ಕೋವಿಡ್ ನಿಯಮ ಮರೆತ ಜನ: ಎಲ್ಲೆಲ್ಲೂ ಜನಜಾತ್ರೆ
Team Udayavani, Apr 21, 2021, 7:14 PM IST
ಗಜೇಂದ್ರಗಡ: ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ, ಕೋಟೆ ನಾಡಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಸಾರ್ವಜನಿಕರು ಗುಂಪು ಗುಂಪಾಗಿ ಮೈಮರೆತು ಓಡಾಡುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.
ಗಜೇಂದ್ರಗಡ ತಾಲೂಕಿನಲ್ಲಿ ಕೊರೊನಾ 2ನೇ ಅಲೆಯ ಪ್ರಕರಣಗಳು ದಾಖ ಲಾಗದಿದ್ದರೂ ಜನರು ಜಾಗೃತರಾಗದೇ ಮೈಮರೆತಿದ್ದಾರೆ. ಗ್ರಾಮೀಣ ಭಾಗ ದಿಂದ ವ್ಯಾಪಾರ ವಹಿವಾಟಿಗೆ ಆಗಮಿಸುವ ಜನರು ಮಾರುಕಟ್ಟೆಯಲ್ಲಿ ಗಿಜಿಗುಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹಾಗೆಯೇ ಓಡಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ವಕ್ರದೃಷ್ಟಿ ತಾಗಿದರೂ ತಾಲೂಕಿನಲ್ಲಿ ಈವರೆಗೂ ಯಾವೊಂದು ಪ್ರಕರಣಗಳು ಕಂಡು ಬಂದಿಲ್ಲ. ಇದರಿಂದ ನಿಟ್ಟುಸಿರು ಬಿಟ್ಟಿರುವ ಕೋಟೆ ನಾಡಿನ ಜನತೆ ನಿರ್ಭೀತಿಯಿಂದ ತಮ್ಮ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಗ್ರೀನ್ ಝೋನ್ನಲ್ಲಿ ಕಾಣಿಸಿಕೊಂಡ ಪಟ್ಟಣದ ಜನತೆ ಜಾಗೃತಿ ವಹಿಸದಿದ್ದರೆ ಪ್ರಕರಣ ದಾಖಲಾದರೂ ಆಶ್ಚರ್ಯವಿಲ್ಲ.
ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ, ಗೋವಾ ರಾಜ್ಯಗಳಳಿಗೆ ಗುಳೆ ಹೋಗಿದ್ದ ಜನರು ತಾಲೂಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಸೊಂಕಿತ ಪ್ರದೇಶಗಳಿಂದ ನಿತ್ಯ ಹಲವಾರು ಜನ ತಂಡೋಪ ತಂಡವಾಗಿ ಹಳ್ಳಿಗಳಿಗೆ ಆಗಮಿಸುತ್ತಿದ್ದಾರೆ. ಇದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.