ಬಿಂಕದಕಟ್ಟಿ ನಾಡಿನ ‘ಹೆಲ್ದಿ ವಿಲೇಜ್’
"ಐಕಾನ್ ವೀಕ್' ಕಾರ್ಯಕ್ರಮದಲ್ಲಿ ವಿಡಿಯೋ ಪ್ರದರ್ಶನ
Team Udayavani, Apr 19, 2022, 5:04 PM IST
ಗದಗ: ಮೃಗಾಲಯ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಿಂದ ಖ್ಯಾತಿ ಪಡೆದಿರುವ ತಾಲೂಕಿನ ಬಿಂಕದಕಟ್ಟಿ ಗ್ರಾಮ, ಸಾರ್ವಜನಿಕರ ಆರೋಗ್ಯ ಸುಧಾರಣಾ ಕ್ರಮಗಳಿಂದಾಗಿ ರಾಜ್ಯದ “ಹೆಲ್ದಿ ವಿಲೇಜ್ (ಆರೋಗ್ಯಯುಕ್ತ ಗ್ರಾಮ)’ ಎಂಬ ಕೀರ್ತಿ ಪಡೆದಿದೆ.
ಅಲ್ಲದೇ, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಇತ್ತೀಚೆಗೆ ನಡೆದ “ಐಕಾನ್ ವೀಕ್’ ಕಾರ್ಯಕ್ರಮದಲ್ಲಿ ಗ್ರಾಪಂ ಕೈಗೊಂಡ ಪರಿಣಾಮಕಾರಿ ಕ್ರಮಗಳ ವಿಡಿಯೋ ತುಣಕು ಪ್ರದರ್ಶಿಸಲಾಯಿತು.
ಗದಗ ಜಿಲ್ಲಾ ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಬಿಂಕದಕಟ್ಟಿ ಎಂಬ ಪುಟ್ಟ ಗ್ರಾಮ, ಅಭಿವೃದ್ಧಿ ಹಾಗೂ ಸಾರ್ವಜನಿಕರ ಬದುಕಿನಲ್ಲಿ ಗುಣಾತ್ಮಕ ಕ್ರಮ ಕೈಗೊಂಡಿದೆ. ಬಿಂಕದಕಟ್ಟಿ ಗ್ರಾಪಂ ವ್ಯಾಪ್ತಿಯ ಹಿರೇಹಂದಿಗೋಳ ಸೇರಿದಂತೆ ಸುಮಾರು 6 ಸಾವಿರ ಜನಸಂಖ್ಯೆ ಹೊಂದಿದೆ. ಬಯಲು ಮುಕ್ತ ಶೌಚಾಲಯ, ನಿಯಮಿತವಾಗಿ ಚರಂಡಿಗಳ ಸ್ವತ್ಛತೆ ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಣೆ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ವರ್ಷಗಳಿಂದ ಗ್ರಾಪಂ ಅಭಿವೃದ್ಧಿಯಲ್ಲಿ ಅದನ್ನೇ ಕಾಯ್ದುಕೊಂಡಿದ್ದು, ಇದೀಗ “ಹೆಲ್ದಿ ವಿಲೇಜ್’ ಕೀರ್ತಿಗೆ ಪಾತ್ರವಾಗಿದೆ.
ಲಭ್ಯವಿರುವ ಸೇವೆಯನ್ನೇ ಉತ್ಕೃಷ್ಟಗೊಳಿಸಿದೆ: ಬಿಂಕದಕಟ್ಟಿ ಗ್ರಾಪಂ ಅನ್ನು “ಹೆಲ್ದಿ ವಿಲೇಜ್ ‘ನ್ನಾಗಿಸಲು ಸರ್ಕಾರದಿಂದ ಯಾವುದೇ ವಿಶೇಷ ಪ್ಯಾಕೇಜ್, ಅನುದಾನವನ್ನೂ ಪಡೆದಿಲ್ಲ. ಬದಲಾಗಿ ಸರ್ಕಾರದ ವಿವಿಧ ಇಲಾಖೆಗಳು, ಅವುಗಳ ಕಾರ್ಯಕ್ರಮಗಳನ್ನೇ ಶೇ.100 ಯಶಸ್ವಿಗೊಳಿಸಲಾಗಿದೆ. ಮುಖ್ಯವಾಗಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೇಂದ್ರ ಸರ್ಕಾರ ಸ್ವತ್ಛ ಭಾರತ ಮಿಷನ್ ಆರಂಭಿಸುವುದಕ್ಕೂ ಒಂದು ವರ್ಷ ಮುನ್ನವೇ ಬಿಂಕದಕಟ್ಟಿ ಗ್ರಾಪಂನಿಂದ ಮನೆ-ಮನೆಯಿಂದ ಕಸ ಸಂಗ್ರಹಣೆ ಆರಂಭಿಸಲಾಗಿತ್ತು. ಮಾಸಿಕ 5-6 ಟನ್ ಒಣ ಕಸ ಸಂಗ್ರಹಣೆಯಿಂದ ಮೂವರಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂಬುದು ಗಮನಾರ್ಹ. ಆನಂತರ ಎಸ್ಬಿಎಂ ಯೋಜನೆಯಡಿ ಬಿಂಕದಟ್ಟಿಯ 834, ಹಿರೇಹಂದಿಗೋಳದಲ್ಲಿ 494 ಮನೆಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.
ಸ್ಥಳಾವಕಾಶ ಇಲ್ಲದ 74 ಕುಟುಂಬಗಳಿಗೆ ಸಮುದಾಯ ಶೌಚಾಲಯ ನಿರ್ಮಿಸಿದ್ದು, ಸಮುದಾಯ ಶೌಚಾಲಯ, ಸರ್ಕಾರಿ ಶಾಲಾ ಶೌಚಾಲಯಗಳನ್ನು ಮತ್ತು ತೆರೆದ ಚರಂಡಿಗಳನ್ನೂ ವಾರಕ್ಕೊಮ್ಮೆ ಗ್ರಾಪಂ ಸಿಬ್ಬಂದಿ ಸ್ವತ್ಛತೆ ನಿರ್ವಹಿಸುತ್ತಿದ್ದಾರೆ.
ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ: ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಅಂಗಡಿವಾಡಿ ಕೇಂದ್ರಗಳಿದ್ದು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಮಗುವಿನಲ್ಲಿ ಅಪೌಷ್ಟಿಕತೆ ಕಂಡು ಬಂದಿಲ್ಲ. ಸರ್ಕಾರ ನಿಗದಿಪಡಿಸಿರುವಂತೆ ಮಕ್ಕಳ ಬೆಳವಣಿಗೆಯಿದೆ. ಗ್ರಾಪಂ ವ್ಯಾಪ್ತಿಯಲ್ಲಿ 326 ಜನರು ಬಿಪಿ ಮತ್ತು ಮದುಮೇಹದಿಂದ ಬಳಲುತ್ತಿದ್ದು, ಗ್ರಾಮದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಪ್ರತಿ ನಿತ್ಯ ಎರಡು ದಿನಕ್ಕೊಮ್ಮೆ ಆರೋಗ್ಯ ವಿಚಾರಿಸುತ್ತಾರೆ. ಅಗತ್ಯವುಳ್ಳವರಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಇಂತಹ ಸಣ್ಣಪುಟ್ಟ ಕೆಲಸ ಕಾರ್ಯಗಳಿಂದಲೇ ನಾಡಿನ “ಹೆಲ್ದಿ ವಿಲೇಜ್’ ಪಟ್ಟಿಯಲ್ಲಿ 2ನೇ ಸ್ಥಾನ ಪಡಿದೆ.
“ಐಕಾನ್ ವೀಕ್’
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯದಿಂದ ಏ.11 ರಿಂದ 17ರವರೆಗೆ ದೆಹಲಿಯಲ್ಲಿ ನಡೆದ “ಐಕಾನ್ ವೀಕ್’ ವಿವಿಧ ವಲಯಗಳಲ್ಲಿ ಗಣನೀಯ ಸಾಧನೆ ತೋರಿದ ಗ್ರಾಪಂಗಳ 3 ನಿಮಿಷಗಳ ವಿಡಿಯೋ ಪ್ರದರ್ಶಿಸಲಾಯಿತು. ಅದರಲ್ಲಿ ಬೆಳಗಾವಿ ಜಿಲ್ಲೆಯ ಶಿರಗುಪ್ಪಿ ಮತ್ತು ತಾಲೂಕಿನ ಬಿಂಕದಕಟ್ಟಿ ಗ್ರಾಪಂಗಳನ್ನು ಹೆಲ್ದಿ ವಿಲೇಜ್ ಎಂದು ಗುರುತಿಸಿ, ಗ್ರಾಪಂ ಕೈಗೊಂಡ ಕ್ರಮಗಳ ಯಶೋಗಾಥೆ ಬಿತ್ತರಿಸಲಾಯಿತು.
ಸರ್ಕಾರದ ಸೇವೆ ಮತ್ತು ಸೌಲಭ್ಯ ಸಮರ್ಪಕವಾಗಿ ಜನರಿಗೆ ತಲುಪಿಸಲು ಗ್ರಾಪಂ ಅಗತ್ಯ ಕ್ರಮ ಕೈಗೊಂಡಿದೆ. ಗ್ರಾಪಂ ಕೈಗೊಳ್ಳುವ ಸುಧಾರಣಾ ಕ್ರಮಗಳಿಗೆ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅವರ ಸಹಕಾರದಿಂದಲೇ ಇಂದು ಐಕಾನ್ ವೀಕ್ ಗೆ ಗ್ರಾಪಂ ಆಯ್ಕೆಯಾಗಿದೆ. ಆರೋಗ್ಯಕರ ಗ್ರಾಮ ಎಂದು ಕೇಂದ್ರ ಸರ್ಕಾರ ಮುದ್ರೆ ಒತ್ತಿರುವುದು ಹೆಮ್ಮೆಯಾಗಿದೆ. -ರಹಮತ್ ಬಾನು ಕಿರೇಸೂರ, ಗ್ರಾಪಂ ಪಿಡಿಒ
–ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ
ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ
Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್
Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ