ವರಿಷ್ಠರಿಂದ ಸಮಸ್ಯೆ ಇತ್ಯರ್ಥ ಭರವಸೆ: ಹೊರಟ್ಟಿ
ರೇವಣ್ಣ, ಎಚ್ಡಿಕೆ ಯಾರೋ ಒಬ್ಬರನ್ನು ದೊಡ್ಡವರಂತೆ ಬಿಂಬಿಸುತ್ತಾರೆ
Team Udayavani, Nov 1, 2019, 7:37 PM IST
ಹುಬ್ಬಳ್ಳಿ:ಪಕ್ಷದೊಳಗಿನ ಕೆಲ ಸಮಸ್ಯೆಗಳ ಕುರಿತಾಗಿ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿಳಿಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು, ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಇತ್ತೀಚೆಗೆ ನಡೆಸಿದ ಸಭೆ, ಪಕ್ಷದೊಳಗಿನ ಕೆಲವೊಂದು ವಿಷಯಗಳ ಕುರಿತ ಅಸಮಾಧಾನದ ಚರ್ಚೆಯೇ ವಿನಃ ಪಕ್ಷ ಇಲ್ಲವೆ ನಾಯಕತ್ವದ ವಿರುದ್ಧದ ಬಂಡಾಯದ ಸಭೆಯಲ್ಲ, ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ನಡೆದ ಚರ್ಚೆ, ಸದಸ್ಯರ ಭಾವನೆ, ಅಸಮಾಧಾನಕ್ಕೆ ಕಾರಣವಾದ ಸಂಗತಿಗಳ ಕುರಿತಾಗಿ ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನ.6 ಅಥವಾ 7ರಂದು ಸಭೆ ಸೇರಿ ಎಲ್ಲರೂ ಕುಳಿತು ಚರ್ಚಿಸಿ, ಪಕ್ಷ ಸಂಘಟನೆಗೆ ಒತ್ತು ಕೊಡೋಣ ಎಂದಿದ್ದು, ಅವರ ಭರವಸೆಯಲ್ಲಿ ನಮಗೆ ವಿಶ್ವಾಸವಿದೆ ಎಂದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಯಾರೋ ಒಬ್ಬರನ್ನು ದೊಡ್ಡವರಂತೆ ಬಿಂಬಿಸಿ ಬಿಡುತ್ತಾರೆ. ಅವರು ಹೇಳಿದ ಮಾತುಗಳೇ ವೇದವ್ಯಾಕ್ಯ ಎನ್ನುವಂತೆ ಮಾಡಿ ಬಿಡುತ್ತಾರೆ. ಕೊನೆಗೆ ಅದು ಸಮಸ್ಯೆ ರೂಪ ತಾಳಿ ಬಿಡುತ್ತದೆ. ಯಾವುದೇ ಪ್ರಮುಖ ನಿರ್ಧಾರ ವೇಳೆ ಎಲ್ಲ ಮುಖಂಡರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದರು.
ಒಣ ಗುದ್ದಾಟ ಬೇಡ:
ಧ್ವಜ ಬದಲಾವಣೆ ವಿಷಯವಾಗಿ ಒಣ ಗುದ್ದಾಟಕ್ಕೆ ಹೋಗಬೇಡಿ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಸರ್ಕಾರ ಬದಲಾದಂತೆ ಕನ್ನಡ ಧ್ವಜದ ಗೊಂದಲ ಸೃಷ್ಟಿ ಮಾಡುತ್ತಿವೆ. ಈ ಹಿಂದೆ ಸಿದ್ದರಾಮಯ್ಯ ರಾಜ್ಯಧ್ವಜ ವಿಚಾರವಾಗಿ ಕೆಲವೊಂದು ನಿರ್ಣಯಕ್ಕೆ ಮುಂದಾಗಿದ್ದಾಗ, ಇಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದೆ. ಇದೀಗ ಬಿಜೆಪಿ ಸರ್ಕಾರ ಮತ್ತೂಂದು ರೀತಿ ನಿರ್ಣಯಕ್ಕೆ ಮುಂದಾಗಿದೆ. ಸರ್ಕಾರಗಳು ಬದಲಾದಾಗ ಧ್ವಜ ವಿಚಾರದಲ್ಲಿ ಒಂದೊಂದು ರೀತಿ ಮಾಡುವುದು ಸರಿಯಲ್ಲ ಎಂದರು.