ಬಿಸಿಲಿಗೆ ಬಸವಳಿದ ವನ್ಯಜೀವಿಗಳು
Team Udayavani, Mar 5, 2017, 3:45 AM IST
ಗದಗ: ನೂರಾರು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಇಲ್ಲಿನ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸುಮಾರು 40 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವಕಿರು ಮೃಗಾಲಯದ ಒಟ್ಟು ನಾಲ್ಕು ಬೋರ್ ವೆಲ್ಗಳಲ್ಲಿ ಒಂದು ಸಂಪೂರ್ಣ ಬತ್ತಿದ್ದು, ಇನ್ನುಳಿದ ಮೂರು ಬೋರ್ವೆಲ್ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಸುಮಾರು ನಾಲ್ಕು ದಶಕಗಳಿಂದ ಆರಂಭಗೊಂಡಿರುವ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ಈ ಬಾರಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ.
ಬಿಸಿಲ ತಾಪಕ್ಕೆ ಪ್ರಾಣಿಗಳ ಪರದಾಟ: ಕಿರು ಮೃಗಾಲಯದಲ್ಲಿ 173 ವನ್ಯಜೀವಿಗಳಿದ್ದು, ಈ ಪೈಕಿ ಚಿರತೆ, ಕರಡಿ, ಜಿಂಕೆ, ಕಡವೆ, ನೀಲ್ ಗಾಯ್, ಮೊಸಳೆ ಹಾಗೂ ವಿವಿಧ ಪಕ್ಷಿಗಳುಹೆಚ್ಚು ನೀರು ಬೇಡುತ್ತವೆ. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ವನ್ಯಜೀವಿಗಳು ಬಹುತೇಕ ನೀರಿನಲ್ಲೇ ಕಾಲ ಕಳೆಯಲು ಬಯಸುವುದರಿಂದ ಬೋನುಗಳಲ್ಲಿ ನಿರ್ಮಿಸಿರುವ ಸಣ್ಣ ಹೊಂಡ ಹಾಗೂ ದೋಣಿಗಳಿಗೆ ಬೋರ್ವೆಲ್ ಮೂಲಕ ನೀರು ಹರಿಸಲಾಗುತ್ತಿದೆ. ನೀಲ್ಗಾಯ್ ಇತ್ಯಾದಿ ಪ್ರಾಣಿಗಳ ಬೋನುಗಳಲ್ಲಿರುವ ಹೊಂಡಗಳ ವಿಸ್ತೀರ್ಣ ಜಾಸ್ತಿಯಿದ್ದು, ನೀರು ತುಂಬಲು ಸಾಧ್ಯವಾಗದೆ ಈ ಪ್ರಾಣಿಗಳು ಬಿಸಿಲಿನ ಝಳದಿಂದ
ಪಾರಾಗಲು ಪರದಾಡುವಂತಾಗಿದೆ.
ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿರುವ ಜಿಂಕೆವನದಲ್ಲಂತೂ ಮರಗಿಡಗಳೆಲ್ಲವೂ ಎಲೆಗಳಿಲ್ಲದ ಅಸ್ತಿಪಂಜರದಂತಾಗಿವೆ. ನೂರಾರು ಸಂಖ್ಯೆಯಲ್ಲಿರುವ ಚುಕ್ಕಿ ಜಿಂಕೆ, ಕೃಷ್ಣ ಮೃಗ, ಸಾರಂಗಗಳಿಗೆ ನೆರಳಿಲ್ಲದಂತಾಗಿದೆ.
ಕ್ಷೀಣಿಸಿದ ಪ್ರವಾಸಿಗರ ಸಂಖ್ಯೆ: ಹಸಿರಿನಿಂದ ಕಣ್ಣಿಗೆ ಮುದ ನೀಡುತ್ತಿದ್ದ ಮೃಗಾಲಯದ ಮರಗಳು ಇದೀಗ ನೀರಿಲ್ಲದೆ ಒಣಗುತ್ತಿವೆ. ಸಾಮಾನ್ಯವಾಗಿ ಪ್ರತಿನಿತ್ಯ 100- 150, ವಾರಾಂತ್ಯದಲ್ಲಿ 300 -350 ಜನರು ಕಿರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಈ ಸಂಖ್ಯೆಯೂ ಸಾಕಷ್ಟು ಕಡಿಮೆಯಾಗಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತು.
ಮಳೆ ಅಭಾವದಿಂದ ಕಿರು ಮೃಗಾಲಯದ ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿದೆ. ವನ್ಯಜೀವಿಗಳಿಗೆ ನೀರು ಪೂರೈಸಲು ಮೊದಲ ಆದ್ಯತೆ ನೀಡಲಾಗಿದೆ. ಈ ಹಿಂದೆ ಸಂಕ್ರಮಣದ ದಿನಗಳಲ್ಲಿ ಹಸಿರು ನಿರ್ವಹಣೆಗಾಗಿ ಟ್ಯಾಂಕರ್ನಿಂದ ನೀರು ಪೂರೈಸಲಾಗುತ್ತಿತ್ತು. ಆದರೆ, ಆರ್ಥಿಕ ಹೊರೆ ತಪ್ಪಿಸಲು ಅದನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಕಡಿಮೆ ನೀರು ಸಾಕಾಗುವ ಹಸಿರು ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗುತ್ತಿದೆ.
– ಮಹಾಂತೇಶ ಪೆಟೂÉರು,ವಲಯ ಅರಣ್ಯ ಅಧಿಕಾರಿ.
– ವೀರೇಂದ್ರ ನಾಗಲದಿನ್ನಿ