುನಾದಿ ಹಾಕಿದ, ಸಮಾಜದ ದಾನಿಗಳು, ಮಠಗಳ ದಾನದಿಂದ ಬೆಳೆದು ನಿಂತ, ಕೇವಲ ಲಿಂಗಾಯತ ಸಮಾಜಕ್ಕಷ್ಟೇ ಅಲ್ಲ ನಾಡಿನ, ದೇಶದ ವಿವಿಧ ಸಮಾಜ, ಧರ್ಮಗಳ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾದೇಗುಲವಾದ,
ಜಾತಿ-ಧರ್ಮಗಳನ್ನು ಮೀರಿ ಜನರಿಗೆ ಆರೋಗ್ಯ ಭಾಗ್ಯ ನೀಡುವ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಬಗ್ಗೆ ಕೀಳಾಗಿ ಮಾತನಾಡಿದರೆ ಮನಸ್ಸಿಗೆ ನೋವಾಗುತ್ತದೆ. ಸಮಾಜದ ಸ್ವಾಭಿಮಾನವನ್ನೇ ಅವಮಾನಿಸುವವರ ವಿರುದ್ಧ ಸಮಾಜ ಧ್ವನಿ ಎತ್ತಬೇಕಾಗುತ್ತದೆ. ದೆಹಲಿಯಲ್ಲಿನ ಏಮ್ಸ್ಗೆ ಸಮಾನ ರೀತಿಯಲ್ಲಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಆಸ್ಪತ್ರೆ ಎಲ್ಲ ರೀತಿಯ ವೈದ್ಯಕೀಯ ಸೇವೆಗಳನ್ನು ನೀಡುತ್ತಿದೆ. ಇದು ಸಮಾಜ ಹಾಗೂ ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ. ಹುಬ್ಬಳ್ಳಿಯಲ್ಲಿ ನಾವು ಯಾವುದೇ ವೈಯಕ್ತಿಕ ಆಸ್ತಿ ಮಾಡಿಕೊಳ್ಳುತ್ತಿಲ್ಲ. ಜನರಿಗೆ ವೈದ್ಯಕೀಯ ಸೇವೆ ಒದಗಿಸುವ, ವೈದ್ಯಕೀಯ ಕಾಲೇಜು ಆರಂಭಿಸುವ
ಮೂಲಕ ಈ ಭಾಗದ ಶೈಕ್ಷಣಿಕ ಇನ್ನಿತರೆ ಅಭಿವೃದ್ಧಿಗೆ ಪ್ರೇರಣೆಯಾಗುವ ಕಾರ್ಯಕ್ಕೆ ಮುಂದಾಗಿದ್ದೇವೆ. ಕೆಎಲ್ಇ ಸಂಸ್ಥೆ ಬಗ್ಗೆ ಕೀಳಾಗಿ ಮಾತನಾಡುವ, ಮೂರುಸಾವಿರ ಮಠದ ಆಸ್ತಿ ನುಂಗೇ ಬಿಟ್ಟಿದ್ದಾರೆ. ಅದನ್ನು ಉಳಿಸುವ ವಾರಸುದಾರ ತಾವೇ ಎಂಬಂತೆ ಹಾದಿ-ಬೀದಿಯಲ್ಲಿ ಮಾತನಾಡುವ ಮಠಾ ಧೀಶರೊಬ್ಬರಿಗೆ ನಾನು ಕೇಳುತ್ತೇನೆ. ರಾಜ್ಯದಲ್ಲಿ ಸುಮಾರು 15-16 ಸಾವಿರ ಮಠಗಳ ಆಸ್ತಿಗಳು ಮನೆಗಳಾಗಿ ಮಾರ್ಪಟ್ಟಿವೆ.
ಇದನ್ನೂ ಓದಿ :ಅಧಿಕಾರಕ್ಕಿಂತ ಅಂತರಂಗದ ಮೌಲ್ಯವೇ ಹೆಚ್ಚು
ಸಮಾಜ ಮಠಕ್ಕೆಂದು ದಾನವಾಗಿ ನೀಡಿದ ಲಕ್ಷಾಂತರ ಎಕರೆ ಭೂಮಿ ಇನ್ನಿತರೆ ಆಸ್ತಿ ವೈಯಕ್ತಿಕ ಸ್ವತ್ತಾಗಿ ಪರಿವರ್ತನೆಗೊಂಡಿದೆ. ಇಂದಿಗೂ ಕೆಲ ಮಠಗಳು ಆಸ್ತಿ ಮಾರಾಟ ಮಾಡುತ್ತಿವೆ. ಇದು ಸಮಾಜ ನೀಡಿದ ಆಸ್ತಿ ಅಲ್ಲವೇ? ಮಠದ ಆಸ್ತಿಗಳು ವೈಯಕ್ತಿಕ ಸ್ವತ್ತಾಗಿದ್ದರ ವಿರುದ್ಧ ಅವರು ಮೊದಲು ಧ್ವನಿ ಯಾಕೆ ಎತ್ತುತ್ತಿಲ್ಲ. ಮೂರುಸಾವಿರ ಮಠದ ಹಿಂದಿನ ಜಗದ್ಗುರುಗಳು ನಮಗೆ ದಾನವಾಗಿ ಈ ಭೂಮಿ ನೀಡಿದ್ದಾರೆ. ಅವರ ಹೆಸರಲ್ಲಿಯೇ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದೇವೆ. ಕಾನೂನಾತ್ಮಕವಾಗಿಯೇ ಸಾಗುತ್ತಿದ್ದೇವೆ ವಿನಃ ಮಠದ ಆಸ್ತಿ ಕಬಳಿಸುವ ಅವಶ್ಯಕತೆ, ಅನಿವಾರ್ಯತೆ ನಮಗೇನಿದೆ. ಸಮಾಜದಿಂದ ಮಠಕ್ಕೆ ನೀಡಿದ ಆಸ್ತಿಯನ್ನು ಸಮಾಜದ ಸಂಸ್ಥೆಯೊಂದಕ್ಕೆ ನೀಡಲಾಗುತ್ತಿದೆ ಎಂದರು.