ನೋಟಿಸ್ ಸುಟ್ಟು ರೈತರ ಪ್ರತಿಭಟನೆ
ಸರ್ಕಾರ ಸಾಲ ಮನ್ನಾ ಮಾಡಿದ್ದರೂ ಕಾಯದ ಬ್ಯಾಂಕ್ಗಳು: ಆಕ್ರೋಶ
Team Udayavani, Apr 4, 2019, 5:16 PM IST
ದಾವಣಗೆರೆ: ಬ್ಯಾಂಕ್ ನೋಟಿಸ್ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು.
ದಾವಣಗೆರೆ: ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳು ರೈತರಿಗೆ ಜಾರಿ ಮಾಡಿರುವ ನೋಟಿಸ್ ಸುಡುವ ಮೂಲಕ ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂದೆ ವಿವಿಧ ಬ್ಯಾಂಕ್ಗಳ ನೋಟಿಸ್ ಸುಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದೆ. ರೈತರ ಖಾತೆಗೆ 50 ಸಾವಿರದಷ್ಟು ಹಣ ಜಮೆ ಮಾಡಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕೆಲವಾರು ರೈತರ ಖಾತೆಗೆ ಜಮೆ ಆಗಿರುವುದಿಲ್ಲ.
ನೀತಿ ಸಂಹಿತೆ ಅವಧಿ ಮುಕ್ತಾಯ ಆಗುವ ತನಕ ಸಹ ಕಾಯುವಂತಹ ಸೌಜನ್ಯವನ್ನೂ ತೋರದ ಕೆಲ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳು ರೈತರಿಗೆ ನೋಟಿಸ್ ಜಾರಿ ಮಾಡಿರುವುದು ಅತ್ಯಂತ ಖಂಡನೀಯ ಮತ್ತ ರೈತ ವಿರೋಧಿ ಕ್ರಮ ಎಂದು ರೈತರು ದೂರಿದರು.
ಸತತ ಬರಗಾಲ, ಮಳೆಯ ಕೊರತೆಯಿಂದ ಮುಂಗಾರು, ಹಿಂಗಾರು ಬೆಳೆ ಇಲ್ಲದೆ ರೈತರು ಜೀವನ ನಡೆಸುವುದು ದುಸ್ತರವಾಗಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆ ಜಾರಿಗೆ ತರುತ್ತಿದೆ. ಆದರೂ, ಕೆಲವಾರು ಬ್ಯಾಂಕ್ಗಳು ನೋಟಿಸ್ ಜಾರಿ ಮಾಡುವ ರೈತರಿಗೆ ಮಾನಸಿಕಿ ಕಿರುಕುಳ, ದೌರ್ಜನ್ಯವೆಸಗುತ್ತಿದ್ದಾರೆ. ಅಂತಹ
ಬ್ಯಾಂಕ್ಗಳ ವಿರುದ್ಧ ಸಂಬಂಧಿತರು ತೀವ್ರ ಸ್ವರೂಪದ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ
ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಗೆ ಸಂಬಂಧಿಸಿದ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಶಾಸಕರು ಬ್ಯಾಂಕ್ಗೆ ಕಳಿಸಿದ್ದರೂ ಬ್ಯಾಂಕ್ ವ್ಯವಸ್ಥಾಪಕರು ಕ್ಲೈಮ್ ಕೊಡಲು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಅನೇಕ ಭಾಗದಲ್ಲಿ ಸಮಸ್ಯೆ ಬಗೆಹರಿಯುತ್ತಿಲ್ಲ. ಕೂಡಲೇ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯ ಒದಗಿಸುವತ್ತ ಗಮನ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್. ಅರಸನಾಳ್ ಸಿದ್ದಪ್ಪ. ಗುಮ್ಮನೂರು ಬಸವರಾಜ್, ಆಲೂರು ಪರಶುರಾಮ್, ಕೋಲ್ಕುಂಟೆ ಬಸಣ್ಣ, ಕಾಡಜ್ಜಿ ಪ್ರಕಾಶ್, ಚಿರಂಜೀವಿ, ಬೂದಾಳ್ ಭಗತ್ಸಿಂಹ, ಗುಮ್ಮನೂರು ಕೃಷ್ಣಮೂರ್ತಿ, ಯಲ್ಲೋದಹಳ್ಳಿ ರವಿ, ಲೋಕೇಶ್, ಉಚ್ಚಂಗೆಪ್ಪ, ಪುಟ್ಟಪ್ಪ, ಪರಶುರಾಮ್ ಇತರರು ಇದ್ದರು.