ಕಾಡಿನ ಕಳೆ ಹೆಚ್ಚಿಸಿದ ವರ್ಷಧಾರೆ
|ಅರಣ್ಯದಲ್ಲಿ ಜಲತರಂಗಿಣಿಯರ ಮೇಘರಾಗ |ಭರ್ತಿಯಾಗಿವೆ ಕಾಡಿನ 50 ಕೆರೆಗಳು |ಪಶು-ಪಕ್ಷಿಗಿಲ್ಲ ಕುಡಿವ ನೀರಿನ ಚಿಂತೆ
Team Udayavani, Aug 3, 2019, 9:44 AM IST
ಧಾರವಾಡ: ಎದೆ ಎತ್ತರಕ್ಕೆ ಗೆದ್ದಲು ಕಟ್ಟಿದ ಹುತ್ತಗಳು ಕಾಣದಂತೆ ಬೆಳೆದ ಹುಲ್ಲು.., ಮೊನ್ನೆ ಮೊನ್ನೆವರೆಗೂ ಬಿಸಿಲಿಗೆ ಬಿರಿದು ಬಾಯ್ಬಿಟ್ಟಿದ್ದ ಕಾಡಿನ ನೆಲವೆಲ್ಲಾ ಈಗ ಬೆಣ್ಣೆಯಂತೆ ಮೃದು.., ಮತ್ತೆ ಸೊಕ್ಕಿನಿಂದ ಎದೆ ಸೆಟೆಸಿ ನಿಂತ ತೇಗ, ಬಿಳಿಮತ್ತಿಯ ಗಿಡಮರಗಳು…, ಸುವ್ವಾಲೆ ಹಾಡುತ್ತಿರುವ ಸೊಲ್ಲು ಅಡಗಿಸಿಕೊಂಡಿದ್ದ ಕಾಡಿನ ಜೀವ ಸಂಕುಲ.., ಒಟ್ಟಿನಲ್ಲಿ ಜಿಲ್ಲೆಯ ಕಾಡಿನಲ್ಲೀಗ ಮತ್ತೆ ವೈಭವ ಕಳೆಕಟ್ಟಿದ್ದು, ಕಾಡಿನ ತುಂಬಾ ಜಲತರಂಗಿಣಿಯರು ಲಲನೆ ಮಾಡುತ್ತಿದ್ದಾರೆ. ಬಿರುಬಿಸಿಲಿಗೆ ಬಿಗಿದು ಹೋಗಿದ್ದ ಜಿಲ್ಲೆಯ 37 ಸಾವಿರ ಹೆಕ್ಟೇರ್ ಕಾಡಿನಲ್ಲಿ ಕಳೆದ ಒಂದೇ ತಿಂಗಳಿನಲ್ಲಿ ಮತ್ತೆ ಕಾಡಿನ ವೈಭವ ಕಳೆಗಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಎರಡು ವರ್ಷ ಅದೇ ಮಳೆ ನೀರಿನ ಅಭಾವ ಮುಂದುವರಿದಿದ್ದರೆ, ಜಿಲ್ಲೆಯಲ್ಲಿನ ಕಾಡಿನ ಪ್ರಮಾಣ ಶೇ.1ರಷ್ಟು ಕುಸಿತ ಕಾಣುತ್ತಿತ್ತಂತೆ. ಸದ್ಯಕ್ಕೆ ದೇವರು ದೊಡ್ಡೋನು ಕೊನೆಗೂ ಕಣ್ಣು ತೆರೆದ, ಜಿಲ್ಲೆಯ ಕಾಡಿನ ಪ್ರಾಣಿ-ಪಕ್ಷಿಗಳು, ಸಸ್ಯ ಸಂಕುಲಕ್ಕೆಲ್ಲ ಇನ್ನೆರಡು ವರ್ಷಕ್ಕೆ ಆಗುವಷ್ಟು ತಂಪಾದ ಅಂತರ್ಜಲ ಸಂಗ್ರಹವಾಗುತ್ತಿದೆ ಎನ್ನುವ ಖುಷಿಯಲ್ಲಿದೆ ಅರಣ್ಯ ಇಲಾಖೆ. ನರೇಗಾ ಯೋಜನೆಯಡಿ ಕಳೆದ ವರ್ಷ 13 ಸಾವಿರ ಮಾನವ ದಿನಗಳನ್ನು ಪರಿಗಣಿಸಿಕೊಂಡು ಅರಣ್ಯ ಮಧ್ಯದಲ್ಲಿ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿತ್ತು. ಕೆಲವು ಕಡೆಗಳಲ್ಲಿ ಚೆಕ್ಡ್ಯಾಂಗಳು, ಸಣ್ಣ ಬಾಂದಾರುಗಳು, ತಿರುವಲು ಒಡ್ಡುಗಳು, ಗುಡ್ಡದ ನೆತ್ತಿಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಆ ಎಲ್ಲ ತೆಗ್ಗುಗಳಲ್ಲಿ ಮಳೆನೀರು ಭರ್ತಿಯಾಗಿದ್ದು ಅರಣ್ಯ ಇಲಾಖೆ ಪಟ್ಟ ಶ್ರಮಕ್ಕೆ ಫಲ ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ಕಲಘಟಗಿ ಮತ್ತು ಧಾರವಾಡ ತಾಲೂಕಿನಲ್ಲಿ ಮಾತ್ರ ಹೆಚ್ಚು ಕಾಡಿದೆ. ಇನ್ನುಳಿದ ಕಡೆಗಳಲ್ಲಿ ಸಾಮಾಜಿಕ ಅರಣ್ಯವಿದೆ. ಈ ಎರಡು ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 230 ಮಿಮೀ ಮಳೆ ಸುರಿದಿದ್ದು, ಕಾಡಿನ ಮಧ್ಯದ ಜಲಕೋಡಿಗಳು ಜಿಗಿಯುತ್ತ ಹರಿಯುತ್ತಿವೆ. ಕಲಕೇರಿ ಅರಣ್ಯ ವಲಯದಲ್ಲಿನ ಸೋಮಲಿಂಗನ ಜವುಳು ಪ್ರದೇಶದಲ್ಲಿ ಉತ್ತಮ ಮಳೆ ದಾಖಲಾಗಿದೆ. ಬಣದೂರು, ಬಮ್ಮಿಗಟ್ಟಿ, ದೇವಿಕೊಪ್ಪ ಅರಣ್ಯ ವಲಯದಲ್ಲಿಯೂ ಮಳೆ ತನ್ನ ಕೈ ಚಳಕ ತೋರಿಸಿದ್ದು ಕಾಡಿನ ಮಧ್ಯದ ಗುಂಡಿಗಳಲ್ಲಿ ನೀರು ಶೇಖರಣೆಯಾಗಿದೆ.
•ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ