ಮದುವೆಯಾಗುವುದಾಗಿ ನಂಬಿಸಿ ಹಣ ಪೀಕಿ ಶಿಕ್ಷಕಿಗೆ ವಂಚನೆ
Team Udayavani, Jun 10, 2021, 6:24 PM IST
ಮುಂಡರಗಿ: ಪಟ್ಟಣದ ಖಾಸಗಿ ಶಾಲೆ ಶಿಕ್ಷಕಿಗೆ ಫೇಸ್ಬುಕ್ನಲ್ಲಿ ಪರಿಚಯವಾದ ಯುವನೋರ್ವ ಮದುವೆಯಾಗುವುದಾಗಿ ನಂಬಿಸಿ ಆರೋಗ್ಯ ಸಮಸ್ಯೆ ಹೇಳಿ 7 ಲಕ್ಷಕ್ಕಿಂತಲೂ ಹೆಚ್ಚು ಹಣ ಪಡೆದು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ: ಮುಂಡರಗಿ ಪಟ್ಟಣದ ಖಾಸಗಿ ಶಾಲೆ ಶಿಕ್ಷಕಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು ಕೋಡಿಮಗ್ಗಿಯ ನೇತಾಜಿ ಹನಮಂತಪ್ಪ ಮದ್ದನೇರ ಎಂಬಾತ ಫೋನ್ ಮೂಲಕ ಮಾತನಾಡುತ್ತಿದ್ದ.
ಸೆಪ್ಟೆಂಬರ್, 2019ರಲ್ಲಿ ಪಟ್ಟಣದ ಖಾಸಗಿ ಶಾಲೆ ಆವರಣದಲ್ಲಿ ಶಿಕ್ಷಕಿಯನ್ನು ಭೇಟಿಯಾದ ಯುವಕ ಮದುವೆಯಾಗುವುದಾಗಿ ಶಿಕ್ಷಕಿಯನ್ನು ನಂಬಿಸಿ, ನಮ್ಮ ಮನೆ ಜನರಿಗೆ ಆರೋಗ್ಯದ ಸಮಸ್ಯೆಯಿದೆ ಎಂದು ಹೇಳಿ 7 ಲಕ್ಷ ರೂ. ಪೀಕಿದ್ದಾನೆ. ಶಿಕ್ಷಕಿ ಕೊಟ್ಟ ಹಣ ವಾಪಾಸ್ ಕೇಳಿದಾಗ ಮತ್ತು ಮದುವೆಯಾಗುವ ಬಗ್ಗೆ ಕೇಳಿದಾಗ ಯುವಕ ಹಣವನ್ನು ನೀಡದೇ ಜಾತಿ ನಿಂದನೆ ಮಾಡಿದ್ದಾನೆ. ಅಲ್ಲದೇ ಶಿಕ್ಷಕಿ ಸಹೋದರ ಮತ್ತು ಮತ್ತೋರ್ವ ವ್ಯಕ್ತಿ ಯುವಕನ ಗ್ರಾಮಕ್ಕೆ ಹೋಗಿ ಹಣ ವಾಪಾಸ್ ಮತ್ತು ಮದುವೆ ಬಗ್ಗೆ ಕೇಳಿದಾಗಲೂ ಯುವಕ ನಿರಾಕರಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೋಸ ವಂಚನೆ ಮತ್ತು ಪರಿಶಿಷ್ಟ ಪಂಗಡದ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿ ಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.