ಹುಬ್ಬಳ್ಳಿ: ಪಿಎಸ್ಐ-ಇಬ್ಬರು ಪೇದೆ ಅಮಾನತು
ಹೆಚ್ಚಿನ ಹಣ ಪಡೆದು ಕಡಿಮೆ ಮೊತ್ತದ ದಂಡದ ರಸೀದಿಯಿತ್ತ ಪ್ರಕರಣ
Team Udayavani, May 12, 2021, 11:22 AM IST
ಹುಬ್ಬಳ್ಳಿ: ಆಟೋರಿಕ್ಷಾ ಚಾಲಕ ನಿಂದ ಹೆಚ್ಚಿನ ಹಣ ಪಡೆದು ಕಡಿಮೆ ಮೊತ್ತದ ದಂಡದ ರಸೀದಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ದಕ್ಷಿಣ ಸಂಚಾರ ಠಾಣೆಯ ಪಿಎಸ್ಐ ಮತ್ತು ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿದ್ದಾರೆ.
ಕೊರೊನಾ ಕರ್ಫ್ಯೂ ಸಮಯದಲ್ಲಿ ಹಳೇಹುಬ್ಬಳ್ಳಿ ವೃತ್ತದಲ್ಲಿ ಮೇ 2ರಂದು ಸಂಜೆ ವಾಹನಗಳ ತಪಾಸಣೆ ವೇಳೆ ಆಟೋರಿûಾ ಮತ್ತು ಚಾಲಕನನ್ನು ದಕ್ಷಿಣ ಸಂಚಾರ ಠಾಣೆ ಪಿಎಸ್ಐ ರವಿ ವಡ್ಡರ ಮತ್ತು ಪೇದೆ ಸಿದ್ದು ಸನ್ನಿಯವರ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿ ಆತನಿಂದ 5,800 ರೂ. ಪಡೆದು 500ರೂ. ದಂಡದ ರಸೀದಿ ಕೊಟ್ಟು ಕಳುಹಿಸಿದ್ದರು. ಇದನ್ನು ಅದೇ ಠಾಣೆಯ ಪೇದೆ ಮಾಣಿಕ ಪಟ್ಟೇದ ನೋಡಿ ಆಟೋರಿಕ್ಷಾ ಚಾಲಕನನ್ನು ಬಲವಂತವಾಗಿ ತನ್ನ ಪೊಲೀಸ್ ಕ್ವಾರ್ಟರ್ಸ್ನ ಮನೆಗೆ ಕರೆದುಕೊಂಡು ಹೋಗಿ ಪಿಎಸ್ಐ ವಿರುದ್ಧದ ಹೇಳಿಕೆಯ ವಿಡಿಯೋ ಚಿತ್ರೀಕರಣ ಮಾಡಿದ್ದ ಎನ್ನಲಾಗಿದೆ. ನಂತರ ಪೇದೆ ಪಟ್ಟೇದ ವಿರುದ್ಧದ ಆಟೋರಿಕ್ಷಾ ಚಾಲಕನ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನಾವಳಿಗೆ ಸಂಬಂಧಿಸಿ ಆಯುಕ್ತ ಲಾಭೂ ರಾಮ ಅವರು ಡಿಸಿಪಿ ಕೆ. ರಾಮರಾಜನ್ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು. ಡಿಸಿಪಿಯವರು ಎರಡು ದಿನಗಳ ಕಾಲ ಪ್ರಕರಣದ ವಿಚಾರಣೆ ನಡೆಸಿ ಆಯುಕ್ತರಿಗೆ ಸೋಮವಾರ ವರದಿ ಸಲ್ಲಿಸಿದ್ದರು. ಆಯುಕ್ತರು ಪಿಎಸ್ಐ ರವಿ, ಪೇದೆಗಳಾದ ಸಿದ್ದು, ಮಾಣಿಕರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಿದ್ದಾರೆ.