ಪ್ರತಿ ಮನೆಗೂ ಶುದ್ಧ ಕುಡಿವ ನೀರು : ಶಾಸಕ ರಾಮಣ್ಣ ಲಮಾಣಿ
ಉಂಡೇನಹಳ್ಳಿಯಲ್ಲಿ ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ
Team Udayavani, Apr 19, 2021, 8:49 PM IST
ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಜಲ ಜೀವನ್ ಮಿಷನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ರವಿವಾರ ತಾಲೂಕಿನ ಉಂಡೇನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಸುಮಾರು 67 ಲಕ್ಷ ರೂ. ಮೊತ್ತದ ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ಗ್ರಾಮಗಳ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಭರದಿಂದ ಸಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜನರ ಸಹಭಾಗಿತ್ವದಲ್ಲಿ ಯೋಜನೆ ಸಾಕಾರಗೊಳ್ಳುವುದು. ನೀರು ಅತ್ಯಮೂಲ್ಯವಾಗಿದ್ದು, ಜನರು ನೀರಿನ ಹಿತಮಿತವಾದ ಬಳಕೆ ಮಾಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಜಿ.ಪಂ ಸದಸ್ಯ ಎಸ್.ಪಿ. ಬಳಿಗಾರ, ಗ್ರಾ.ಪಂ. ಅಧ್ಯಕ್ಷೆ ನೀಲವ್ವ ಕಟಗಿ, ಉಪಾಧ್ಯಕ್ಷ ಚಂದ್ರಶೇಖರ ಈಳಿಗೇರ, ಮಹಾಂತೇಶ ಲಮಾಣಿ, ಮಧುಮಾಲತಿ ಈಳಿಗೇರ, ಪುಂಡಲೀಕ ಲಮಾಣಿ, ಡಿ.ವೈ. ಹುನಗುಂದ, ತಾ.ಪಂ. ಅಧ್ಯಕ್ಷ ಪರಶುರಾಮ ಇಮ್ಮಡಿ, ಟೋಪಣ್ಣ ಲಮಾಣಿ, ಮಲ್ಲಪ್ಪ ಸೊರಟೂರ, ಸೋಮಯ್ಯ ಹಿರೇಮಠ ನೀಲಪ್ಪ, ಬಸವರಾಜ ಇಟಗಿ, ಶಿವಲಿಂಗಯ್ಯ ಕಳಸದಮಠ, ರುದ್ರಪ್ಪ ಲಮಾಣಿ, ಮಹೇಶ ಲಮಾಣಿ, ಸಂತೋಷ ಲಮಾಣಿ ಸೇರಿ ಅನೇಕರಿದ್ದರು.