ಶಾಶ್ವತ ಪರಿಹಾರ ನೀಡಿ ಸಾಹೇಬ್ರೆ..
•ವಾಸನ-ಲಖಮಾಪುರ ಗ್ರಾಮಸ್ಥರ ಗೋಳು•ಇನ್ನೂ ಕುಸಿಯುತ್ತಿದೆ ಮನೆ ಗೋಡೆ•ಸಹಜ ಸ್ಥಿತಿಯತ್ತ ಜನಜೀವನ
Team Udayavani, Aug 25, 2019, 10:50 AM IST
ಗದಗ: ಮಲಪ್ರಭೆ ನದಿಯಿಂದ ಕೂಗಳತೆ ದೂರದಲ್ಲಿರುವ ವಾಸನ ಹಾಗೂ ಲಖಮಾಪುರ ಗ್ರಾಮಗಳಿಗೆ ಮಳೆಗಾಲದಲ್ಲಿ ಸದಾ ಪ್ರವಾಹ ಭೀತಿ ಕಾಡುತ್ತಿರುತ್ತದೆ. ಈ ಬಾರಿ ಉಂಟಾಗಿರುವ ಪ್ರವಾಹದಿಂದ ಬೆಚ್ಚಿ ಬಿದ್ದಿರುವ ಲಖಮಾಪುರದ ಜನತೆ ಗ್ರಾಮ ಸ್ಥಳಾಂತರಕ್ಕಾಗಿ ಗೋಗರೆಯುತ್ತಿದ್ದಾರೆ.
ಹೌದು. ನರಗುಂದ ತಾಲೂಕಿನ ವಾಸನ ಗ್ರಾಪಂ ವ್ಯಾಪ್ತಿಯ ಬೆಳ್ಳೇರಿ ಹೊರತಾಗಿ ವಾಸನ ಮತ್ತು ಲಖಮಾಪುರ ಗ್ರಾಮಗಳು ಈ ಬಾರಿ ನೆರೆ ಹಾವಳಿಗೆ ಜರ್ಜರಿತವಾಗಿದೆ. ಪ್ರವಾಹದ ನೀರಿನ ಮಟ್ಟ ಇಳಿದು ಬರೋಬ್ಬರಿ ಒಂದು ವಾರದ ಕಳೆದರೂ ಲಖಮಾಪುರದಲ್ಲಿ ಅಲ್ಲೊಂದು ಇಲ್ಲೊಂದು ಮನೆಯ ಗೋಡೆಗಳು ಕುಸಿಯುತ್ತಲೇ ಇವೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಪುನರ್ವಸತಿಯೇ ಕಗ್ಗಂಟು: ಈ ಹಿಂದೆ 2007ರಲ್ಲಿ ಒಂದು ದಿನ ಮಾತ್ರ ನೆರೆ ಆವರಿಸಿತ್ತು. ಬಳಿಕ 2009ರಲ್ಲೂ ಭೀಕರ ಪ್ರವಾಹದ ಅಲೆಗಳಿಗೆ ಹತ್ತಾರು ಮನೆಗಳು ಕೊಚ್ಚಿ ಹೋಗಿದ್ದವು. ಆಗಲೂ ಸ್ಥಳೀಯ ಶಾಸಕರಾಗಿದ್ದ ಸಿ.ಸಿ. ಪಾಟೀಲರು ಗ್ರಾಮಸ್ಥ ಸ್ಥಳಾಂತರಕ್ಕೆ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ತಮ್ಮ ಜಮೀನುಗಳು ದೂರವಾಗುತ್ತದೆ ಎಂಬ ಕಾರಣದಿಂದ ಸ್ಥಳೀಯರು ನಿರಾಸಕ್ತಿ ತೋರಿದ್ದರು. ಪರಿಣಾಮ 2000ರಲ್ಲಿ ನಡೆದಿದ್ದ ಪುನರ್ವಸತಿ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಆದರೆ, ಇತ್ತೀಚಿನ ಯಮ ಸ್ವರೂಪಿ ಪ್ರವಾಹ ಅಪ್ಪಳಿಸಿದ್ದರಿಂದ ಸಾಕಷ್ಟು ಹಾನಿಯುಂಟು ಮಾಡುವುದರೊಂದಿಗೆ ಸ್ಥಳೀಯರ ಆತ್ಮಾವಲೋಕನಕ್ಕೆ ಕಾರಣವಾಗಿದೆ.
ಗ್ರಾಮ ಸ್ಥಳಾಂತರಕ್ಕೆ ತಾವೇ ತೋರಿದ್ದ ಅಸಡ್ಡೆಗೆ ಇಂದು ಪಶ್ಚಾತವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಅದರೊಂದಿಗೆ ಆದಷ್ಟು ಬೇಗ ಗ್ರಾಮವನ್ನು ಸ್ಥಳಾಂತರಿಸಿ, ಪ್ರವಾಹ ಪರಿಸ್ಥಿತಿಯಿಂದ ಶಾಶ್ವತವಾಗಿ ಮುಕ್ತಗೊಳಿಸುವಂತೆ ಲಖಮಾಪುರದ ಜನತೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಎದುರು ಅಂಗಲಾಚುತ್ತಿದ್ದಾರೆ.
ಅದರೊಂದಿಗೆ ತಮ್ಮ ಜಮೀನುಗಳಿಗೆ ಹತ್ತಿರವಿರುವಂತೆ ನರಗುಂದ ತಾಲೂಕು ವ್ಯಾಪ್ತಿಯಲ್ಲೇ ರಾಮನಗರ ಮಾರ್ಗದಲ್ಲಿ ನವ ಗ್ರಾಮ ಹಾಗೂ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಬೆಳ್ಳೇರಿ ಸಮೀಪದಲ್ಲಿ ಪುನರ್ವಸತಿ ಕಲ್ಪಿಸುವ ಅಧಿಕಾರಿಗಳ ಮಾತಿಗೆ ಜನರು ಒಪ್ಪುತ್ತಿಲ್ಲ. ಹೀಗಾಗಿ ಸ್ಥಳ ಗೊತ್ತುಪಡಿಸುವುದನ್ನು ಗ್ರಾಮಸ್ಥರಿಗೇ ಬಿಡಲಾಗಿದೆ ಎನ್ನಲಾಗಿದೆ.
ಆದರೆ, ವಾಸನದ ಜನರ ಪುನರ್ವಸತಿಗೆ ಈ ಸಮಸ್ಯೆಯಿಲ್ಲ. ಈಗಾಗಲೇ ಗ್ರಾಮದ ಹೊರವಲಯದಲ್ಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಲಾಗಿದೆ. ಅದೇ, ಭಾಗದಲ್ಲಿ ಉಳಿದಿರುವ ಜಾಗೆಯಲ್ಲಿ ಮತ್ತಷ್ಟು ಮನೆಗಳಿಗೆ ನಿರ್ಮಿಸಿ, ಅಗತ್ಯವಿರುವವರಿಗೆ ಹಂಚಿಕೆ ಮಾಡಿದರಾಯ್ತು ಎಂಬುದು ಸ್ಥಳೀಯ ಆಡಳಿತದ ಲೆಕ್ಕಾಚಾರ.
ಸ್ವಂತ ಮನೆಗಳತ್ತ ಸಂತ್ರಸ್ತರ ಹೆಜ್ಜೆ: ಈ ನಡುವೆ ಮಲಪ್ರಭಾ ನದಿ ಪ್ರವಾಹ ಇಳಿಯುತ್ತಿದ್ದಂತೆ ನೆರೆ ಸಂತ್ರಸ್ತರು ಮೂಲ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಗ್ರಾಮಕ್ಕೆ ನೀರು ನುಗ್ಗಿದಾಗ ಸ್ಥಿತಿವಂತರು ತಮ್ಮ ಚಕ್ಕಡಿ, ಟ್ರ್ಯಾಕ್ಟರ್ಗಳಲ್ಲಿ ಅಗತ್ಯ ವಸ್ತುಗಳು, ದವಸ- ಧಾನ್ಯ ಹಾಗೂ ದಿನಬಳಕೆ ವಸ್ತುಗಳೊಂದಿಗೆ ಊರು ತೊರೆದಿದ್ದರು. ಇದೀಗ ಅವೆಲ್ಲ ಸಾಮಗ್ರಿ ಹಾಗೂ ದಾನಿಗಳು ನೀಡಿದ ನೆರವನ್ನೂ ಹೊತ್ತು ತಮ್ಮ ಮನೆಗಳಿಗೆ ಬರುತ್ತಿದ್ದಾರೆ. ಇನ್ನೂ, ಕೆಲವರು ಐದಾರು ದಿನಗಳ ಹಿಂದೆಯೇ ಮನೆ ಸೇರಿಕೊಂಡಿದ್ದು, ಗ್ರಾಮದಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಪ್ರವಾಹ ಸಂತ್ರಸ್ತರಿಗಾಗಿ ಆರಂಭಿಸಿದ್ದ ವಾಸನದ ಪರಿಹಾರ ಕೇಂದ್ರದಲ್ಲಿ ಜನರ ಸಂಖ್ಯೆ ಇಳಿಮುಖವಾಗುತ್ತಿದೆ. ಮನೆ ಕುಸಿದು ನೆಲೆ ಕಳೆದುಕೊಂಡವರು ಮಾತ್ರ ಪರಿಹಾರ ಕೇಂದ್ರದಲ್ಲಿ ಹೊಟ್ಟೆತುಂಬಿಸಿಕೊಂಡು, ತಾಟಪಾಲ್ನಿಂದ ನಿರ್ಮಿಸಿ ಕೊಂಡಿರುವ ಟೆಂಟ್ಗಳಲ್ಲೇ ವಾಸ ಮುಂದುವರಿಸಿದ್ದಾರೆ.
ಲಖಮಾಪುರದ ಜನತೆಗಾಗಿ ಬೆಳ್ಳೇರಿಯ ಕೃಷಿ ಫಾರ್ಮ್ನಲ್ಲಿ ಆರಂಭಿಸಿದ್ದ ಪರಿಹಾರ ಕೇಂದ್ರದಲ್ಲಿ ಜನರ ಕೊರತೆಯಿಂದಾಗಿ ಇತ್ತೀಚೆಗೆ ಬಾಗಿಲು ಮುಚ್ಚಿದೆ. ಲಖಮಾಪುರದ ಬಹುತೇಕ ಮನೆಗಳು ಸುಸ್ಥಿತಿಯಲ್ಲಿರುವುದರಿಂದ ನೆರೆ ಸಂತ್ರಸ್ತರು ತಮ್ಮ ಮೂಲ ಮನೆಗಳಿಗೆ ಹಿಂದಿರುಗಿದ್ದಾರೆ. ನೆಲೆ ಇಲ್ಲದವರು ತಮ್ಮ ಹೊಲದಲ್ಲಿರುವ ತೋಟದ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ದಾನಿಗಳಿಂದ ಹರಿದು ಬಂದ ಅಕ್ಕಿ, ಹಿಟ್ಟು, ಮತ್ತಿತರೆ ದವಸ ಧಾನ್ಯಗಳನ್ನೇ ಬಳಸಿಕೊಂಡು ದಿನ ದೂಡುತ್ತಿದ್ದಾರೆ.
ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಚಿಂತನೆ: ಸದ್ಯ ವಾಸನ ಹಾಗೂ ಲಖಮಾಪುರದ ನೆರೆ ಸಂತ್ರಸ್ತರು ತಾಟಪತ್ರಿ ಹಾಗೂ ಪ್ಲಾಸ್ಟಿಕ್ ಚೀಲಗಳಿಂದ ಸಿದ್ಧಗೊಳಿಸಿದ ಪರದೆಯಿಂದ ತಾತ್ಕಾಲಿಕವಾಗಿ ಟೆಂಟ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಳೆದ 15 ದಿನಗಳಿಂದ ಗಾಳಿ, ಮಳೆ ಎನ್ನದೇ ಅದರಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಜನರ ಮನವಿ ಮೇರೆಗೆ ವಾಸನದಲ್ಲಿ ಟಿನ್ಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಬೇಕು ಎಂಬುದು ವಸತಿ ರಹಿತರ ಮನವಿ.
•ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ