ತೃತೀಯರಂಗ ದುಷ್ಟರ,ಭ್ರಷ್ಟರ ಕೂಟ: ಶೆಟ್ಟರ್
Team Udayavani, May 25, 2018, 7:55 AM IST
ಹುಬ್ಬಳ್ಳಿ: ತೃತೀಯ ರಂಗ ಎಂಬುದು ದುಷ್ಟರ ಹಾಗೂ ಭ್ರಷ್ಟರ ಕೂಟವೇ ಹೊರತು ಅದು ದೇಶದ ಅಭಿವೃದ್ಧಿ ಪರ ಚಿಂತನೆ ಮಾಡುವ ಕೂಟವಲ್ಲ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಇತರರ ಕೂಟ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಾಗ್ಧಾಳಿ ನಡೆಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕರು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಇವರೆಲ್ಲಾ ತಮ್ಮ ಸ್ವ ಹಿತಾಸಕ್ತಿಗಾಗಿ ಒಗ್ಗಟ್ಟಾಗಿದ್ದಾರೆಯೇ ವಿನಃ ದೇಶದ ಅಭಿವೃದ್ಧಿ ಹಿತ ಚಿಂತನೆ ಇವರಲ್ಲಿಲ್ಲ. ಇದು ಬಹಳ ದಿನ ನಡೆಯೋದಿಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಸಿಪಿಎಂ ನಾಯಕರು ಒಂದಾಗಲು ಸಾಧ್ಯವೇ ಇಲ್ಲ. ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎಂದು ಫೋಸ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇತರರು ಹೋರಾಟ ಮಾಡುವುದಾಗಿ ಒಟ್ಟಾಗುತ್ತಿದ್ದಾರೆ. ಎಷ್ಟೇ ನಾಯಕರು ಒಟ್ಟಾದರೂ ನರೇಂದ್ರ ಮೋದಿಯವರ ಸರಿ ಸಮಾನವಾಗಿ ಮತ್ತೂಬ್ಬ ನಾಯಕ ಬೆಳೆಯಲು ಸಾಧ್ಯವಿಲ್ಲ. ಈ ಕೂಟದಿಂದ ಬಿಜೆಪಿಗೆ ಯಾವುದೇ ಹಂತದಲ್ಲೂ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಎಂದರು.