ಬೇಡ್ತಿ ಹೊಡೆತಕ್ಕೆ ಬೆಂಡಾದ ಬೆಳೆ
ತೇಲಿ ಹೋದ ಗಿಡಮರಗಳು | ದಿಕ್ಕು ಬದಲಾಯಿಸಿದ ಹಳ್ಳ | ಬೆಳೆ ಜೊತೆ ಬೆಲೆಬಾಳುವ ಮರಗಳಿಗೂ ಹಾನಿ
Team Udayavani, Aug 13, 2019, 9:15 AM IST
ಧಾರವಾಡ: ಡೋರಿ-ಬೆಣಚಿ ಹಳ್ಳದ ಪ್ರವಾಹಕ್ಕೆ ಸಿಲುಕಿ ನಷ್ಟ ಹೊಂದಿದ ಕಬ್ಬಿನ ಬೆಳೆ.
ಧಾರವಾಡ: ಒಂದು ಮಳೆ ಹೆಚ್ಚೆಂದರೆ ಪ್ರವಾಹ ತಂದು ಜನರನ್ನು ಪರದಾಡುವಂತೆ ಮಾಡುತ್ತದೆ. ಮನೆ ಬಿಟ್ಟು ಗಂಜಿ ಕೇಂದ್ರಗಳಲ್ಲಿ ವಾಸವಿರುವಂತೆ ಮಾಡುತ್ತದೆ. ಅತೀ ಹೆಚ್ಚೆಂದರೆ ಬೆಳೆಗಳನ್ನು ನಾಶ ಮಾಡುತ್ತದೆ ಎಂದು ನಾವು ತಿಳಿದಿದ್ದೇವೆ. ಆದರೆ ಉಕ್ಕೇರುವ ಹಳ್ಳಗಳು ಇತಿಹಾಸದಲ್ಲಿ ಜನರು ಕಂಡು ಕೇಳರಿಯದಂತಹ ಚಮತ್ಕಾರ ಮಾಡಿ ಹೋಗುತ್ತವೆ. ಹೌದು, ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯಲ್ಲಿ ಹರಿಯುವ ಹಳ್ಳಗಳು ಪ್ರತಿಬಾರಿ ಉಕ್ಕೇರಿದಾಗಲು ಮುಂದಿನ ಹತ್ತು ವರ್ಷಗಳ ಕಾಲ ತಾವು ಸುಗಮವಾಗಿ ಹರಿಯುವ ಮಾರ್ಗ ರಚಿಸಿಕೊಂಡು ಹೋಗುತ್ತವೆ. ಅತಿಕ್ರಮಣ, ಮರಳು ಗಣಿಗಾರಿಕೆ, ಮಣ್ಣಿನ ಮಾರಾಟ, ಉರುವಲು ಸವಕಳಿ ಸೇರಿದಂತೆ ಹಳ್ಳಗಳ ಮೇಲೆ ಜನರು ಮಾಡುವ ದೌಜ್ಯರ್ನ್ಯಕ್ಕೆ ಮಳೆರಾಯ ತಕ್ಕಶಾಸ್ತಿ ಮಾಡಿ ಹೋಗಿದ್ದಾನೆ ಎನ್ನುವಂತಹ ದೃಶ್ಯಗಳು ಇದೀಗ ಜಿಲ್ಲೆಯ ನೆರೆ ನಿಂತ ಎಲ್ಲ ಹಳ್ಳಗಳಲ್ಲೂ ಕಾಣಸಿಗುತ್ತಿದೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹರಿಯುವ ಬೇಡ್ತಿ ಹಳ್ಳ, ಡೌಗಿ ನಾಲಾ, ಕರಿಯಮ್ಮನ ಹಳ್ಳ, ಡೋರಿ-ಬೆಣಚಿ ಹಳ್ಳ, ಜಾತಿಗ್ಯಾನ ಹಳ್ಳ, ಕಾಗಿನಹಳ್ಳಗಳು ನೀರಿನ ಜೀವಸೆಲೆಯ ಕೇಂದ್ರ ಬಿಂದುಗಳು. ಆದರೆ ಕಳೆದ 25 ವರ್ಷಗಳಲ್ಲಿ ಈ ಹಳ್ಳದ ಒಡಲಿನ ಮೇಲೆ ಜನರು ನಡೆಸಿದ ದೌಜ್ಯರ್ನ್ಯಕ್ಕೆ ಇದೀಗ ಪ್ರವಾಹದಿಂದ ಉಕ್ಕಿ ಹರಿದು ಅಕ್ಕಪಕ್ಕದ ರೈತರ ಹೊಲದಲ್ಲಿನ ಬೆಳೆಯಷ್ಟೇಯಲ್ಲ, ಬೆಳೆದು ನಿಂತ ದೈತ್ಯ ಗಿಡಮರಗಳನ್ನು ತಲೆಕೆಳಗೆ ಮಾಡಿದ್ದು ನೆರೆ ನಿಂತು ಹೋದ ಮೇಲಿನ ದೃಶ್ಯವಾಗಿದೆ.
ಅಪಾರ ಬೆಳೆಹಾನಿ: ಬೇಡ್ತಿ, ಡೌಗಿ, ಡೋರಿ, ಕರೆಮ್ಮನಹಳ್ಳ, ತುಪರಿ, ಬೆಣ್ಣಿ ಸೇರಿ ಒಟ್ಟು 23 ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿನ ಕಬ್ಬು, ಗೋವಿನಜೋಳ, ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ಬೇಡ್ತಿ ಹಳ್ಳ ಮತ್ತು ದೊಡ್ಡ ಹಳ್ಳದ ಅಕ್ಕಪಕ್ಕದಲ್ಲಿದ್ದ ಕಬ್ಬಿನ ಬೆಳೆ ಬೇರು ಸಮೇತ ಕಿತ್ತು ಹೋಗಿದ್ದರೆ, ನೀರಿನ ಮಧ್ಯೆ ಎರಡು ಮೂರು ದಿನಗಳ ಕಾಲ ನಿಂತಿರುವ ಗೋವಿನಜೋಳ ಕೊಳೆತು ಬಿದ್ದಿದೆ. ಸೋಯಾ ಅವರೆಗೆ ಹಳದಿ ಭಂಗ ರೋಗ ತಗುಲಿದ್ದು, ಗೋವಿನ ಜೋಳಕ್ಕೆ ಡೊಣ್ಣೆಹುಳುವಿನ ಕಾಟ ಶುರುವಾಗಿದೆ. ಸೋವಿನ ಜೋಳ ಸೊಗಸಾಗಿ ಬೆಳೆದು ನಿಂತಿರುವುದು ಕಾಣುತ್ತದೆ. ಆದರೆ ತೇವಾಂಶ ಅಧಿಕವಾಗಿದ್ದರಿಂದಾಗಿ ಹೀಚು ತೆನೆ ಹಾಕುತ್ತಿದ್ದು, ಅನ್ನದಾತರು ಅತಂಕದಲ್ಲಿದ್ದಾರೆ. ಕಲ್ಲಾಪುರ, ರಾಮಾಪುರ, ಅರವಟಗಿ, ಡೋರಿ,ಬೆಣಚಿ, ಕಂಬಾಗಣವಿ, ಕಾಶೆನಟ್ಟಿ, ಅಳ್ನಾವರ, ಕಡಬಗಟ್ಟಿ, ಹುಲಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳಗಳ ಹಾವಳಿಗೆ ಅಕ್ಕಪಕ್ಕದ ಹೊಲದಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ. ತುಪರಿಹಳ್ಳದ ಅಕ್ಕಪಕ್ಕದ ಹೊಲದಲ್ಲಿ ಇರುವ ಹೆಸರು, ಶೇಂಗಾ ಸೇರಿದಂತೆ ಇತರ ಬೆಳೆಗಳು ಅಲ್ಲಲ್ಲಿ ನಾಶವಾಗಿವೆ
ಲಕ್ಷ ಮೆಟ್ರಿಕ್ ಟನ್ ಮಣ್ಣು ಸವಕಳಿ: ಹಳ್ಳಗಳು ಉಕ್ಕೇರಿದಾಗ ಅಕ್ಕಪಕ್ಕದ ಭೂಭಾಗ ಕತ್ತರಿಸುವುದು ಸಹಜ. ಆದರೆ ಪ್ರವಾಹ ವಿಪರೀತವಾಗಿದ್ದರಿಂದ ಈ ಬಾರಿ ಲಕ್ಷ ಟನ್ಗಟ್ಟಲೇ ಜಿಲ್ಲೆಯ ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ದೊಡ್ಡ ಕೆರೆ, ನಂತರ ನದಿಯ ಮೂಲಕ ಅಣೆಕಟ್ಟೆಗಳನ್ನು ಸೇರಿದೆ. ತುಪರಿ ಹಳ್ಳಕ್ಕೆ ಹೊಸದಾಗಿ ನಿರ್ಮಿಸಿದ್ದ ಚೆಕ್ಡ್ಯಾಂಗಳ ಅಕ್ಕಪಕ್ಕದಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಬೇಡ್ತಿ ಹಳ್ಳದಲ್ಲಿ ಅಲ್ಲಲ್ಲಿ ಕೊರಕಲುಗಳು ಸೃಷ್ಟಿ ಯಾಗಿದ್ದು ಹೊಲಗಳಲ್ಲಿನ ಬದುಗಳು ಒಡೆದು ಹೋಗಿವೆ. ಹಳ್ಳದ ಅಕ್ಕಪಕ್ಕದ ಗಿಡಮರಗಳು ನೆಲಕ್ಕುರುಳಿವೆ.
ಜಿಲ್ಲೆಯಲ್ಲಿ ಅಂದಾಜು 80 ಸಾವಿರ ಹೆಕ್ಟೇರ್ ಬೆಳೆಹಾನಿ ಆಗಿರುವ ಅಂದಾಜಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುವುದಕ್ಕೆ ಸೂಚಿಸಿದ್ದೇನೆ. ಬೆಳೆಹಾನಿ ಪರಿಹಾರ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ.• ದೀಪಾ ಚೋಳನ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ