ದೇಶಕ್ಕೆ ಆರ್ಥಿಕ ಬಲವೂ ಅವಶ್ಯ
Team Udayavani, Jan 27, 2019, 4:27 AM IST
ಹುಬ್ಬಳ್ಳಿ: ಭಾರತ ಅನಾದಿ ಕಾಲದಿಂದಲೂ ಸಂಸ್ಕೃತಿ, ಪರಂಪರೆ, ಅಧ್ಯಾತ್ಮ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಹೊಂದಿದೆ. ಜತೆಗೆ ಆರ್ಥಿಕ ಬಲವೂ ದೇಶಕ್ಕೆ ಅತ್ಯವಶ್ಯವಾಗಿದೆ ಎಂದು ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಅಭಿಪ್ರಾಯಪಟ್ಟರು.
ಟೈ ಹುಬ್ಬಳ್ಳಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಅಧ್ಯಾತ್ಮ, ಸಂಸ್ಕೃತಿ ವಿಚಾರದಲ್ಲಿ ನಾವು ವಿಶ್ವಕ್ಕೆ ಮಾದರಿಯಾಗಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆ, ಅಧ್ಯಾತ್ಮಕ್ಕೆ ಬೇರೆ ದೇಶದ ಅನೇಕರು ಮನ ಸೋತಿದ್ದಾರೆ. ಆದರೆ, ಇದೆಲ್ಲದರ ಜತೆಗೆ ಆರ್ಥಿಕ ಶಕ್ತಿಯೂ ಹೆಚ್ಚಬೇಕಾಗಿದೆ. ಆಗ ಮಾತ್ರ ದೇಶದ ವರ್ಚಸ್ಸು ವಿಶ್ವಮಟ್ಟದಲ್ಲಿ ಇನ್ನಷ್ಟು ಹೆಚ್ಚಲಿದೆ. ಹಸಿದ ವ್ಯಕ್ತಿ ಮುಂದೆ ಅಧ್ಯಾತ್ಮ, ಸಂಸ್ಕೃತಿ, ಪರಂಪರೆ, ಸಾಂಸ್ಕೃತಿಕತೆಯ ಉಪನ್ಯಾಸ ನೀಡಿದರೆ ಅದನ್ನು ಸ್ವೀಕರಿಸುವ ಮನೋಭಾವ ಅವನಲ್ಲಿ ಇರುತ್ತದೆಯೇ, ಇದರ ಅರ್ಥ ದೇಶ ಮೊದಲು ಹಸಿವು ಮುಕ್ತವಾಗಬೇಕು. ಇದಕ್ಕೆ ಆರ್ಥಿಕ ಸಶಕ್ತತೆ, ರಾಜಕೀಯ ಇಚ್ಛಾಶಕ್ತಿ ಅತ್ಯವಶ್ಯವಾಗಿದೆ ಎಂದರು.
ಸಮಸ್ಯೆ ಇಂದು ನಿನ್ನೆಯದಲ್ಲ ಸಾವಿರ ವರ್ಷಗಳ ಇತಿಹಾಸ ತೆಗೆದರೂ ಸಮಸ್ಯೆಗಳಿವೆ. ರಾಮಾಯಣ, ಮಹಾಭಾರತ ನೋಡಿದರೂ ಸಮಸ್ಯೆಗಳಿದ್ದವು, ಇಂದು ಇವೆ, ನಾಳೆಯೂ ಸಮಸ್ಯೆಗಳು ಇರುತ್ತವೆ. ನಮ್ಮ ಚಟುವಟಿಕೆಗಳು ಮೇಲ್ದರ್ಜೆಗೇರಬೇಕಾಗಿದೆ. ಸ್ವಯಂ ಮೇಲ್ದರ್ಜೆ ಅವಶ್ಯವಾಗಿದೆ. ಯಶಸ್ಸು ಎಂಬುದು ಪ್ರತಿಯೊಬ್ಬರಿಗೂ ಸಿಹಿ ಅನುಭವ ನೀಡುತ್ತದೆ. ಯಶಸ್ಸಿನ ನಿರೀಕ್ಷೆ ಮೇಲ್ದರ್ಜೆಗೇರಬೇಕಾಗಿದೆ ಎಂದು ಹೇಳಿದರು.
ತಂತ್ರಜ್ಞಾನ ರೂಪದಲ್ಲಿ ನಾವು ಯಶಸ್ಸು ಹೊಂದಿದ್ದೇವೆ ಎಂದು ಭಾವಿಸಿಕೊಂಡರೆ, ಇಂದು ಅಮೆರಿಕದಲ್ಲಿ ತಂತ್ರಜ್ಞಾನ ಬಳಕೆಯಿಂದ ಉಂಟಾಗುತ್ತಿರುವ ಒತ್ತಡ ನಿವಾರಣೆಗಾಗಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದನ್ನು ಯಶಸ್ಸು ಎನ್ನಬೇಕೇ? ಬದುಕಿನ ಸುಸ್ಥಿರ ಸ್ಥಿತಿಯ ಆಂತರ್ಯದ ಯಶಸ್ಸು ಮೂಡಬೇಕಾಗಿದೆ. ದೇಹ ಹಾಗೂ ಮೆದುಳಿನ ಸೂಚನೆಗಳನ್ನು ಪಾಲಿಸದೆ ಶಾಂತಿಗೆ ತಡಕಾಡುತ್ತಿದ್ದೇವೆ. ಅಧ್ಯಾತ್ಮದಲ್ಲಿ ಶಾಂತಿ ಇದೆ ಎಂದು ನಂಬಿದ್ದೇವೆ. ನಮ್ಮನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಇನ್ನಿತರರನ್ನು ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜನ್ಮ ತಾಳುವ ಪ್ರತಿ ಮಗು ವಿಭಿನ್ನವಾಗಿರುತ್ತದೆ. ಎಲ್ಲರಲ್ಲೂ ಒಂದೇ ಮಾದರಿ ಚಿಂತನೆ, ಚುರುಕುತನ ಇರಬೇಕೆಂದು ಹೇಳುವುದು ಸಾಧ್ಯವಾಗದು. ಇಡೀ ಜೀವಸಂಕುಲದಲ್ಲಿ ಮನುಷ್ಯನಿಗೆ ಮಾತ್ರ ಮನುಷ್ಯತ್ವ ಎಂಬುದಿದೆ. ಇದನ್ನು ಅರಿತು ಪ್ರತಿಯೊಬ್ಬರು ನಡೆಯಬೇಕಾಗಿದೆ. ನಿಸರ್ಗದೊಂದಿಗೆ ಜೀವಿಸಬೇಕಿದೆ ಎಂದರು. ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಸದ್ಗುರು ಅವರೊಂದಿಗೆ ಸಂವಾದ ನಡೆಸಿದರು. ನಂತರ ಸಾರ್ವಜನಿಕರ ಕೆಲ ಪ್ರಶ್ನೆಗಳಿಗೆ ಸದ್ಗುರು ಪ್ರತಿಕ್ರಿಯಿಸಿದರು.
ಸಿಎಸ್ಆರ್ನಿಂದ ಉದ್ಯೋಗ ಸೃಷ್ಟಿ ಸಾರ್ಥಕ ಕಾರ್ಯ: ಕಾಮತ
ಹುಬ್ಬಳ್ಳಿ: ದೇಶದಲ್ಲಿ ಪ್ರತಿ ವರ್ಷ ಶೇ.5 ಉದ್ಯೋಗ ಸೃಷ್ಟಿ ಮಾಡಿದರೆ ಅದೇ ನಿಜವಾದ ಹಾಗೂ ಅತ್ಯುತ್ತಮ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್)ಎಂದು ಭಾವಿಸಿರುವುದಾಗಿ ಜ್ಯೋತಿ ಲ್ಯಾಬರೋಟರಿಸ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಅಭಿಪ್ರಾಯಪಟ್ಟರು. ಜ್ಯೋತಿ ಲ್ಯಾಬರೋಟರಿಸ್ ತನ್ನ ಲಾಭದ ಶೇ.2ನ್ನು ಸಾಮಾಜಿಕ ಜವಾಬ್ದಾರಿ ಕಾರ್ಯಕ್ಕೆ ವಿನಿಯೋಗಿಸುತ್ತದೆ. ಜತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದ್ದು, ನಮ್ಮ ಕಂಪೆನಿಯಲ್ಲಿರುವ ಉದ್ಯೋಗಿಗಳಲ್ಲಿ ಶೇ.95 ಉದ್ಯೋಗಿಗಳು ಮಹಿಳೆಯರಾಗಿದ್ದಾರೆ. ಕೆಲಸದಲ್ಲಿ ಅವರ ಬದ್ಧತೆ, ಸಮಯ ಪಾಲನೆ, ಕಾರ್ಯ ಸಾಮರ್ಥ್ಯ ಮೆಚ್ಚುವಂತಹದ್ದು ಎಂದರು. ನಾನು ನಿನ್ನೆ, ನಾಳೆಯನ್ನು ನಂಬುವುದಿಲ್ಲ. ಇಂದಿನ ನನ್ನ ಕೆಲಸ ನಂಬುತ್ತೇನೆ. ನಮ್ಮ ಕಂಪೆನಿಯಲ್ಲಿ ಯಾವುದೇ ಉದ್ಯೋಗಿ ಮದ್ಯಪಾನ, ಧೂಮಪಾನ ಮಾಡಿದರೆ ಅಂತಹವರನ್ನು ಮುಲಾಜಿಲ್ಲದೆ ಕೆಲಸದಿಂದ ತೆಗೆದು ಹಾಕುತ್ತೇವೆ. ಮಾರ್ಗದರ್ಶಕರು, ಸಲಹೆಗಾರರಿಗಿಂತ ನಮ್ಮ ಪರಿಶ್ರಮ, ಸಿಬ್ಬಂದಿ ನಿಷ್ಠೆ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳ ನೀಡಿಕೆ ನಮ್ಮ ಆದ್ಯತೆಯಾಗಿದೆ. ಇದರಿಂದಲೇ 1983ರಲ್ಲಿ ಕೇವಲ 5 ಸಾವಿರ ರೂ.ದಿಂದ ಆರಂಭವಾಗಿದ್ದ ನಮ್ಮ ಕಂಪೆನಿ ಇಂದು ಸುಮಾರು 2,280 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದು ಹೇಳಿದರು. ಹೊಸ ಅವಕಾಶ ಸೃಷ್ಟಿ: ಟ್ಯಾಲೆಂಟ್ಸ್ಮಿತ್ ಕನ್ಸಲ್ಟಿಂಗ್ ಸಿಇಒ ಡಾ| ಪ್ರಮೋದ ಸದರ್ಜೋಶಿ ಮಾತನಾಡಿ, ತಂತ್ರಜ್ಞಾನ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಡಿಜಿಟಲ್ ಯುಗವಾಗಿದ್ದು, ಡಿಜಿಟಲ್ ಅನಕ್ಷರಸ್ಥರಿಗೂ ಅವಕಾಶಗಳು ಸೃಷ್ಟಿಯಾಗುತ್ತಿವೆ. 2018ರಲ್ಲಿ ಒಂದು ನಿಮಿಷಕ್ಕೆ 3.7 ಮಿಲಿಯನ್ ಜನ ಗೂಗಲ್ನಲ್ಲಿ ತಡಕಾಡಿದರೆ, 38 ಮಿಲಿಯನ್ ಜನ ವಾಟ್ಸ್ಆ್ಯಪ್ ವೀಕ್ಷಿಸಿದಾರೆ. 9.73 ಲಕ್ಷ ಜನರು ಫೇಸ್ಬುಕ್ ವೀಕ್ಷಿಸಿದ್ದಾರೆ ಎಂದರು. ಈ ಹಿಂದೆ ಉತ್ಪಾದಕ ವಲಯ ಬಹುದೊಡ್ಡ ಉದ್ಯಮವಾಗಿತ್ತು. ಇಂದು ತಂತ್ರಜ್ಞಾನ ವಲಯ ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.
ಆ್ಯಪಲ್ ಕಂಪೆನಿ ವಾರ್ಷಿಕ ವಹಿವಾಟು, ಐದು ದೇಶಗಳ ಜಿಡಿಪಿಗೆ ಸಮವಾಗಿದೆ. ಇನ್ನೊಂದು ಕಡೆ ತಂತ್ರಜ್ಞಾನ ಬೆಳೆದಂತೆ ಉದ್ಯೋಗ ಕುಸಿತದ ಭೀತಿಯೂ ಇಲ್ಲದಿಲ್ಲ. ವಿಶ್ವದ ಜಿಡಿಪಿಗೆ ಅಮೆರಿಕ ಶೇ.24.23 ಪಾಲು ಹೊಂದಿದ್ದರೆ, ಭಾರತ 2.3 ಪಾಲು ಹೊಂದಿದೆ ಎಂದು ಹೇಳಿದರು. ಆರ್ಆರ್ ಗ್ಲೋಬಲ್ ನಿರ್ದೇಶಕ ಸುಮೀತ್ ಕಬ್ರಾ, ಸ್ಪಾಟ್ ಡ್ರಾಫ್ಟ್ನ ಶಶಾಂಕ ಬಿಜಾಪುರ, ಬೆಳಗಾವಿ ಕಂಟೋನ್ಮೆಂಟ್ ಮಂಡಳಿ ಸಿಇಒ ದಿವ್ಯಾ ಶಿವಾರಾಮ, ಕೌಶಿಕ್ ಮುಡ್ಡಾ, ಎಸ್ಪಿ ಜೈನ್ ಸ್ಕೂಲ್ ಆಫ್ ಜಿಎಂ ಮ್ಯಾನೇಜ್ಮೆಂಟ್ ಗುರು ಬಮನ್ ಮೊರಡಿಯನ್ ಮಾತನಾಡಿದರು. ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ ಸ್ವಾಗತಿಸಿದರು. ಟೈಕಾನ್ ಸಂಚಾಲಕ ಗಿರೀಶ ಮಾನೆ ಪ್ರಾಸ್ತಾವಿಕ ಮಾತನಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ